ADVERTISEMENT

’ಹಲೋ ಕಂದಾಯ ಸಚಿವರೇ: ಸಂಪರ್ಕ ಸಿಗುತ್ತಿಲ್ಲ’

ಮಹತ್ವಕಾಂಕ್ಷಿ ಯೋಜನೆಯಲ್ಲಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 2:53 IST
Last Updated 29 ಜೂನ್ 2022, 2:53 IST
ಫಲಾನುಭವಿ ಗಂಗಮ್ಮ ಸಹಾಯವಾಣಿಗೆ ಕರೆ ಮಾಡಲು ಯತ್ನಿಸುತ್ತಿರುವುದು
ಫಲಾನುಭವಿ ಗಂಗಮ್ಮ ಸಹಾಯವಾಣಿಗೆ ಕರೆ ಮಾಡಲು ಯತ್ನಿಸುತ್ತಿರುವುದು   

ಬೀರೂರು: ಫಲಾನುಭವಿಗಳು ಸುಲಭವಾಗಿ ಪಿಂಚಣಿ ಪಡೆಯಲು ಸರ್ಕಾರ ಆರಂಭಿಸಿದ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಸದಾ ಕಾರ್ಯನಿರತವಾಗಿದ್ದು, ಜನ ನಿರಾಸೆ ಎದುರಿಸುತ್ತಿದ್ದಾರೆ.

ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಲು ಜನರು ಕಚೇರಿಗೆ ಅಲೆಯಬೇಕಿಲ್ಲ ಎನ್ನುವ ಉದ್ದೇಶದಿಂದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕೇವಲ 72 ಗಂಟೆಯೊಳಗೆ ಫಲಾನುಭವಿಗಳಿಗೆ ನೀಡುವ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿತ್ತು. ಆದರೆ, ಈ ಸಹಾಯವಾಣಿ ‘155245'ಗೆ ಎಷ್ಟು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ ಎನ್ನುವುದು ಫಲಾನುಭವಿಗಳ ಅಳಲು.

ಇಲ್ಲಿನ ಗಂಗಮ್ಮ ಮಾತನಾಡಿ, ‘ ಸಹಾಯವಾಣಿಗೆ ಕಳೆದ 15 ದಿನಗಳಿಂದ ಎಷ್ಟು ಬಾರಿ ಫೋನ್ ಮಾಡಿದರೂ ತಲುಪಲು ಸಾಧ್ಯವಾಗುತ್ತಿಲ್ಲ. ನಾಡ ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಬೀರೂರು ನಾಡಕಚೇರಿ ಉಪತಹಸೀಲ್ದಾರ್ ಬಿ.ವಿ.ರವಿಕುಮಾರ್ ಪ್ರತಿಕ್ರಿಯಿಸಿ, ‘ಇಡೀ ರಾಜ್ಯಕ್ಕೆ ಒಂದೇ ಸರ್ವರ್ ಇರುವುದರಿಂದ ಕಾರ್ಯ ನಿರತವಾಗಿದೆ ಎಂದು ಉತ್ತರ ಬರುತ್ತಿರಬಹುದು. ನಮ್ಮಲ್ಲಿ ಅರ್ಜಿ ಸಲ್ಲಿಸಲು ಬಂದ ಫಲಾನುಭವಿಗಳಿಂದ ಎಂದಿನಂತೆ ಅರ್ಜಿ ಸ್ವೀಕರಿಸಿ ಅರ್ಹರಿಗೆ ಮಂಜೂರಾತಿ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.