
ಚಿಕ್ಕಮಗಳೂರು: ರಸ್ತೆಯುದ್ದಕ್ಕೂ ಗುಂಡಿಗಳ ದರ್ಬಾರು, ಪ್ರಾಣ ಕೈಯಲ್ಲಿಡಿದು ಸಂಚಾರ ಮಾಡುವ ವಾಹನ ಸವಾರರು, ಬೈಪಾಸ್ ರಸ್ತೆಯಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ ಇದು.
ದೀಪಾ ನರ್ಸಿಂಗ್ ರಸ್ತೆಯಿಂದ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗಿದರೆ ಹೊಂಡ, ಗುಂಡಿಗಳ ದರ್ಶನವಾಗುತ್ತದೆ. ಭಾರಿ ಗಾತ್ರದ ಗುಂಡಿಗಳ ನಡುವೆ ವಾಹನ ಸಂಚಾರವೇ ದುಸ್ತರವಾಗಿದೆ. ಮಳೆ ಆರಂಭದಲ್ಲಿ ಕಾಣುತ್ತಿದ್ದ ಒಂದೆರಡು ಗುಂಡಿಗಳು ಈಗ ದೊಡ್ಡದಾಗಿ ಬಾಯ್ದೆರೆದುಕೊಂಡಿವೆ.
ಕಳೆದ ವಾರ ಸುರಿದ ಭಾರಿ ಮಳೆಗೆ ಮತ್ತಷ್ಟು ಗುಂಡಿಗಳು ಹೆಚ್ಚಾಗಿ ಗುಂಡಿಗಳ ನಡುವೆ ರಸ್ತೆ ಹುಡುಕುವಂತಾಗಿದೆ. ಬೈಕ್ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಸ್ಥಿತಿ ಇದೆ. ಈ ರಸ್ತೆ ಮೂಲಕ ಶಂಕರಪುರ ಮಾರ್ಗವಾಗಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ಮಾರ್ಗವಾಗಿ ಶಂಕರಪುರ, ದಂಟರಮಕ್ಕಿ, ಪೊಲೀಸ್ ಬಡಾವಣೆ, ವಿಶ್ವಾಸನಗರ, ಚಿಕ್ಕ ಕುರುಬರಹಳ್ಳಿ, ದೊಡ್ಡ ಕುರುಬರಹಳ್ಳಿ ಹಾಗೂ ಕಲ್ಯಾಣನಗರ ಬೈಪಾಸ್ ರಸ್ತೆಗೆ ತಲುಪಬಹುದು.
ಶಾಲಾ ವಾಹನ, ಬೈಕ್, ಕಾರು ಸೇರಿದಂತೆ ನಿತ್ಯ ಸಾವಿರಾರು ವಾಹನ ಸವಾರರು ನಗರಕ್ಕೆ ಇದೇ ಮಾರ್ಗವಾಗಿ ಸಂಚಾರ ಮಾಡಬೇಕು. ಪ್ರಮುಖ ಸಂಪರ್ಕ ರಸ್ತೆ ಇದಾಗಿದ್ದು, ಜನ ಪರದಾಡುತ್ತಿದ್ದಾರೆ.
ಮಳೆ ಬಂದರೆ ಬೈಕ್ಗಳಲ್ಲಿ ಸಂಚಾರ ಮಾಡುವುದೇ ಕಷ್ಟ. ನೀರು ನಿಂತರೆ ಗುಂಡಿಗಳು ಕಾಣುವುದಿಲ್ಲ. ಕೂಡಲೇ ರಸ್ತೆ ಗುಂಡಿ ಮುಚ್ಚಿ ಸರಿಪಡಿಸಬೇಕು.ಮೋಹನ್, ಬೈಕ್ ಸವಾರ
ಮಳೆ ಸುರಿದರೆ ರಸ್ತೆ ಗುಂಡಿಗಳಲ್ಲಿ ಸಂಪೂರ್ಣ ನೀರು ತುಂಬಿಕೊಂಡು ಗುಂಡಿಗಳು ಕಾಣದಂತಾಗುತ್ತವೆ. ಈ ಸಂದರ್ಭದಲ್ಲಿ ಬೈಕ್ ಸವಾರರು ಗುಂಡಿಯೊಳಗೆ ಬಿದ್ದು ಎದ್ದು ಹೋಗುವುದು ಸಾಮಾನ್ಯ ಎಂಬಂತಾಗಿದೆ. ಇನ್ನು ಕತ್ತಲಾದರೆ ಈ ಮಾರ್ಗದ ಸಂಚಾರವೇ ಕಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು.
ಕಟ್ಟಡ ತ್ಯಾಜ್ಯವನ್ನು ರಸ್ತೆ ಗುಂಡಿಗಳಿಗೆ ಸುರಿದು ಗುಂಡಿಗಳನ್ನು ಮುಚ್ಚುತ್ತಾರೆ. ಮತ್ತೆ ಕೆಲ ದಿನಗಳಂತೆ ಗುಂಡಿಗಳು ಮತ್ತೆ ಅದೇ ಅಪಾಯದ ಸ್ಥಿತಿಗೆ ತಲುಪುತ್ತವೆ. ಕೂಡಲೇ ಸಮಸ್ಯೆ ಸರಿಪಡಿಸಬೇಕು. ಮಳೆ ಕಡಿಮೆಯಾಗಿದ್ದು, ಈಗಲಾದರೂ ಗುಂಡಿ ಮುಚ್ಚಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ನಿವಾಸಿಗಳ ಒತ್ತಾಯ.
ರಸ್ತೆ ಬದಿ ಕಸದ ರಾಶಿ
ರಸ್ತೆ ಬದಿಯಲ್ಲಿ ಉದ್ದಕ್ಕೂ ಅಲ್ಲಲ್ಲಿ ಕಸ ಸುರಿಯಲಾಗಿದೆ. ಕಟ್ಟಡ ಕಸವನ್ನು ಸುರಿದು ಗುಡ್ಡೆಗಳನ್ನು ನಿರ್ಮಿಸಲಾಗಿದೆ. ಪಟಾಕಿ ಮೈದಾನದ ಸ್ಥಳಗಳಲ್ಲಿ ಮಾತ್ರ ನಗರಸಭೆ ಪಟಾಕಿ ಮಳಿಗೆ ಸ್ಥಾಪಿಸಲು ಸ್ವಚ್ಛ ಮಾಡಿದೆ. ಉಳಿದ ಕಸವನ್ನು ಹಾಗೆಯೇ ಉಳಿಸಿದೆ. ಇದರಿಂದ ದುರ್ವಾಸನೆ ಬರುತ್ತಿದೆ. ಕೂಡಲೇ ಸ್ವಚ್ಛಗೊಳಿಸಿ ಕಸ ಹಾಕದಂತೆ ಫಲಕ ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.