ADVERTISEMENT

ಚಿಕ್ಕಮಗಳೂರು | ಕಾಫಿಗೆ ಕೊಳೆ: ಕೃಷಿಗೆ ಬಾರದ ಮಳೆ

ವಿಜಯಕುಮಾರ್ ಎಸ್.ಕೆ.
Published 21 ಜುಲೈ 2025, 3:01 IST
Last Updated 21 ಜುಲೈ 2025, 3:01 IST
ಕಳಸದಲ್ಲಿ ಎರಡು ತಿಂಗಳ ಸತತ ಮಳೆಯಿಂದ ಕಾಫಿ ಕೊಳೆಯುತ್ತಿರುವುದು
ಕಳಸದಲ್ಲಿ ಎರಡು ತಿಂಗಳ ಸತತ ಮಳೆಯಿಂದ ಕಾಫಿ ಕೊಳೆಯುತ್ತಿರುವುದು   

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ನಿರಂತರ ಮಳೆಯಿಂದ ಪ್ಲಾಂಟೇಷನ್‌ ಬೆಳೆಗಳಿಗೆ ಕೊಳೆ ರೋಗದ ಕಾಟ ಎದುರಾಗಿದ್ದರೆ, ಬಯಲು ಸೀಮೆಯು ಮಳೆ ಕೊರತೆ ಎದುರಿಸುತ್ತಿದೆ. ಒಂದೆಡೆ ಬಿತ್ತಿದ್ದ ಬೆಳೆ ನೆಲದಲ್ಲೇ ಹಾಳಾಗಿದ್ದರೆ, ಬಿತ್ತನೆಗಾಗಿ ಕಾದಿರುವ ಜನ ಮಳೆಗಾಗಿ ಮುಗಿಲಿನತ್ತ  ನೋಡುತ್ತಿದ್ದಾರೆ.

ಜಿಲ್ಲೆಯಲ್ಲಿ ಭತ್ತ, ರಾಗಿ, ಜೋಳ, ತೊಗರಿ, ಅಲಸಂದೆ, ಉದ್ದು, ಅವರೆ, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹತ್ತಿ, ಈರುಳ್ಳಿ, ಕೊತ್ತಂಬರಿ ಸೇರಿ 90 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. 17,138 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ 19ರಷ್ಟು ಮಾತ್ರ ಸಾಧನೆಯಾಗಿದೆ. ಕಳೆದ ವರ್ಷ ಈ ವೇಳೆಗೆ 39,924 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು.

ಕಡೂರು, ಅಜ್ಜಂಪುರ, ತರೀಕೆರೆ ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ಬಿತ್ತನೆಗೆ ತೊಡಕಾಗಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ಕೂಡ ಮಳೆ ಕೊರತೆಯಿಂದ ನೆಲದಿಂದ ಮೇಲೆ ಎದ್ದಿದೆ. ಕಡೂರು ತಾಲ್ಲೂಕಿನಲ್ಲಿ 53,075 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಿದ್ದು, 7,237 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.

ADVERTISEMENT
ಚಿಕ್ಕಮಗಳೂರು ತಾಲ್ಲೂಕಿನ ನರಸೀಪುರದಲ್ಲಿ ಬೆಳೆ ಹಾಳಾಗಿರುವುದು

ಚಿಕ್ಕಮಗಳೂರು ತಾಲ್ಲೂಕು ಮಲೆನಾಡು ಮತ್ತು ಬಯಲು ಸೀಮೆ ಎರಡನ್ನೂ ಹೊಂದಿದೆ. ಲಕ್ಯಾ, ಅಂಬಳಿ, ಕಳಸಾಪುರ ಹೋಬಳಿಗಳು ಮಳೆ ಕೊರತೆ ಎದುರಿಸುತ್ತಿವೆ. ನಿತ್ಯವೂ ಕವಿಯುವ ಮೋಡದ ನಡುವೆ ಮಳೆ ಬರುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ. ಆದರೆ, ಮಳೆಯ ಸುಳಿವು ಇಲ್ಲವಾಗಿರುವುದು ಅವರನ್ನು ಕಂಗಾಲಾಗಿಸಿದೆ.

ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಬಿತ್ತನೆ ಕಾರ್ಯವೂ ಸಮಯಕ್ಕೆ ಸರಿಯಾಗಿ ಆಗಲಿಲ್ಲ. ಆ ಮಳೆ ಮುಗಿದು ಮುಂಗಾರು ಮಳೆ ಆರಂಭವಾದ ಬಳಿಕ ಈ ಭಾಗಕ್ಕೆ ಮಳೆಯೇ ಬಂದಿಲ್ಲ. ಬಿತ್ತನೆ ಮಾಡಿದ್ದ ಈರುಳ್ಳಿ, ಎಳ್ಳು, ಹೆಸರು, ಉದ್ದು, ಹತ್ತಿ, ಕೊತ್ತಂಬರಿ, ಅಲಸಂದೆ, ಶೇಂಗಾ, ಆಲೂಗಡ್ಡೆ ಬೆಳೆಗಳು ಕಷ್ಟಕ್ಕೆ ಸಿಲುಕಿವೆ.

ರಾಗಿ, ಜೋಳ ಬಿತ್ತನೆಗೆ ಭೂಮಿ ಹದ ಮಾಡಿ ಕಾಯುತ್ತಿದ್ದಾರೆ. ಮಳೆ ಬಂದರೆ ಬಿತ್ತನೆಗೆ ಇನ್ನೂ ಅವಕಾಶ ಇದೆ. ಇಲ್ಲದಿದ್ದರೆ ಈ ವರ್ಷ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಅಜ್ಜಂಪುರ, ತರೀಕೆರೆ ತಾಲ್ಲೂಕಿನಲ್ಲಿ ಅನುಕೂಲ ತಂದ ಮಳೆ:

ತರೀಕೆರೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಲಕ್ಕವಳ್ಳಿ, ಕಸಬಾ, ಲಿಂಗದಹಳ್ಳಿ ಹಾಗೂ ಅಮೃತಾಪುರ ಹೋಬಳಿಗಳನ್ನು ಭಾಗಶಃ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆಯಾಶ್ರಿತ ಬೆಳೆಗಳಾದ ರಾಗಿ, ಮೆಕ್ಕೆಜೋಳ, ಆಲೂಗೆಡ್ಡೆ ಹಾಗೂ ತರಕಾರಿ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಉತ್ತಮ ವಾತವರಣವಿದೆ. ಈ ಬೆಳೆಗಳಿಗೆ ಸದ್ಯದ ವಾತಾವರಣದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣುತ್ತಿಲ್ಲ.

ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಮಹೇಶ್ ಅವರ ತೋಟದಲ್ಲಿ ನೆಲ ಕಚ್ಚಿರುವ ಕಾಳು ಮೆಣಸಿನ ತೆನೆ

ತಾಲ್ಲೂಕಿನ ಅಮೃತಾಪುರ ಹೋಬಳಿಯ ಕುಡ್ಲೂರು, ಶಿವಪುರ, ಕೋರನಹಳ್ಳಿಯ ಕೆಲ ಭಾಗದಲ್ಲಿ ಕೆಲವೊಂದು ಸಲ ಮಳೆಯಾಗದೆ ಬೆಳೆಗೆ ಹಿನ್ನಡೆಯಾಗಿತ್ತಾದರೂ, ನಂತರ ಬಂದ ಹದ ಮಳೆಯಿಂದಾಗಿ ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಅಜ್ಜಂಪುರ: ತಾಲ್ಲೂಕಿನಲ್ಲಿ ಮಳೆ ಉತ್ತಮವಾಗಿದೆ. ಅತಿ ಹೆಚ್ಚಾಗಿಯೂ, ಕಡಿಮೆಯೂ ಆಗದ ಸರಿಸಮ ಮಳೆ, ಬೆಳೆಗೆ ಅನುಕೂಲವಾಗಿದೆ.

ಈರುಳ್ಳಿ, ಶೇಂಗಾ, ಆಲೂಗಡ್ಡೆ, ಮೆಕ್ಕೆಜೋಳ, ಹುರುಳಿ, ರಾಗಿ ಬೆಳೆ ಉತ್ತಮವಾಗಿದೆ. ಈವರೆಗೆ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆ ಒಣಗುತ್ತಿರುವ ಅಥವಾ ಅತಿ ಮಳೆಯಿಂದ ಬೆಳೆ ಕೊಳೆಯುವ ಹಂತಕ್ಕೆ ತಲುಪಿರುವ ಬಗ್ಗೆ ವರದಿಯಾಗಿಲ್ಲ.

ಅಗತ್ಯ ಪ್ರಮಾಣದ ಮಳೆ, ಕೃಷಿಗೆ ಪೂರಕ ವಾತಾವರಣ ಬೆಳೆಗೆ ಅನುಕೂಲವಾಗಿದೆ. ಮುಂಗಾರು ಬೆಳೆ ಉತ್ತಮವಾಗಿವೆ. ರಾಗಿಗೆ ₹4,800 ಬೆಂಬಲ ಬೆಲೆ ಘೋಷಣೆ ಹಿನ್ನೆಲೆ, ಹೆಚ್ಚಿನ ರೈತರು ಮೆಕ್ಕೆಜೋಳ ಬದಲಿಗೆ ರಾಗಿ ಕೃಷಿಯತ್ತ ವಾಲಿದ್ದಾರೆ. ಕಳೆದ ಸಾಲಿಗೆ ಹೋಲಿಸಿದರೆ, ಶೇ 50ರಷ್ಟು ರಾಗಿ ಬಿತ್ತನೆ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ಶಿವಪ್ರಸಾದ್.

ಹೆಚ್ಚಿದ ಮಳೆಗೆ ನೆಲ‌ಕಚ್ಚಿದ ಬೆಳೆ

ಮೂಡಿಗೆರೆ: ಮಳೆಗಾಲ ಪ್ರಾರಂಭವಾಗಿ ಒಂದೂವರೆ ತಿಂಗಳಿನಲ್ಲಿಯೇ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಮೂರು ಪಟ್ಟು ಮಳೆ ಹೆಚ್ಚಾಗಿದೆ. ಮಲೆನಾಡಿನ‌ ಸಂಪ್ರದಾಯಿಕ ಬೆಳೆಗಳಾದ ಕಾಫಿ ಕಾಳು ಮೆಣಸು ಅಡಿಕೆ ಬೆಳೆಗಳು ನೆಲಕಚ್ಚಿವೆ.

ತಾಲ್ಲೂಕಿನ ದೇವರಮನೆ ಗುತ್ತಿ ಭೈರಾಪುರ ಹೊಸ್ಕೆರೆ‌ ಮೇಕನಗದ್ದೆ ಕೋಗಿಲೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಈಗಾಗಲೇ 200 ಇಂಚಿಗಿಂತಲೂ ಹೆಚ್ಚು ಮಳೆಯಾಗಿದ್ದು ತೋಟಗಳಲ್ಲಿ ‌ಶೀತ ಹೆಚ್ಚಳವಾಗಿ ಬೆಳೆಗಳು ಕಳಚಿ ಬೀಳುತ್ತಿವೆ. ಫೆಬ್ರುವರಿ ಅಂತ್ಯದಲ್ಲಿ ಮಳೆಯಾಗಿದ್ದರಿಂದ ಬಹುತೇಕ ಕಾಫಿ ತೋಟಗಳಲ್ಲಿ ಹೂವರಳಿ ಬಂಪರ್ ಬೆಳೆಯ ನಿರೀಕ್ಷೆ ಮೂಡಿಸಿತ್ತು. ಆದರೆ ಒಂದೂವರೆ ತಿಂಗಳಿನಿಂದ ಎಡಬಿಡದೇ ಮಳೆಯಾಗಿರುವುದರಿಂದ ಅರೇಬಿಕಾ ರೋಬಾಸ್ಟಾ ಎರಡೂ ತಳಿಯ ಕಾಫಿಗೆ ಶೀತ ಹೆಚ್ಚಾಗಿ ಉದುರಿದ್ದು ಕೆಲವು ಪ್ರದೇಶಗಳಲ್ಲಿ ಇಡೀ ಗಿಡವೇ ಬರಿದಾಗುವಷ್ಟು ಕಾಫಿ ನೆಲಕ್ಕೆ ಉದುರಿದೆ.

ಮಳೆಯಿಂದ ಕಾಫಿ ಕಾಳು‌ಮೆಣಸಿನ ಗಿಡಗಳಲ್ಲಿ ಎಲೆಗಳು ನೆಲಕಚ್ಚುತ್ತಿರುವುದರಿಂದ ಬೆಳೆಯಷ್ಟೇ ಅಲ್ಲದೇ ಇಡೀ ಗಿಡಗಳೇ ಸಾಯುವ ಸ್ಥಿತಿಗೆ ತಲುಪಿರುವುದು ನಷ್ಟ ಹೆಚ್ಚಾಗಿದೆ. ಮಳೆಯಿಂದ ಅಡಿಕೆ ಇಂಗಾರ ಒಡೆದು ಬಲಿಯುತ್ತಿದ್ದ ಕಾಳುಗಳು ಶೀತ ತಡೆಯಲಾಗದೇ ನೆಲಕ್ಕೆ‌ ಬಿದ್ದಿವೆ.‌

ಸಾಮಾನ್ಯವಾಗಿ ನಿರಂತರ ಮಳೆಯು ಕಾಳು‌ಮೆಣಸಿನ ತೆನೆ‌ ಬಿಡಲು ನೆರವಾಗುತ್ತದೆ. ಈ ಬಾರಿ ಮೇ 23ಕ್ಕೆ ಪ್ರಾರಂಭವಾದ ಮಳೆ‌‌ ನಿರಂತರವಾಗಿ ಸುರಿದಿದ್ದರಿಂದ ಪ್ರಾರಂಭದ 15 ದಿನಗಳ ಮಳೆ ಕಾಳು ಮೆಣಸಿಗೆ ವರದಾನವಾಗಿತ್ತು. ಕಳೆದ ಸಾಲಿನಲ್ಲಿ ಕಾಳು‌ಮೆಣಸಿನ ಫಸಲು ಕಡಿಮೆ ಇದ್ದುದ್ದರಿಂದ ಈ ಬಾರಿ ಬಂಪರ್ ಫಸಲು ಬಿಟ್ಟಿತ್ತು. ಆದರೆ ತೆನೆಯ ಬುಡ ಗಟ್ಟಿಯಾಗಲು ಬಿಸಿಲು ಸಿಗದಂತೆ ಮಳೆ ಸುರಿಯುತ್ತಿರುವುದರಿಂದ ಕಾಳು ಮೆಣಸು ಹೆಚ್ಚಾಗಿ ಉದುರಿದೆ. ರೈತರಿಗೆ ಆರ್ಥಿಕ ಸಂಕಷ್ಟವನ್ನು ಉಂಟು ಮಾಡಿದೆ.

ಮಳೆ ನಿರಂತರವಾದರೆ 350 ಇಂಚು ದಾಟುವ ಆತಂಕ ಎದುರಾಗಿದ್ದು ತೋಟಗಳು ಬೆಳೆಯಿಲ್ಲದೇ ಬರಿದಾಗುವ ಆತಂಕ ಕಾಡುತ್ತಿದೆ. ‘ಈ ಬಾರಿಯಷ್ಟು ಮಳೆ ಈ ಹಿಂದೆ ಸುರಿದಿಲ್ಲ. ಎಲ್ಲಾ ಬೆಳೆಗಳಿಗೂ ಮಳೆ ಹಾನಿ ಮಾಡಿದ್ದು ತೋಟಗಳಲ್ಲಿ ನಿರೀಕ್ಷೆಗೂ ಮೀರಿ ಫಸಲು ನೆಲಕ್ಕೆ ಬಿದ್ದಿದೆ. ಬೆಳೆ ಉಳಿಸಿಕೊಳ್ಳಲು ‌ಮಳೆಯ ನಡುವೆಯೇ ಔಷಧ ಸಿಂಪಡಿಸಿದರೂ ಔಷಧಕ್ಕೆ ಹಾಕಿದ ಬಂಡವಾಳ ನಷ್ಟವಾಗುತ್ತಿದೆಯೇ ಹೊರತು ಬೆಳೆ ಉದುರುವುದು ನಿಂತಿಲ್ಲ. ಈ ಬಾರಿ ಮಳೆಯಿಂದ ಶೇ 20ರಷ್ಟು‌ ಬೆಳೆ ಸಿಕ್ಕರೂ ಅದೃಷ್ಟವೇ ಎನ್ನುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಹಂತೂರಿನ ಪ್ರಗತಿಪರ ಕೃಷಿಕ ಎಚ್.ಜಿ. ಮಹೇಶ್.

ಕಡೂರು ತಾಲೂಕು ಆಸಂದಿ ಗ್ರಾಮದ ಸಮೀಪ ಮಳೆ ಕೊರತೆಯಿಂದ ಬಿತ್ತನೆಯಾಗಿರುವ ಈರುಳ್ಳಿ ಬೆಳೆಗೆ ಸ್ಪ್ರಿಂಕ್ಲರ್ ಮೂಲಕ ನೀರು ಪೂರೈಸುತ್ತಿರುವುದು

ಮಳೆ ಕೊರತೆ: ಬರದ ಆತಂಕ

ಕಡೂರು: ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಮಳೆಯ ಕೊರತೆ ಕಾಡ ತೊಡಗಿದೆ. ಬಿತ್ತನೆ ಆಗಿರುವ ಶೇಂಗಾ ಸೂರ್ಯಕಾಂತಿ ಎಳ್ಳು ಮೆಕ್ಕೆಜೋಳ ಜೋಳ ಮೊದಲಾದ ಬೆಳೆಗಳು ನೀರಿಲ್ಲದೆ ಸೊರಗುತ್ತಿವೆ. ಮಳೆಯ ಕೊರತೆಯಿಂದ ಕೆರೆಕಟ್ಟೆಗಳು ಖಾಲಿಯಾಗಿವೆ. ಜಾನುವಾರುಗಳು ನೀರು ಪರದಾಡುವ ಸ್ಥಿತಿ ಎದುರಾಗುವ ಆತಂಕ ಮೂಡಿದೆ.

ಮಳೆ ಕೊರತೆಯಿಂದಾಗಿ ಹಲವು ಕಡೆ ಇನ್ನೂ ಬಿತ್ತನೆ ಸಂಪೂರ್ಣಗೊಂಡಿಲ್ಲ. ಜುಲೈ ತಿಂಗಳ ಮೂರು ವಾರಗಳು ಕಳೆದರೂ ಮದಗದ ಕೆರೆ ಮತ್ತು ಅಯ್ಯನಕೆರೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಇದರಿಂದಾಗಿ ಅದರ ಸರಣಿ ಕೆರೆಗಳು ಸುತ್ತಮುತ್ತಲ ಕೆರೆಕಟ್ಟೆಗಳು ಕೂಡ ಖಾಲಿ ಬಿದ್ದಿವೆ. ಜುಲೈ ಅಂತ್ಯದವರೆಗೂ ಸೂಕ್ತ ಮಳೆ ಬಾರದಿದ್ದರೆ ಕಡೂರು ಈ ಬಾರಿಯೂ ಬರ ಪರಿಸ್ಥಿತಿ ಎದುರಿಸುವ ಆತಂಕ ಇದೆ.

ಸತತ ಮಳೆ: ತೋಟಗಾರಿಕಾ ಬೆಳೆಗಳಿಗೆ ಹಾನಿ

ಕಳಸ ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳ ಸತತ ಮಳೆ ತೋಟಗಾರಿಕಾ ಬೆಳೆಗಳಿಗೆ ಹಾನಿ ತಂದಿದೆ. ಈ ವರ್ಷ ಈಗಾಗಲೇ 240 ಸೆಂಟಿ ಮೀಟರ್‌ ಮಳೆ ಸುರಿದಿದೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಶೇ 30ಕ್ಕೂ ಹೆಚ್ಚು ಕಾಫಿ ನೆಲಕ್ಕೆ ಉದುರಿದೆ. ಅಡಿಕೆ ಮತ್ತು ಕಾಳುಮೆಣಸು ಫಸಲು ಉಳಿಸಿಕೊಳ್ಳಲು ಔಷಧ ಸಿಂಪಡಣೆ ಮಾಡಲು ಮಳೆ ಅವಕಾಶ ನೀಡುತ್ತಿಲ್ಲ.

ಕಳೆದ 2 ತಿಂಗಳಿಂದ ಬಿಸಿಲನ್ನೇ ಕಾಣದೆ ಕೃಷಿಕರು ಕಂಗಾಲು ಆಗಿದ್ದಾರೆ. ಹೆಚ್ಚಾದ ಮಳೆಯು ಕಾಳು ಮೆಣಸು ಬಳ್ಳಿಗಳಿಗೆ ಕೊಳೆ ರೋಗದ ಭೀತಿ ಮೂಡಿಸಿದೆ. ಅಡಿಕೆ ಮರಗಳಲ್ಲಿ ಅಲ್ಲಲ್ಲಿ ಕೊಳೆ ಬಾಧೆ ಕಂಡು ಬಂದಿದ್ದು ಫಸಲು ಕಡಿಮೆ ಆಗುವ ಭೀತಿ ಇದೆ. ಗಿಡದಲ್ಲಿ ಇರುವ ಕಾಫಿ ಫಸಲು ಉಳಿಸಿಕೊಳ್ಳಲು ಬೆಳೆಗಾರರು ಗೊಬ್ಬರ ಮತ್ತು ಔಷಧಿಯ ಹೆಚ್ಚುವರಿ ಖರ್ಚು ಮಾಡುವ ಅವಿವಾರ್ಯತೆಗೆ ಸಿಲುಕಿದ್ದಾರೆ. ಕೊಪ್ಪದಲ್ಲಿ ಅಧಿಕ ಮಳೆಯಿಂದ ತೊಂದರೆ ಕೊಪ್ಪ: ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಈ ವರ್ಷ ಎಂದಿಗಿಂತ ಒಂದೂವರೆ ಪಟ್ಟು ಹೆಚ್ಚು ಮಳೆಯಾಗಿದೆ.

ಮುಂಗಾರು ಪೂರ್ವ ಮಳೆ ಯಥೇಚ್ಛವಾಗಿ ಸುರಿದಿದ್ದರಿಂದ ಅವಧಿಗೂ ಮುನ್ನ ಈಗಾಗಲೇ ಅನೇಕ ಕಡೆ ತೋಟಗಳಲ್ಲಿ ಕಾಫಿ ಕಾಳು ಬಲಿತಿವೆ. ಮಳೆ ಮುಂದುವರಿದಿದ್ದು ಕೊಳೆ ರೋಗ ಭೀತಿ ಎದುರಿಸುವಂತಾಗಿದೆ. ಅಡಿಕೆಗೆ ಎರಡು ಸುತ್ತಿನ ಔಷಧ ಸಿಂಪಡಿಸುವ ಕೆಲಸವಾಗಿದೆ. ಮಳೆ ಮುಂದುವರಿದರೆ ಕೊಳೆ ರೋಗ ಭಾಧಿಸುತ್ತದೆ. ಭತ್ತ ಬೆಳೆಗೂ ಅನಾನುಕೂಲ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.

ನಿರಂತರ ಮಳೆಯಿಂದಾಗಿ ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕಲು ಅವಕಾಶ ಇಲ್ಲದಂತಾಗಿದೆ. ಗರಿ ಕಟ್ಟಿದ ಕಾಳು ಮೆಣಸು ಉದುರುವ ಪ್ರಮಾಣ ಹೆಚ್ಚಾಗಲಿದೆ. ತಾಲ್ಲೂಕಿನಲ್ಲಿ ರೈತರು ಭತ್ತ ಬೆಳೆಯುವುದು ಕಡಿಮೆ ಮಾಡಿ ಅಡಿಕೆ ಬೆಳೆ ನೆಚ್ಚಿಕೊಂಡಿದ್ದರಿಂದ ಔಷಧ ಸಿಂಪಡಿಸುವವರನ್ನು ಹೊರತುಪಡಿಸಿ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ತೆಂಗಿನ ಕೃಷಿ ಮಾಡುವ ರೈತರು ಮಳೆಗಾಲ ಆರಂಭದಲ್ಲಿ ತೆಂಗಿನ ಕಾಯಿ ಕೀಳಿಸಿದ್ದರಿಂದ ಕಾಯಿಗಳ ಅಭಾವ ತಲೆದೋರಿದೆ. ಈ ಹೊತ್ತಿನಲ್ಲಿ ಬಲಿತ ಕಾಯಿ ಸಿಗುವುದು ಕಡಿಮೆ. ಗೌರಿ ಗಣೇಶ ಹಬ್ಬದ ಸಮಯದಲ್ಲಿ ತೆಂಗಿನ ಕಾಯಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಸ್ಥಳೀಯರಲ್ಲಿದೆ.

ಪೂರಕ ಮಾಹಿತಿ: ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಎನ್.ಸೋಮಶೇಖರ್, ಕೆ.ನಾಗರಾಜ್, ಜೆ.ಒ.ಉಮೇಶ್‌ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.