ADVERTISEMENT

ಚಿಕ್ಕಮಗಳೂರು: ದತ್ತ ಜಯಂತಿ ಶಾಂತಿಯುತ ಸಂಪನ್ನ

ಕೊರೆವ ಚಳಿ ನಡುವೆ ಪಾದುಕೆ ದರ್ಶನಕ್ಕೆ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:34 IST
Last Updated 5 ಡಿಸೆಂಬರ್ 2025, 6:34 IST
ದತ್ತ ಪಾದುಕೆ ದರ್ಶನಕ್ಕೆ ಸಾಲಿನಲ್ಲಿ ನಿಂತಿರುವ ಭಕ್ತರು
ದತ್ತ ಪಾದುಕೆ ದರ್ಶನಕ್ಕೆ ಸಾಲಿನಲ್ಲಿ ನಿಂತಿರುವ ಭಕ್ತರು   

ಚಿಕ್ಕಮಗಳೂರು: ದತ್ತ ಜಯಂತಿಯ ಅಂತಿಮ ದಿನವಾದ ಗುರುವಾರ ಸಾವಿರಾರು ಭಕ್ತರು ದತ್ತ ಪಾದುಕೆಯ ದರ್ಶನ ಪಡೆದರು. ಮೂರು ದಿನಗಳ ದತ್ತ ಜಯಂತಿ ಸಂಪನ್ನಗೊಂಡಿತು. 

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ಬಂದರು. ಗುಹೆಯ ಮುಂಭಾಗದ ಆವರಣದಲ್ಲಿ ದತ್ತ ಜಯಂತಿ ನಿಮಿತ್ತ ಹೋಮ–ಹವನಗಳನ್ನು ಅರ್ಚಕರು ನೆರವೇರಿಸಿದರು. ರುದ್ರ ಹೋಮ, ದತ್ತಧಾರಕ ಹೋಮ, ಗುಹೆಯೊಳಗೆ ದತ್ತಪಾದುಕೆಗೆ ಏಕಾದಶಾವರ ರುದ್ರಾಭಿಷೇಕ, ಪೂಜೆ ನೆರವೇರಿದವು.

ದಕ್ಷಿಣ ಕನ್ನಡ, ಉಡುಪಿ, ಪುತ್ತೂರು, ಹಾಸನ, ಶಿವಮೊಗ್ಗ, ಬೆಂಗಳೂರು, ತುಮಕೂರು ಸೇರಿ ವಿವಿಧ ಜಿಲ್ಲೆಗಳಿಂದ ಮಿನಿ ಬಸ್ಸು ಕಾರು, ಜೀಪು, ಕಾರು ಮತ್ತು ಬೈಕ್‌ಗಳಲ್ಲಿ ಬಂದಿದ್ದರು. ಕಡೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚು ವಾಹನಗಳು ಬಂದಿದ್ದವು. ಕೆಲವರು ಮಾರ್ಗಮಧ್ಯ ಇರುವ ಹೊನ್ನಮ್ಮನ ಹಳ್ಳದಲ್ಲಿ ಕೆಲವರು ಸ್ನಾನ ಮಾಡಿ ಕಾಲ್ನಡಿಗೆಯಲ್ಲೆ ಬಂದರು. 

ADVERTISEMENT

ಗುಹೆ ಸಮೀಪದ ತುಳಸಿಕಟ್ಟೆ ಬಳಿ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವಿಶ್ವೇಂದ್ರಭಟ್ ನೇತೃತ್ವದಲ್ಲಿ ಸಚಿನ್, ಕೃಷ್ಣಭಟ್, ಉದಯಶಂಕರ ಭಟ್, ಸುಮಂತ್ ನೆಮ್ಮಾರ್ ತಂಡದಿಂದ ಕಲಾ ಹೋಮ, ದತ್ತ ಹೋಮ ನಡೆಸಲಾಯಿತು.

ಹೊರವಲಯದ ಶೆಡ್‌ನಲ್ಲಿ ದತ್ತಾತ್ರೇಯ ಸ್ವಾಮಿಯ ಪಲ್ಲಕ್ಕಿಯನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಕ ಲಾಹೋಮ ಮತ್ತು ದತ್ತ ಹೋಮದ ಪೂರ್ಣಾಹುತಿ ನಡೆಯಿತು.

ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಸರ್ವ ಧರ್ಮ ಪೀಠದ ಜಯಬಸವಾನಂದ ಸ್ವಾಮೀಜಿ, ಕಡೂರು ತಾಲ್ಲೂಕಿನ ಯಳನಾಡು ಮಹಾ ಸಂಸ್ಥಾನದ ಜ್ಞಾನಪ್ರಭ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ರಂಭಾಪುರಿ ಬೀರೂರು ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ದೀಪಕ್ ದೊಡ್ಡಯ್ಯ, ಪ್ರೇಮ್‌ಕುಮಾರ್, ಹೇಮಂತ್‌ಕುಮಾರ್, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾಗವಹಿಸಿದ್ದರು.

ಜಿಲ್ಲಾಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಎಚ್.ಎಸ್.ಕೀರ್ತನಾ, ದತ್ತಪೀಠ ವ್ಯವಸ್ಥಾಪನಾ ಸಮಿತಿ ಆಡಳಿತಾಧಿಕಾರಿ ನಾರಾಯಣ ಕನಕರಡ್ಡಿ, ತಹಶೀಲ್ದಾರ್ ರೇಷ್ಮಾಶೆಟ್ಟಿ ಇದ್ದರು.

ದತ್ತ ಪಾದುಕೆ ದರ್ಶನಕ್ಕೆ ವಾಹನಗಳಲ್ಲಿ ಸಾಗುತ್ತಿರುವ ಭಕ್ತರು
ದತ್ತ ಪಾದುಕೆ ದರ್ಶನಕ್ಕೆ ಇರುಮುಡಿ ಹೊತ್ತು ಸಾಗಿದ ಸಿ.ಟಿ.ರವಿ ಮತ್ತು ಬಜರಂಗದಳ ಕಾರ್ಯಕರ್ತರು

ಧಾರ್ಮಿಕ ಸ್ಥಳ ಕಬಳಿಕೆ ಅಧರ್ಮ: ಸಿ.ಟಿ.ರವಿ

ಇಸ್ಲಾಂ ಹೆಸರಲ್ಲಿ ಅನ್ಯರ ಧಾರ್ಮಿಕ ಸ್ಥಳ ಕಬಳಿಸುವುದು ಅಧರ್ಮ. ನಾಶ ಮಾಡುವುದು ಧರ್ಮವಾಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ದತ್ತ ಹೋಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಭಾರತೀಯ ಅರ್ಥದಲ್ಲಿ ಧರ್ಮ ಎಂದರೆ ದಯೆಯಿಂದ ಕೂಡಿರುವುದು. ಸನ್ಮಾರ್ಗ ಹಾಗೂ ಸತ್ಯದ ಹಾದಿಯಲ್ಲಿ ಜನರನ್ನು ತೆಗೆದುಕೊಂಡು ಹೋಗುವುದು. ಇನ್ನೊಬ್ಬರ ಧಾರ್ಮಿಕ ಸ್ಥಳವನ್ನು ಮೋಸದಿಂದ ಕಬಳಿಸುವುದಲ್ಲ’ ಎಂದರು. ಇಸ್ಲಾಂ ಹೆಸರಲ್ಲಿ ಬಲತ್ಕಾರ ಲೂಟಿ ಮತಾಂಥರ ಮಾಡಿದ್ದಾರೆ. ಇದನ್ನು ಭಾರತೀಯ ಪರಂಪರೆಯಲ್ಲಿ ಧರ್ಮ ಎನ್ನುವುದಿಲ್ಲ. ಪೈಶಾಚಿಕ ಮತ ಎನ್ನಬಹುದು. ಇದೇ ಪೈಶಾಚಿಕ ಪರಂಪರೆ ಈಗ ಭಯೋತ್ಪಾದನೆ ಹೆಸರಲ್ಲಿ ಮುಂದುವರಿದಿದೆ. ಇದನ್ನು ಪಿಶಾಚಿಗಳು ರಾಕ್ಷಸರ ಧರ್ಮ ಎಂದು ಹೇಳಬಹುದೆ ಹೊರತು ಧರ್ಮ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು. ‘ದತ್ತಪೀಠಕ್ಕೆ ಸಂಬಂಧ ನಾವು ನೀಡಿರುವ ದಾಖಲೆಗಳನ್ನು ಪರಿಶೀಲಿಸಲಿ. ಶಾ–ಖಾದ್ರಿ ಬಳಿ ಇರುವ ದಾಖಲೆಗಳನ್ನೂ ನೋಡಲಿ. ಜತೆಗೆ ಕಂದಾಯ ಹಾಗೂ ಮುಜುರಾಯಿ ಇಲಾಖೆ ದಾಖಲೆ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು. ‘ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ವೇಳೆ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂಬರ್ 195ರಲ್ಲಿ ದತ್ತಾತ್ರೇಯ ದೇವರು ಇದೆ. ನಾಗೇನಹಳ್ಳಿ ಗ್ರಾಮದ ಸರ್ವೆ ನಂ 57ರಲ್ಲಿ ಬಾಬಾಬುಡನ್ ದರ್ಗಾ ಇದೆ ಎಂದು ಸರ್ಕಾರವೇ ಉತ್ತರ ನೀಡಿದೆ. ಅಂಗೈ ಉಣ್ಣಿಗೆ ಕನ್ನಡಿ ಅವಶ್ಯಕತೆ ಇಲ್ಲ’ ಎಂದರು.

ಬಿಗಿ ಭದ್ರತೆ: ಶಾಂತಿಯುತ ತೆರೆ

ಮೂರು ದಿನಗಳ ದತ್ತ ಜಯಂತಿಯ ಸಣ್ಣಪುಟ್ಟ ಘರ್ಷಣೆಯೂ ದಾಖಲಾಗದೆ ಶಾಂತಿಯುತವಾಗಿ ತೆರೆ ಕಂಡಿತು. 5 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.  ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಕೊರೆವ ಚಳಿ ನಡುವೆಯೂ ಪೊಲೀಸರು ಕಾರ್ಯನಿರ್ವಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಬಂದೋಬಸ್ತ್‌ ನಿಗಾ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.