ಚಿಕ್ಕಮಗಳೂರು: ‘ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸೈಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಭಕ್ತರ ಜೊತೆ ಫಾತೇಹ ಆಚರಣೆಗೆ ಹೋದಾಗ ಅಧಿಕಾರಿಗಳು ಅವಕಾಶ ನೀಡದೆ ಧಾರ್ಮಿಕ ಹಕ್ಕು ನಿರಾಕರಿಸಿದ್ದಾರೆ’ ಎಂದು ಖಾದ್ರಿ ವಂಶಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾ– ಖಾದ್ರಿ ಆರೋಪಿಸಿದರು.
‘ಡಿ. 29ರಂದು ಅಧಿಕಾರಿಗಳು ನಮ್ಮನ್ನು ತಡೆದಿದ್ದಾರೆ. ದರ್ಗಾ ಸಂಸ್ಥೆಯ ಅಧಿಕಾರಿಯಾಗಿ ದರ್ಗಾದ ಆಚರಣೆಯ ವಿರುದ್ಧವೇ ಕಾರ್ಯನಿರ್ವಹಿಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಹಣ್ಣು– ಕಾಯಿ ತಂದರೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಆ ಮೂಲಕ ನಮ್ಮ ಧರ್ಮಕ್ಕೆ ಅವಮಾನ ಮಾಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಒಂದು ಸಮುದಾಯದ ಪರವಾಗಿ ಕಾರ್ಯನಿರ್ವಹಿಸಿ ಕೋಮು ಪ್ರಚೋದನೆಗೆ ಅವಕಾಶ ಮಾಡಿ ಕೊಡುತ್ತಿರುವ ಅಧಿಕಾರಿ ಹಾಗೂ ಅವರ ತಂಡದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಮ್ಮ ದರ್ಗಾ ಸಂಸ್ಥೆಯಿಂದ ವರ್ಗಾವಣೆ ಮಾಡಿ ಬೇರೆ ದೇವಸ್ಥಾನದ ಸಂಸ್ಥೆಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
‘ನಮ್ಮ ದರ್ಗಾ ಸಂಸ್ಥೆ ಆಚರಣೆಗಳನ್ನು ನಿರ್ವಹಿಸಲು ಹಿಂದಿನಂತೆ ಶಾ –ಖಾದ್ರಿಗಳ ಸಮಿತಿಯನ್ನು ರಚಿಸಲಿ ಇಲ್ಲವೇ ನ್ಯಾಯಾಲಯದ ತೀರ್ಮಾನ ಬರುವ ತನಕ ಜಾತ್ಯತೀತ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಾತ್ಯತೀತ ಸಮಿತಿಯನ್ನು ತಕ್ಷಣವೇ ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೈಯದ್ ಬುಡನ್ ಶಾ– ಖಾದ್ರಿ ವಂಶಸ್ಥರ ಸಂಘದ ಶಾರುಕ್ ಶಾ– ಖಾದ್ರಿ, ಶಾಬಾದ್, ತನ್ವೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.