ಚಿಕ್ಕಮಗಳೂರು: ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕೆಎಸ್ಆರ್ಟಿಸಿ ಬಸ್ ಚಾಲಕ ಪಾರ್ಸೆಲ್ ಪಡೆದು ಸಾಗಿಸುತ್ತಿದ್ದ ದಾಖಲೆ ಇಲ್ಲದ ₹13.20 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾರ್ಸೆಲ್ ಬಾಕ್ಸ್ವೊಂದನ್ನು ಚಾಲಕನಿಗೆ ನೀಡಿ ಚಿಕ್ಕಮಗಳೂರಿಗೆ ತಲುಪಿಸಲು ವ್ಯಕ್ತಿಯೊಬ್ಬರು ತಿಳಿಸಿದ್ದರು. ಮಾಗಡಿ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬಸ್ ಅಡ್ಡಗಟ್ಟಿ ತಪಾಸಣೆ ನಡೆಸಿದರು.
ಚಾಲಕ ಪ್ರಕಾಶ್ ಪಡೆದು ತರುತ್ತಿದ್ದ ಪಾರ್ಸೆಲ್ ಬಾಕ್ಸ್ ತೆರೆದು ನೋಡಿದಾಗ ಚಿನ್ನಾಭರಣ ಇರುವುದು ಪತ್ತೆ ಆಯಿತು. ಒಂದು ಜೊತೆ ಚಿನ್ನದ ಬಳೆ, ಒಂದು ನೆಕ್ಲೆಸ್, ಎರಡು ಚೈನು, 61 ಗುಂಡು, ಒಂದು ಕರಿಮಣಿ ಬ್ರೇಸ್ಲೆಟ್, 4 ಉಂಗುರ, 5 ತಾಳಿ, 1 ಡಾಲರ್, ಒಂದು ಎಳೆ ಸಣ್ಣದಾರ ಸೇರಿ ಒಟ್ಟು 220 ಗ್ರಾಂ ಚಿನ್ನದ ಆಭರಣ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಜ್ಜಂಪುರ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹1.30 ಲಕ್ಷ, ಕೊಟ್ಟಿಗೆಹಾರದಲ್ಲಿ ₹1 ಲಕ್ಷ, ಮೂಡಿಗೆರೆ ಸಮೀಪದ ಕಸ್ಕೇಬೈಲ್ ಚೆಕ್ ಪೋಸ್ಟಿನಲ್ಲಿ ₹3.62 ಲಕ್ಷ ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.