
ಮೂಡಿಗೆರೆ: ರೈತ ಸಂಘಟನೆ ಹೆಸರಿನಲ್ಲಿ ರೈತ ಮುಖಂಡರೊಬ್ಬರು ಅಧಿಕಾರಿಗಳ ದಿಕ್ಕು ತಪ್ಪಿಸಿ ನಿಯಮ ಬಾಹಿರವಾಗಿ ಪಕ್ಕಾಪೋಡು ಮಾಡಿಸಿ ನಮಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ಬಿಳ್ಳೂರು ಗ್ರಾಮದ ಪಿ.ಎ.ಪುಟ್ಟಸ್ವಾಮಿಗೌಡ ನೇತೃತ್ವದಲ್ಲಿ ಮಂಗಳವಾರ ತಹಶೀಲ್ದಾರ್ ಎಸ್.ಅಶ್ವಿನಿ ಅವರಿಗೆ ದೂರು ಸಲ್ಲಿಸಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿ.ಎ.ಪುಟ್ಟಸ್ವಾಮಿಗೌಡ, ತಾಲ್ಲೂಕಿನ ಕಡಿದಾಳು ಗ್ರಾಮದ ಸರ್ವೆ ನಂ.76/1 ರಲ್ಲಿ ತನಗೆ 10 ಎಕರೆ, ಪಿ.ಕೆ.ಕುಲದೀಪ್ ಅವರು 10 ಎಕರೆ, ಬಿ.ಕೆ.ಸರೋಜಮ್ಮ ಅವರು 10 ಎಕರೆ, ಎಂ.ಎ.ಶ್ಯಾಮಲ ಅವರು 9.20 ಎಕರೆ ಜಮೀನು ಹೊಂದಿದ್ದು, ಸ್ವಂತ ಖಾತೆ ಹಾಗೂ ಸ್ವಾಧೀನ ಅನುಭವದಲ್ಲಿರುತ್ತದೆ. ಈ ಜಮೀನುಗಳ ಪಕ್ಕದಲ್ಲಿ ಸರ್ವೆ ನಂ 76/2ಎ ರಲ್ಲಿ ರೈತ ಮುಖಂಡರೊಬ್ಬರ ಜಮೀನಿದ್ದು, ಅವರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ನಿಯಮ ಬಾಹಿರವಾಗಿ ಕಳೆದ 2 ತಿಂಗಳ ಹಿಂದೆ ನಮ್ಮ ಗಮನಕ್ಕೆ ಬಾರದೇ, ಯಾವುದೇ ನೋಟಿಸ್ ನೀಡದೇ ಪಕ್ಕಾಪೋಡು ಮಾಡಿದ್ದಾರೆ' ಎಂದು ದೂರಿದರು.
ಈ ಜಮೀನುಗಳ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪು ಬರದೇ ಪಕ್ಕಾಪೋಡು ಮಾಡುವಂತಿಲ್ಲ. ಎಡಿಎಲ್ಆರ್ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸದೇ ಪಕ್ಕಾಪೋಡು ಮಾಡಿದ್ದಾರೆ. ಇದರಿಂದ ಎಂ.ಎ.ಶ್ಯಾಮಲಗೆ ಸೇರಿದ 2 ಎಕರೆ ಜಮೀನಿನಲ್ಲಿ ರೈತ ಮುಖಂಡ ಕಾಫಿ ಕುಯ್ದು, ಕಾಫಿ ಗಿಡಗಳನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ದಾಖಲೆಗಳನ್ನು ಪರಿಶೀಲಿಸಿ ಯಾವ ರೀತಿ ಪೋಡು ಮಾಡಿದ್ದಾರೆಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಈಗ ಹೊಸದಾಗಿ ಆಗಿರುವ ಪೋಡನ್ನು ರದ್ದುಪಡಿಸಿ, ಮತ್ತೊಮ್ಮೆ ಪರಿಶೀಲಿಸಬೇಕು' ಎಂದು ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪಿ.ಕೆ.ಕುಲದೀಪ್, ಬಿ.ಕೆ.ಸರೋಜಮ್ಮ, ಎಂ.ಎ.ಶ್ಯಾಮಲ, ರೈತ ಮುಖಂಡ ವಾಸುದೇವ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.