ADVERTISEMENT

ಮಾಫಿ ಪಾಸ್‌: ಕಳಸ ವಲಯದ ಆರ್‌ಎಫ್‌ಒ ವಿಜಯಕುಮಾರ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 11:45 IST
Last Updated 25 ಜೂನ್ 2021, 11:45 IST
ಬಾಳೂರು ಮೀಸಲು ಅರಣ್ಯದ ಗಡಿಭಾಗದಲ್ಲಿ ಕಡಿದಿದ್ದ ಮರಗಳು. (ಸಂಗ್ರಹ ಚಿತ್ರ)
ಬಾಳೂರು ಮೀಸಲು ಅರಣ್ಯದ ಗಡಿಭಾಗದಲ್ಲಿ ಕಡಿದಿದ್ದ ಮರಗಳು. (ಸಂಗ್ರಹ ಚಿತ್ರ)   

ಚಿಕ್ಕಮಗಳೂರು: ‘ಮಾಫಿ ಪಾಸ್‌’ (ಖಾಸಗಿ ಜಮೀನಿನಲ್ಲಿನ ಮರ ಕಡಿಯಲು ನೀಡುವ ಸಮ್ಮತಿ ಪತ್ರ) ಹೆಸರಿನಲ್ಲಿ ಬಾಳೂರು ಮೀಸಲು ಅರಣ್ಯದ ಗಡಿರೇಖೆಯ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಸ ವಲಯದ ಆರ್‌ಎಫ್‌ಒ ಜೆ.ವಿಜಯಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ಮೋಹನ್‌ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಾಳೂರು ಮೀಸಲು ಅರಣ್ಯ ಪ್ರದೇಶದ ಗಡಿ ಮತ್ತು ಮಾಫಿ ಪಾಸ್‌ ಪ್ರದೇಶದ ಗಡಿ ಗುರುತಿಸುವಲ್ಲಿ ವಿಫಲರಾಗಿರುವುದು ಕಂಡುಬಂದಿದೆ. ಹಲಗಡಕ ಕಾಫಿ ಎಸ್ಟೇಟ್‌ ಗ್ರಾಮದ ಗಡಿ ಗುರುತಿಸದೇ ಇರುವ ಸರ್ವೆ ನಂಬರ್‌ 4, 6, 9 ಹಾಗೂ 10ರ ಜಮೀನಿನಲ್ಲಿ 96 ಮರಗಳನ್ನು ಅಕ್ರಮವಾಗಿ ಕಡಿದಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಾಫಿ ಪಾಸ್‌’ ಪ‍್ರದೇಶ ಗಡಿ ಗುರುತಿಸುವಲ್ಲಿ ವ್ಯತ್ಯಾಸವಾಗಿರುವುದಕ್ಕೆ ವಿಜಯ ಕುಮಾರ್‌ ಜವಾಬ್ದಾರರಾಗಿರುತ್ತಾರೆ. ‘ಮಾಫಿ ಪಾಸ್‌’ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವುದರಲ್ಲಿ ಅವರು ಶಾಮೀಲಾಗಿರುವುದು ಕಂಡುಬಂದಿದೆ. ಕರ್ತವ್ಯ ನಿರ್ವಹಣೆಯಲ್ಲೂ ಅವರು ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಉಲ್ಲೇಖಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಏಳು ನೌಕರರನ್ನು ಫೆಬ್ರುವರಿಯಲ್ಲಿ ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.