ಮೂಡಿಗೆರೆ: ಪರಿಶಿಷ್ಟ ಶಾಸಕನೊಬ್ಬ ಆರ್ಸಿಸಿ ಮನೆ ಕಟ್ಟಿಸಿದ್ದೇ ತಪ್ಪಾ? ಎಂದು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
‘ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮನೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕ ಸಂಘಟನೆ ಮುಖಂಡ ಚಂದ್ರು ಒಡೆಯರ್ ಇತ್ತೀಚೆಗೆ ಒತ್ತಾಯಿಸಿದ್ದರು.
ಸದ್ಯ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಪರಿಶಿಷ್ಟ ಶಾಸಕನೊಬ್ಬ ಆರ್ಸಿಸಿ ಮನೆ ಕಟ್ಟಿಸಿದ್ದೇ ತಪ್ಪಾ? ಟ್ರ್ಯಾಕ್ಟರ್ನಲ್ಲಿ ಮರಳು ಕೊಂಡೊಯ್ಯುತ್ತಿರುವುದನ್ನು ಕಾಂಗ್ರೆಸ್ ಮುಖಂಡರೊಬ್ಬರು ವಿಡಿಯೊ ಮಾಡಿಕೊಂಡು ಶಾಸಕರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಇದು ಸುಳ್ಳು. ಶಾಸಕನ ವಿರುದ್ಧ ಆರೋಪಿಸುವ ಮೊದಲು ಮರಳನ್ನು ಎಲ್ಲಿಂದ ತರಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಪರವಾನಗಿ ಇರುವ ಮರಳನ್ನು ಗುತ್ತಿಗೆದಾರರಿಂದ ಹಣ ಕೊಟ್ಟು ಖರೀದಿಸಿದ್ದೇನೆ. ಪರವಾನಗಿ ಇರುವ ಮರಳನ್ನು ತಂದಿರುವುದು ಅಕ್ರಮವೇ’ ಎಂದು ಪ್ರಶ್ನಿಸಿದ್ದಾರೆ.
‘ಪರಿಶಿಷ್ಟ ಶಾಸಕನೊಬ್ಬ ಆರ್ಸಿಸಿ ಮನೆ ಕಟ್ಟುತ್ತಿದ್ದಾರೆ ಎಂಬ ಕಾರಣಕ್ಕೆ ಅದು ಕೋಟಿ ವೆಚ್ಚದ ಮನೆ, ಅಕ್ರಮವಾಗಿ ನಿರ್ಮಿಸುತ್ತಿರುವ ಮನೆ, ಅಕ್ರಮವಾಗಿ ಮರಳು ತರಲಾಗಿದೆ ಎಂಬ ಅನೇಕ ಆರೋಪಗಳನ್ನು ಮಾಡಲಾಗುತ್ತಿದ್ದು, ಇದೆಲ್ಲವೂ ರಾಜಕೀಯ ಪ್ರೇರಿತವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.