
ಚಿಕ್ಕಮಗಳೂರು: ಮಳೆಗಾಲದಲ್ಲಿ ಭೂಕುಸಿತ ಸಂಭವಿಸಬಹುದಾದ 163 ದುರ್ಬಲ ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಪ್ರದೇಶಗಳ ಜನ ಜೀವ ಬಿಗಿ ಹಿಡಿದು ಜೀವನ ನಡೆಸುತ್ತಿದ್ದಾರೆ. ಭೂಕುಸಿತ ತಡೆಗೆ ರಾಜ್ಯ ಸರ್ಕಾರ ಈಗ ₹66.47 ಕೋಟಿ ಬಿಡುಗಡೆ ಮಾಡಿದೆ.
2019ರಿಂದ ಈವರೆಗೆ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಹಾಗೂ ಹಾನಿಗಳ ಆಧಾರದ ಮೇಲೆ ಈ ದುರ್ಬಲ ಪ್ರದೇಶಗಳನ್ನು ಗುರುತಿಸಿದೆ. 163 ದುರ್ಬಲ ಪ್ರದೇಶಗಳ ಪೈಕಿ ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯು (ಜಿಎಸ್ಐ) ನೀಡಿರುವ ಸಲಹೆಯಂತೆ ಜನವಸತಿ ಮತ್ತು ರಸ್ತೆಗಳು ಅಪಾಯಕ್ಕೆ ಸಿಲುಕು ಸಾಧ್ಯತೆ ಇರುವ 25 ಸ್ಥಳಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿದೆ.
ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟಿ ಮತ್ತು ಬಾಬಾಬುಡನ್ಗಿರಿ ರಸ್ತೆಯಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ ಎಂದು ಜಿಎಸ್ಐ ವರದಿ ನೀಡಿತ್ತು. ನೆಲದಾಳದ ಕಲ್ಲಿನ ರಚನೆ, ಮೇಲ್ಪದರದ ಮಣ್ಣು, ಇಳಿಜಾರಿನ ಸ್ವರೂಪ, ಹಸಿರು ಹೊದಿಕೆ, ಮಳೆಯ ಪ್ರಮಾಣ, ಗಾಳಿ ಬೀಸುವ ವೇಗ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಹರಿವು, ಭೂಬಳಕೆ ರೀತಿಯನ್ನು ಅಧ್ಯಯನ ನಡೆಸಲಾಗಿತ್ತು.
ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ ರಸ್ತೆ ಮತ್ತು ಚಾರ್ಮಾಡಿ ಘಾಟಿ ವಿಭಾಗದಲ್ಲಿ ಹೆಚ್ಚು ಅಪಾಯದ ಸ್ಥಳಗಳಿವೆ. ಕಡಿದಾದ ಇಳಿಜಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಕಾಡಿನಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿರುವುದರಿಂದ ಈ ರೀತಿಯ ಅಪಾಯಗಳು ಹೆಚ್ಚಾಗಿವೆ. ಅತಿಯಾದ ಮಳೆ, ಅಂತರ್ಜಲದ ಒತ್ತಡ ನಿರ್ವಹಣೆ ಮಾಡದಿರುವುದು, ಗುಡ್ಡಗಳನ್ನು ಕಡಿದಾಗಿ ಅಗೆದು ರಸ್ತೆ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಗುಡ್ಡ ಕುಸಿತಕ್ಕೆ ಕಾರಣ ಎಂಬುದನ್ನು ಜಿಎಸ್ಐ ವರದಿಯಲ್ಲಿ ಉಲ್ಲೇಖಿಸಿತ್ತು.
ರಾಜ್ಯ ಸರ್ಕಾರ ಈಗ ₹66.47 ಕೋಟಿಯನ್ನು ಎರಡು ಹಂತದಲ್ಲಿ ಮಂಜೂರು ಮಾಡಿದೆ. ಭೂಕುಸಿತ ತಡೆಗಟ್ಟಲು ಜಿಎಸ್ಐ ನೀಡಿರುವ ಸಲಹೆಗಳನ್ನು ಆಧರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಮಳೆಗಾಲದಲ್ಲಿ ಉಂಟಾಗುವ ಒರತೆಯಿಂದ ನೀರಿನ ಹರಿವು ಹೆಚ್ಚಿರುತ್ತದೆ. ಒರತೆ ಹೆಚ್ಚಿರುವ ಕಡೆಗಳಲ್ಲೂ ಗುಡ್ಡಗಳನ್ನು ಕಡಿದಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿರುವ ಕಡೆಗಳಲ್ಲಿ ಹೆಚ್ಚಾಗಿ ಕುಸಿತ ಆಗಿವೆ. ಇಳಿಜಾರುಗಳನ್ನು ಸರಿಪಡಿಸಿ ಅವುಗಳ ಬಲವರ್ಧನೆಗೆ ಒತ್ತು ನೀಡಲಾಗುವುದು ಎಂದು ಅವರು ವಿವರಿಸುತ್ತಾರೆ.
ರಸ್ತೆಗಳ ಪಕ್ಕದಲ್ಲಿ ಗೇಬಿಯನ್ ಗೋಡೆಗಳನ್ನು (ಕಲ್ಲು ಮತ್ತು ತಂತಿಗಳನ್ನು ಒಳಗೊಂಡ ತಡೆಗೋಡೆ) ನಿರ್ಮಿಸಬೇಕು. ಈಗಾಗಲೇ ದುರ್ಬಲವಾಗಿರುವ ಇಳಿಜಾರುಗಳ ಬಳಿಯ ರಸ್ತೆಗಳ ಬದಿಗಳಲ್ಲಿ ಈ ರೀತಿಯ ಗೋಡೆ ನಿರ್ಮಾಣವಾಗಬೇಕು. ಕಾಂಕ್ರೀಟ್ ತಡೆಗೋಡೆ ನಿರ್ಮಿಸಿದರೆ ಅವುಗಳಲ್ಲಿ ನೀರು ಹರಿದು ಹೋಗುವಂತೆ ರಂಧ್ರಗಳು ಇರುವಂತೆ ನೋಡಿಕೊಳ್ಳಬೇಕು. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ರಸ್ತೆಗೆ ಹರಿಯುವುದನ್ನ ತಡೆಯಬೇಕು ಎಂಬ ಸಲಹೆಯನ್ನು ಜಿಎಸ್ಐ ನೀಡಿದೆ. ಅದರಂತೆಯೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೀರಿನ ಮೇಲ್ಮೈ ಹರಿವು ಮತ್ತು ಒಳ ಹರಿವು ನಿರ್ವಹಣೆಗೆ ಸಮಗ್ರವಾಗಿ ಚರಂಡಿ ನಿರ್ಮಾಣ, ಹರಿಯುವ ನೀರಿನಿಂದ ಆಗುವ ಮಣ್ಣಿನ ಸವೆತ ನಿಯಂತ್ರಣ, ಇಳಿಜಾರುಗಳಲ್ಲಿ ಕಾಡು ರಕ್ಷಣೆ, ಆಳವಾಗಿ ಬೇರು ಬೀಡುವ ಜಾತಿಯ ಸಸ್ಯೆಗಳನ್ನು ಬೆಳೆಸುವುದು ಸೇರಿ ಮಣ್ಣು ಕುಸಿತ ತಡೆಯಲಾಗುವುದು ಎಂದು ಮಾಹಿತಿ ನೀಡಿದರು.
ಸ್ಥಳಾಂತರಕ್ಕೂ ಕ್ರಮ
ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಗುಡ್ಡಕುಸಿತ ಪ್ರದೇಶಗಳನ್ನು ಗುರುತಿಸಿದ್ದ ಜಿಎಸ್ಐ 5 ಕಡೆಗಳಲ್ಲಿ ಜನವಸತಿ ಸ್ಥಳಾಂತರಕ್ಕೆ ಜಿಎಸ್ಐ ಶಿಫಾರಸು ಮಾಡಿತ್ತು. ಸ್ಥಳಾಂತರಕ್ಕೂ ಕ್ರಮ ವಹಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕೊಪ್ಪ ತಾಲ್ಲೂಕಿನ ಗುಡ್ಡೇತೋಟ ಬಸರಿಕಟ್ಟೆ ಶೃಂಗೇರಿ ತಾಲ್ಲೂಕಿನ ಕೆರೆದಂಡೆ ಹೊರನಾಡು ಸಮೀಪದ ಸೋಮನಕಟ್ಟೆ ಚನ್ನಹಡ್ಲು ಪ್ರದೇಶದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶದಲ್ಲೇ ಜನ ವಾಸವಿದ್ದಾರೆ. ಕುಟುಂಬಗಳನ್ನು ಮಳೆಗಾಲದ ವೇಳೆಗೆ ಸ್ಥಳಾಂತರ ಮಾಡುವುದು ಸೂಕ್ತ ಎಂದು ಜಿಎಸ್ಐ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.