ADVERTISEMENT

ಇ–ತಂತ್ರಜ್ಞಾನದೆಡೆಗೆ ಅನ್ನದಾತರ ಒಲವು

ಕೋವಿಡ್‌ ಬಿಕ್ಕಟ್ಟು: ಕೃಷಿ ಚಟುವಟಿಕೆ ಮಾಹಿತಿ– ಮಾರ್ಗದರ್ಶನಕ್ಕೆ ಹೊಸ ದಾರಿ

ಬಿ.ಜೆ.ಧನ್ಯಪ್ರಸಾದ್
Published 3 ಅಕ್ಟೋಬರ್ 2020, 19:31 IST
Last Updated 3 ಅಕ್ಟೋಬರ್ 2020, 19:31 IST
ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯದ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ನೀಡುತ್ತಿರುವುದು (ಎಡಚಿತ್ರ). ಬೆಳೆ ವಿಧಾನದ ಬಗ್ಗೆ ಆನ್‌ಲೈನ್‌ನಲ್ಲಿ ವಿವರಿಸುತ್ತಿರುವುದು.           ಪ್ರಜಾವಾಣಿ ಚಿತ್ರಗಳು
ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯದ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ನೀಡುತ್ತಿರುವುದು (ಎಡಚಿತ್ರ). ಬೆಳೆ ವಿಧಾನದ ಬಗ್ಗೆ ಆನ್‌ಲೈನ್‌ನಲ್ಲಿ ವಿವರಿಸುತ್ತಿರುವುದು.           ಪ್ರಜಾವಾಣಿ ಚಿತ್ರಗಳು   

ಚಿಕ್ಕಮಗಳೂರು: ಕೋವಿಡ್‌ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆ ಮಾಹಿತಿ– ಮಾರ್ಗದರ್ಶನಕ್ಕೆ ರೈತರು ಇ–ತಂತ್ರಜ್ಞಾನದ ಕಡೆಗೆ ಚಿತ್ತ ಹರಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ‘ಆ್ಯಪ್‌’, ‘ವಾಟ್ಸ್‌ಆ್ಯಪ್‌’, ‘ಜೂಮ್‌’, ‘ಗೂಗಲ್‌ ಮೀಟ್‌’ ಸೌಲಭ್ಯಗಳ ಮೂಲಕ ಕೃಷಿಕರಿಗೆ ಸಲಹೆ ನೀಡುತ್ತಿವೆ.

ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಿದ್ದ ಬಹಳಷ್ಟು ಮಂದಿ ಹಳ್ಳಿಗಳಿಗೆ ವಾಪಸಾಗಿದ್ದಾರೆ. ಊರಿಗೆ ಹಿಂದಿರುಗಿರುವವರಲ್ಲಿ ಹಲವರು ಮೇಟಿ ವಿದ್ಯೆಯಲ್ಲಿ ತೊಡಗಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ನಡುವೆ ರೈತರು ಪಟ್ಟಣಗಳ ಕಡೆಗೆ ಬರುವುದು ಕಡಿಮೆಯಾಗಿದೆ.

ಈಗ ಇ–ತಂತ್ರಜ್ಞಾನವು ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತರು ನಡುವೆ ವಿಚಾರ ವಿನಿಮಯಕ್ಕೆ ಕೊಂಡಿಯಾಗಿದೆ. ರೈತರು ಇದ್ದಲ್ಲಿಯೇ ಮೊಬೈಲ್‌ ಫೋನ್‌ನಲ್ಲಿ ಕೃಷಿ ಚಟುವಟಿಕೆ ವಿಚಾರಗಳನ್ನು ತಿಳಿದುಕೊಂಡು, ಅನ್ವಯಿಸುವುದರಲ್ಲಿ ನಿರತರಾಗಿದ್ದಾರೆ.

ADVERTISEMENT

ಜಿಲ್ಲೆಯ ಮೂಡಿಗೆರೆಯಲ್ಲಿನ ಕೃಷಿ ವಿಜ್ಞಾನ ಕೇಂದ್ರವು ಇ–ತಂತ್ರಜ್ಞಾನದ ಮೂಲಕ ಬೆಳೆಗಾರರನ್ನು ತಲುಪುತ್ತಿದೆ. ಕೇಂದ್ರದ ಕಾರ್ಯ ಚಟುವಟಿಕೆಗಳು ವಿಸ್ತರಣೆಯಾಗಿವೆ. ಕೇಂದ್ರದಲ್ಲಿನ ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು ಮೊಬೈಲ್‌, ಆನ್‌ಲೈನ್‌ ಮೂಲಕ ಕೃಷಿಕರಿಗೆ ಸಲಹೆ ನೀಡುವುದರಲ್ಲಿ ನಿರತರಾಗಿದ್ದಾರೆ.

ಈ ಕೇಂದ್ರದಿಂದ ರೈತರ 29 ‘ವಾಟ್ಸ್‌ಆ್ಯಪ್‌’ ಗುಂಪು ಮಾಡಲಾಗಿದೆ. ‘ಕಿಸಾನ್ ಸುವಿಧಾ’ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಸಿಎಆರ್‌) ‘ಮೇಘ್‌ ದೂತ್‌’ ಆ್ಯಪ್‌ಗಳ ಬಳಕೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ‘ಜೂಮ್‌’, ‘ಗೂಗಲ್‌ ಮೀಟ್‌’ ಮೂಲಕ 25ಕ್ಕೂ ಹೆಚ್ಚು ತರಬೇತಿಗಳನ್ನು ಆಯೋಜಿಸಿದ್ದಾರೆ. ಬೆಳೆ ಕಟಾವು, ಯಂತ್ರೋಪಕರಣ ಬಳಕೆ, ನರ್ಸರಿ ನಿರ್ವಹಣೆ ಇತ್ಯಾದಿಗೆ ಸಂಬಂಧಿಸಿದಂತೆ ವಿಡಿಯೊ ಸಿದ್ಧಪಡಿಸಿದ್ದಾರೆ. ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗದ ಬೆಳೆಗಳ ಕಡೆಗೆ ಗಮನ ಹರಿಸಿದ್ದಾರೆ. ಭತ್ತ, ಕಾಳುಮೆಣಸು, ಅಣಬೆ, ಬಾಳೆ, ಅಡಿಕೆ, ಏಲಕ್ಕಿ, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಮುಂತಾದ ಬೆಳೆಗಳಿಗೆ ಸಂಬಂಧಿಸಿದಂತೆ ಅಪ್ಡೇಟ್‌ ಮಾಹಿತಿ ನೀಡುವ ಕಾಯಕ ನಿರ್ವಹಣೆ ಮಾಡುತ್ತಿದ್ದಾರೆ.

ಇ–ತಂತ್ರಜ್ಞಾನದಿಂದಾಗಿ ಕೆವಿಕೆಗೆ ಹೋಗಿಬರುವ ಸಮಯ, ಶ್ರಮ, ಹಣ ಉಳಿತಾಯವಾಗಿದೆ. ಅನುಕೂಲ ಆಗಿದೆ. ಆದರೆ, ಮಲೆನಾಡು ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಹಳ ಇದೆ. ನೆಟ್‌ವರ್ಕ್‌ ಹುಡುಕುವುದೇ ಸವಾಲು. ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂಬುದು ರೈತರ ಮೊರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.