ADVERTISEMENT

ಮಲೆನಾಡಿನ ಸಮಸ್ಯೆಗಳ ನಿವಾರಣೆಗೆ ಚಳವಳಿ ಅನಿವಾರ್ಯ: ರೈತ ಹೋರಾಟಗಾರ ಕೆ.ಟಿ.ಗಂಗಾಧರ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:31 IST
Last Updated 19 ಜನವರಿ 2026, 4:31 IST
ಕೊಪ್ಪ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ರೈತ ಹೋರಾಟಗಾರ ಕೆ.ಟಿ.ಗಂಗಾಧರ್ ಮಾತನಾಡಿದರು. ಸಮ್ಮೇಳನ ಅಧ್ಯಕ್ಷ ಜಾಳ್ಮರ ಸುಬ್ಬರಾವ್ ಇದ್ದಾರೆ
ಕೊಪ್ಪ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ರೈತ ಹೋರಾಟಗಾರ ಕೆ.ಟಿ.ಗಂಗಾಧರ್ ಮಾತನಾಡಿದರು. ಸಮ್ಮೇಳನ ಅಧ್ಯಕ್ಷ ಜಾಳ್ಮರ ಸುಬ್ಬರಾವ್ ಇದ್ದಾರೆ   

ಕೊಪ್ಪ: ಎಲ್ಲಿ ಕೃಷಿ ಇದೆಯೋ ಅಲ್ಲಿ ಜೀವನಕ್ಕೊಂದು ಸಂಸ್ಕೃತಿ ಇದೆ. ಜಲಾಶಯ ಕಟ್ಟಿದ ಬಳಿಕ ಕೊಳವೆಬಾವಿ ಕೊರೆಯಲು ಆರಂಭಿಸಿದ ಮೇಲೆ ಬಯಲು ಸೀಮೆ ಭಾಗದಲ್ಲಿ ಅಡಿಕೆ ಕೃಷಿ ಆರಂಭವಾಗಿದೆ. ಆದರೆ ಮಲೆನಾಡಿನ ಕೃಷಿಕರ ಮಕ್ಕಳು ಕೃಷಿಗೆ ಹೆದರಿ ಬೆಂಗಳೂರಿನಲ್ಲಿ ಸಣ್ಣ ನೌಕರಿಗೆ ಸೇರುತ್ತಿದ್ದಾರೆ. ಭವಿಷ್ಯ ಹೇಗೆ ಎಂಬ ಚಿಂತೆ ಇಲ್ಲಿನ ಜನರಲ್ಲಿ ಶುರುವಾಗಿದೆ ಎಂದು ಶಿವಮೊಗ್ಗದ ಹಿರಿಯ ರೈತ ಹೋರಾಟಗಾರ ಕೆ.ಟಿ.ಗಂಗಾಧರ್ ಆತಂಕ ವ್ಯಕ್ತಪಡಿಸಿದರು.

ಕೊಗ್ರೆಯ ಹುಲ್ಸೆ ಶ್ರೀವತ್ಸ ವೇದಿಕೆಯಲ್ಲಿ ಭಾನುವಾರ ನಡೆದ ಕೊಪ್ಪ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ‘ಮಲೆನಾಡಿನ ಬದುಕು ಬವಣೆ’ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಕರಾರು ಕೃಷಿ ಒಪ್ಪಂದ ಕಾಯ್ದೆ ಜಾರಿಗೆ ಬರುವ ಹಂತದಲ್ಲಿದೆ. ಕೃಷಿಯಿಂದ ದೂರ ಉಳಿಯುವಂತೆ ಸೃಷ್ಟಿ ಮಾಡುವ ಹುನ್ನಾರವಾಗಿದೆ. ಸವಾಲುಗಳಿಗೆ ಬೆನ್ನು ಹಾಕಬಾರದು, ಎದುರಿಸಬೇಕು. ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಕೊಟ್ಟಂತೆ, ಮಲೆನಾಡು ಅಭಿವೃದ್ಧಿ ಮಂಡಳಿಗೂ ಹಣ ಕೊಡಲಿ. ಆ ಮೂಲಕ ಅಡಿಕೆ ಸಮಸ್ಯೆಗೆ ಪರಿಹಾರ ಹುಡುಕಲಿ, ಇದರಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಗೆ ಜವಾಬ್ದಾರಿ ಇದೆ. ಪ್ರಸ್ತುತ ಕೃಷಿ ಭೂಮಿಗೆ ರೋಗಗಳನ್ನು ಬಿತ್ತುವ ಏಜೆನ್ಸಿಗಳು ಇದ್ದಾವೆ. ಭಾರತದ ಮಣ್ಣು, ಬೀಜ, ನೀರು ನಾಶ ಮಾಡಲು ಮುಂದಾಗಿವೆ. ಸರ್ಕಾರ ಗೋರಕ್ ಸಿಂಗ್ ವರದಿಯಲ್ಲಿ ಆರ್ಥಿಕತೆಗೆ ಒತ್ತುಕೊಟ್ಟಿದೆ. ಉಳಿದ ಆಯಾಮಗಳ ಬಗ್ಗೆಯೂ ವಿಮರ್ಶೆ ಮಾಡಬೇಕು. ಬೀದಿಗಿಳಿದು ಹೋರಾಟ ಮಾಡುವುದು ಮಲೆನಾಡಿಗರಿಗೆ ಅಲರ್ಜಿ. ಆದರೆ, ಸಮಸ್ಯೆ ನಿವಾರಣೆಗೆ ಚಳವಳಿ ಅನಿವಾರ್ಯ' ಎಂದರು.

ADVERTISEMENT

'ಮಲೆನಾಡಿನ ಕೃಷಿ ಬದುಕಿನ ಭವಿಷ್ಯ, ವರ್ತಮಾನ ಹೊಸ ಹುಡುಕಾಟ'ದ ಬಗ್ಗೆ ಚಿಂತಕ ನೆಂಪೆ ದೇವರಾಜ್ ಮಾತನಾಡಿ, ‘ಅಡಿಕೆ ಎಂಬುದು ಮಲೆನಾಡಿನ ಬದುಕು, ಸಂಸ್ಕೃತಿ. ಆದರೆ, ಮಲೆನಾಡಿಗರ ಬದುಕು ಇತ್ತೀಚೆಗೆ ಬವಣೆಯಾಗಿದೆ. ಪ್ಲೇಗ್‌ನಂತಹ ಮಹಾಮಾರಿಗೆ ತಕ್ಷಣವೇ ಔಷಧಿ ಕಂಡು ಹಿಡಿಯುತ್ತಾರೆ. ಆದರೆ ದಶಕಗಳಿಂದ ಇರುವ ಹಳದಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳಿಗೆ ಆಗಲಿಲ್ಲ. ಅಡಿಕೆಯೇ ಇಲ್ಲದಿದ್ದರೆ ಭವಿಷ್ಯವೇನು? ಇನ್ನೆರಡು ವರ್ಷಗಳಲ್ಲಿ ಅಡಿಕೆ ಇರುವುದಿಲ್ಲ ಎಂದು ಹಳ್ಳಿಗಳಲ್ಲಿ ಮಾತನಾಡುತ್ತಿದ್ದಾರೆ. ಪ್ರದೇಶವಾರು ಬೆಳೆ ಬೆಳೆಯಬೇಕು. ಬದುಕಿನ ಹೊಸ ಹುಡುಕಾಟ ಶುರು ಮಾಡಬೇಕು. ನಾಲಾ ವಲಯದಲ್ಲಿ ಅಡಿಕೆ ಬೆಳೆಯುವುದನ್ನು ಕಡಿಮೆ ಮಾಡಬೇಕು ಎಂದು ದಯನಿಯ ಸ್ಥಿತಿಯಲ್ಲಿ ಬೇಡಿಕೊಳ್ಳೋಣ' ಎಂದರು.

'ಕೃಷಿ ಬದುಕಿನ ಯಶೋಗಾಥೆ' ವಿಷಯದ ಕುರಿತು ಲೇಖಕ ಶಿವಾನಂದ ಕಳವೆ ಮಾತನಾಡಿ, 'ಅಡಿಕೆ ಮಲೆನಾಡಿನ ಬೆಳೆ. ಕರಾವಳಿ ಕಣಿವೆಯ ಮೂಲಕ ಎಲ್ಲೆಡೆ ವ್ಯಾಪಿಸಿ ಆರ್ಥಿಕತೆಯಲ್ಲಿ ಎಲ್ಲರನ್ನು ಹಿಡಿದಿಟ್ಟಿದೆ. ಕಾಳು ಮೆಣಸು, ಏಲಕ್ಕಿ, ವೀಳ್ಯದೆಲೆ ಕೃಷಿ ಲಾಭವೆನಿಸದೆ ಅವುಗಳ ಕಡೆಗಣಿಸಲ್ಪಟ್ಟು ಬಳಿಕ ಅಡಿಕೆ ಮರಗಳು ಚಪ್ಪರದ ಕಂಬಗಳಾಗಿ ಕಾಣಿಸುತ್ತಿವೆ. ಅಡಿಕೆ ಜತೆಗೆ ಪರ್ಯಾಯ ಬೆಳೆಗಳನ್ನೂ ಬೆಳೆಯಬೇಕು. ಸಣ್ಣ ಬೆಳೆಗಳು ಹೇಗೆ ಭವಿಷ್ಯಕ್ಕೆ ದಾರಿಯಾಗುತ್ತವೆ ಎಂದು ಆಲೋಚಿಸಬೇಕು. ಮಾರುಕಟ್ಟೆಗೆ ತಕ್ಕಂತೆ ಬೆಳೆ ಬೆಳೆಯಬೇಕು. ಅಡಿಕೆಗೆ ಎಲೆಚುಕ್ಕಿ ಬಯಲು ಸೀಮೆಯಲ್ಲೂ ಶುರುವಾಗಿದೆ. ಭೂಮಿಯಲ್ಲಿ ಯಾವ ಬೆಳೆ ಬೆಳೆಯುತ್ತದೋ ಅದು ಭೂಮಿ ತಾಕತ್ತು, ಮಾರುಕಟ್ಟೆ ಕಂಡುಕೊಳ್ಳುವುದು ಕೃಷಿಕನ ತಾಕತ್ತು' ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಜಾಳ್ಮರ ಸುಬ್ಬರಾವ್, ಕೃಷಿಕ ಎ.ಎಲ್.ಪ್ರಭಾಕರ್, ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಮುಖ್ಯಸ್ಥ ಆ‌ರ್.ಡಿ.ರವೀಂದ್ರ, ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್ ಹೊಸೂರು, ಗುಡ್ಡೆತೋಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.