
ನರಸಿಂಹರಾಜಪುರ ತಾಲ್ಲೂಕು ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಳೆಕೊಪ್ಪದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿಕೊಂಡ ದನದ ಕೊಟ್ಟಿಗೆ. ಈ ಕೊಟ್ಟಿಗೆಗೆ ಅನುದಾನ ಬಿಡುಗಡೆ ಆಗಿಲ್ಲ
ನರಸಿಂಹರಾಜಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸಾಮಗ್ರಿಗಳ ವೆಚ್ಚದ ₹1.22 ಕೋಟಿ ಅನುದಾನ ಹಲವು ತಿಂಗಳಿನಿಂದ ಬಿಡುಗಡೆಯಾಗದ ಪರಿಣಾಮ ಕಾಮಗಾರಿ ಕೈಗೊಂಡ ಫಲಾನುಭವಿಗಳು ಪರದಾಡುವಂತಾಗಿದೆ.
ತಾಲ್ಲೂಕು ವ್ಯಾಪ್ತಿಯ 14 ಗ್ರಾಮ ಪಂಚಾಯಿತಿಗಳಲ್ಲಿ 2025–26ನೇ ಸಾಲಿನಲ್ಲಿ 117 ವೈಯಕ್ತಿಕ ಕಾಮಗಾರಿ ಮತ್ತು 39 ಸಮುದಾಯದ ಕಾಮಗಾರಿ ಸೇರಿ ಒಟ್ಟು 156 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು ₹1.22 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ. ₹ 44.97 ಲಕ್ಷ ಮಾತ್ರ ಪಾವತಿಯಾಗಿದೆ.
ಆಡುವಳ್ಳಿ ಗ್ರಾಮ ಪಂಚಾಯಿತಿಗೆ ₹6.81 ಲಕ್ಷ, ಬಿ.ಕಣಬೂರು ಗ್ರಾಮ ಪಂಚಾಯಿತಿಗೆ ₹21.26 ಲಕ್ಷ, ಬಾಳೆ ಗ್ರಾಮ ಪಂಚಾಯಿತಿಗೆ ₹4.16 ಲಕ್ಷ, ಬನ್ನೂರು ಗ್ರಾಮ ಪಂಚಾಯಿತಿಗೆ ₹1.39 ಲಕ್ಷ, ಗುಬ್ಬಿಗಾ ಗ್ರಾಮ ಪಂಚಾಯಿತಿಗೆ ₹13.20 ಲಕ್ಷ, ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಗೆ ₹7.32 ಲಕ್ಷ, ಕಡಹಿನಬೈಲು ಗ್ರಾಮ ಪಂಚಾಯಿತಿಗೆ ₹3 ಲಕ್ಷ, ಕಾನೂರು ಗ್ರಾಮ ಪಂಚಾಯಿತಿಗೆ ₹4.29 ಲಕ್ಷ, ಕರ್ಕೇಶ್ವರ ಗ್ರಾಮ ಪಂಚಾಯಿತಿಗೆ ₹12.27 ಲಕ್ಷ, ಮಾಗುಂಡಿ ₹1.67 ಲಕ್ಷ, ಮೆಣಸೂರು ಗ್ರಾಮ ಪಂಚಾಯಿತಿಗೆ ₹6.27 ಲಕ್ಷ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ₹20.36 ಲಕ್ಷ, ನಾಗಲಾಪುರ ಗ್ರಾಮ ಪಂಚಾಯಿತಿಗೆ ₹13.22 ಲಕ್ಷ, ಸೀತೂರು ಗ್ರಾಮ ಪಂಚಾಯಿತಿಗೆ ₹6.94 ಲಕ್ಷ ಬಿಡುಗಡೆಗೆಯಾಗಬೇಕಾಗಿದೆ. ತಾಂತ್ರಿಕ ಸಮಸ್ಯೆಯ ಕಾರಣದಿಂದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ಇದುವರೆಗೆ ಅನುದಾನವೇ ಬಿಡುಗಡೆಯಾಗಿಲ್ಲ.
ಕಳೆದ ಜೂನ್ ತಿಂಗಳಲ್ಲಿ ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಪ್ರಸ್ತಾವ ಸಲ್ಲಿಸಿದ ಮೊತ್ತಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿತ್ತು.
‘2025ರ ಆಗಸ್ಟ್ ತಿಂಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಸಾಮಗ್ರಿ ವೆಚ್ಚಗಳಿಗೆ ಎಸ್ಎನ್ಎ ಸ್ಪರ್ಶ ತಂತ್ರಾಂಶದ ಮೂಲಕ ಅನುದಾನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿತ್ತು. ಹೊಸ ತಂತ್ರಾಂಶದಲ್ಲಿ ಪ್ರಸ್ತಾವ ಸಲ್ಲಿಸಲಾಗಿದ್ದು, ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಣ ಬಿಡುಗಡೆಯಾಗುತ್ತಿದೆ. ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆ ಬಾಕಿಯಿದೆ. 3 ತಿಂಗಳಿಗೊಮ್ಮೆ ಶೇ 50ರಷ್ಟು ಅನುದಾನ ಬಿಡುಗಡೆಯಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್ ಕುಮಾರ್ ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಸ್ವಂತ ವೆಚ್ಚದಲ್ಲಿ ದನಕೊಟ್ಟಿಗೆ ನಿರ್ಮಿಸಿ 6 ತಿಂಗಳಾಗಿದೆ. ಇದುವರೆಗೂ ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆಯಾಗಿಲ್ಲ ಎಂದು ನೇರಳೆಕೊಪ್ಪ ಗ್ರಾಮದ ಎ.ಬಿ.ಪ್ರಶಾಂತ್ ‘ಪ್ರಜಾವಾಣಿ’ಬಳಿ ಅಳಲು ತೋಡಿಕೊಂಡರು.
ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಅನುದಾನ ಬಿಡುಗಡೆ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ಫಲಾನುಭವಿಗಳ ಒತ್ತಾಯವಾಗಿದೆ.
ಮುತ್ತಿನಕೊಪ್ಪ ಗ್ರಾ. ಪಂ,ಗೆ ಬಿಡುಗಡೆಯಾಗದ ಅನುದಾನ
‘ಎಸ್ಎನ್ಎ ಸ್ಪರ್ಶ್’ ಹೊಸ ತಂತ್ರಾಂಶದ ಮೂಲಕ ಪ್ರಸ್ತಾವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.