ಬಿ.ಎಚ್.ಕೈಮರ (ಎನ್.ಆರ್.ಪುರ): ‘ಸಂಪೂರ್ಣ ಲಾಕ್ ಡೌನ್ ಆಗುತ್ತದೆ, ಪಡಿತರ ಸಿಗುವುದಿಲ್ಲ’ ಎಂಬ ಆತಂಕದಿಂದ ತಾಲ್ಲೂಕಿನ ಬಿ.ಎಚ್.ಕೈಮರ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಮಂಗಳವಾರ ನೂರಾರು ಫಲಾನುಭವಿಗಳು ಪಡಿತರ ಪಡೆಯಲು ಮುಂದಾದರು.
ಇಲ್ಲಿನ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಅಂತರವಿಲ್ಲದೆ ನೂರಾರು ಫಲಾನುಭವಿಗಳು ಸೇರಿದ್ದ ವಿಡಿಯೊ ಮಂಗಳವಾರ ಬೆಳಿಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಮಾರ್ಷಲ್ ತಂಡದೊಂದಿಗೆ ಭೇಟಿ ನೀಡಿದ ತಹಶೀಲ್ದಾರ್ ಎಸ್.ರೇಣುಕಾ ಸಮಸ್ಯೆಯನ್ನು ಆಲಿಸಿದರು. ಅಂತರ ಕಾಪಾಡಿಕೊಂಡು ಸಾಲಲ್ಲಿ ನಿಂತು ಪಡಿತರ ಪಡೆಯುವಂತೆ ಸೂಚನೆ ನೀಡಿದರು.
ಪಡಿತರ ಪಡೆಯಲು ಒಂದೇ ದಿನ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಬರಲು ಕಾರಣವೇನು ಎಂದು ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ಅನಿಲ್ ಕುಮಾರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ನ್ಯಾಯ ಬೆಲೆಯ ಅಂಗಡಿಗೆ ಸಿಂಸೆ, ಕೈಮರ, ಹೊಸಕರೆ, ನಾಗಲಾಪುರ ಗ್ರಾಮದ ಸುಮಾರು 1,400 ಪಡಿತರ ಚೀಟಿದಾರರು ಬರುತ್ತಾರೆ. ಏಪ್ರಿಲ್ ತಿಂಗಳ ಪಡಿತರ 14ನೇ ತಾರೀಕಿನ ನಂತರ ವಿತರಣೆಗೆ ಲಭ್ಯವಾಗಿದೆ. ಸೀಮೆಎಣ್ಣೆ ಈ ತಿಂಗಲ 24ಕ್ಕೆ ಬಂದಿದೆ. ಹಾಗಾಗಿ ಪಡಿತರ ಮತ್ತು ಸೀಮೆಎಣ್ಣೆಯನ್ನು ಏಕಕಾಲದಲ್ಲಿ ಪಡೆಯಲು ಪಡಿತರದಾರರು ಬಂದಿದ್ದರಿಂದ ಜನದಟ್ಟಣೆ ಆಯಿತು’ ಎಂದರು. ಲಾಕ್ಡೌನ್ ಆದರೂ ಸಹ ಪಡಿತರ ವಿತರಣೆಗೆ ಅಡ್ಡಿಯಿಲ್ಲ. ತಪ್ಪು ತಿಳಿವಳಿಕೆಯಿಂದ ಲಾಕ್ಡೌನ್ ಆಗುತ್ತದೆ ಪಡಿತರ ಸಿಗುವುದಿಲ್ಲ ಎಂಬ ಕಾರಣಕ್ಕೆ ಒಮ್ಮೆಲೇ ಪಡಿತರ ಪಡೆಯಲು ಬಂದಿದ್ದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.