ADVERTISEMENT

ಚಿಕ್ಕಮಗಳೂರು: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ

ವಿಜಯಕುಮಾರ್ ಎಸ್.ಕೆ.
Published 22 ಮೇ 2025, 5:36 IST
Last Updated 22 ಮೇ 2025, 5:36 IST
<div class="paragraphs"><p>ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ದೃಶ್ಯ</p></div>

ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ದೃಶ್ಯ

   

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಈ ಬಾರಿ ಶೇ 79.56ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಶೇ 3ರಷ್ಟು(ಶೇ 80.20) ಕಡಿಮೆಯಾಗಿದೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿರುವುದು ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 42 ಸರ್ಕಾರಿ ಕಾಲೇಜುಗಳಿದ್ದು, ಈ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಬಹುತೇಕರು ಇಂಗ್ಲಿಷ್‌ ವಿಷಯದಲ್ಲೇ ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 3,942 ವಿದ್ಯಾರ್ಥಿಗಳ ಪೈಕಿ 285 ವಿದ್ಯಾರ್ಥಿಗಳ ಇಂಗ್ಲಿಷ್‌ನಲ್ಲಿ ಅನುತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 93 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ADVERTISEMENT

ಇಂಗ್ಲಿಷ್‌ಗೆ ಬದಲಾಗಿ ಹಿಂದಿಯಲ್ಲಿ ಐವರು, ಉರ್ದು, ಸಂಸ್ಕೃತ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಪಡೆದವರು ಬಹುತೇಕ ಉತ್ತೀರ್ಣರಾಗಿದ್ದಾರೆ. ಹಿಂದಿ ಭಾಷೆಯ ಪರೀಕ್ಷೆ ಬರೆದಿದ್ದ 48 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಂಸ್ಕೃತ ಭಾಷೆ ಪರೀಕ್ಷೆ ತೆಗೆದುಕೊಂಡಿದ್ದ 63 ಮತ್ತು ಉರ್ದು ಭಾಷೆ ತೆಗೆದುಕೊಂಡಿದ್ದ 8 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಅನುದಾನ ರಹಿತ 32 ಖಾಸಗಿ ಕಾಲೇಜುಗಳಿದ್ದು, ಇಂಗ್ಲಿಷ್ ಭಾಷೆಯ ಪರೀಕ್ಷೆಯನ್ನು 2,932 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 13 ವಿದ್ಯಾರ್ಥಿಗಳಷ್ಟೇ ಅನುತ್ತೀರ್ಣರಾಗಿದ್ದಾರೆ. 16 ಅನುದಾನಿತ ಕಾಲೇಜುಗಳ ಪೈಕಿ ಇಂಗ್ಲಿಷ್ ಭಾಷೆಯ ಪರೀಕ್ಷೆ ಬರೆದಿದ್ದ 551 ವಿದ್ಯಾರ್ಥಿಗಳಲ್ಲಿ 448 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 103 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಬೇರೆ ವಿಷಯಗಳಲ್ಲಿ 80–90 ಅಂಕಗಳನ್ನು ಪಡೆದಿದ್ದರೂ ಇಂಗ್ಲಿಷ್ ಭಾಷೆಯಲ್ಲಿ ಅನುತ್ತೀರ್ಣರಾಗಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ತನಕ ಕಲಿತ ಮಕ್ಕಳಿಗೆ ಪಿಯುಸಿ ಹಂತದಲ್ಲಿ ಇಂಗ್ಲಿಷ್ ಕಷ್ಟವಾಗುತ್ತಿದೆ. ಜತೆಗೆ ಗುಣಮಟ್ಟದ ಶಿಕ್ಷಣ ದೊರೆಯದಿರುವುದು ಕೂಡ ಫಲಿತಾಂಶ ಕುಸಿತಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಸರ್ಕಾರಿ ಕಾಲೇಜುಗಳ 4,603 ವಿದ್ಯಾರ್ಥಿಗಳ ಪೈಕಿ, 764 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಖಾಸಗಿ ಕಾಲೇಜುಗಳ 5,068 ವಿದ್ಯಾರ್ಥಿಗಳ ಪೈಕಿ 187 ವಿದ್ಯಾರ್ಥಿಗಳ ಅನುತ್ತೀರ್ಣರಾಗಿದ್ದಾರೆ. 

ವರದಿ ಕೇಳಿದ ಕಟಾರಿಯಾ

ಇಂಗ್ಲಿಷ್‌ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣವಾಗಲು ಕಾರಣ ಮತ್ತು ಪರಿಹಾರ ಮಾರ್ಗದ ಕುರಿತು ವರದಿ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಕೇಳಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಗಮನಿಸಿದರೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚು ಅನುತ್ತೀರ್ಣರಾಗಿದ್ದಾರೆ. ಇದಕ್ಕೆ ಕಾರಣ ಏನು, ಬೊಧಕರು ಸೇರಿ ಮೂಲಸೌಕರ್ಯ ಕೊರತೆ ಏನಿದೆ ಎಂಬ ವರದಿಯನ್ನು ಒಂದು ತಿಂಗಳಲ್ಲಿ ನೀಡಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.