ಬಾಳೆಹೊನ್ನೂರು: ಇಲ್ಲಿನ ರಂಭಾಪುರಿ ಪೀಠದಲ್ಲಿ ಈ ವರ್ಷದ ದಸರಾ ಆಚರಣೆ ಇದೇ 17 ರಿಂದ 26ರ ವರೆಗೆ ಸರಳ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ.
17ರಂದು ಸಂಜೆ 7.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆನ್ಲೈನ್ ಮೂಲಕ ಸಮಾರಂಭ ಉದ್ಘಾಟಿಸಲಿದ್ದು, ಪ್ರತಿದಿನ ಸಂಜೆ 7 ಗಂಟೆಗೆ ರಂಭಾಪುರಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸ್ವಾಭಿಮಾನಿ ಶಿವಾಚಾರ್ಯರ ಸಹಯೋಗದೊಂದಿಗೆ ಪ್ರಾರ್ಥನೆ, ಸ್ವಾಗತ, ಸದಾಶಯ ನುಡಿ, ಆಶೀರ್ವಚನ, ಸಾಂಕೇತಿಕ ನಜರ್ (ಗೌರವ) ಸಮರ್ಪಣೆ ನಡೆಯಲಿದೆ.
ಮಹಾನವಮಿ ಅಂಗವಾಗಿ 25ರಂದು ಬೆಳಿಗ್ಗೆ 10 ಗಂಟೆಗೆ ಪೀಠದ ಪಾರಂಪರಿಕ ಆಯುಧ ಪೂಜೆ ನಡೆಯು ವುದು. ವಿಜಯ ದಶಮಿ ಅಂಗವಾಗಿ 26ರಂದು ಸಂಜೆ ಸೋಮೇಶ್ವರ ದೇವಸ್ಥಾನದ ಮುಂಭಾಗದ ಪಾದಗಟ್ಟಿ ಮಂಟಪದಲ್ಲಿ ಶಮೀ ಪೂಜೆ ನಡೆಯುವುದು. ನಂತರ ವೀರಸೋಮೇಶ್ವರ ಸ್ವಾಮೀಜಿ ಅವರು ವೀರಸಿಂಹಾಸನ ಆರೋಹಣ ಮಾಡಿ ಆಶೀರ್ವಚನ ನೀಡಲಿದ್ದಾರೆ.
ಈ ವರ್ಷದ ದಸರಾ ಸಮಾರಂಭ ದಲ್ಲಿ ಸ್ವಾಮೀಜಿಯ ರಾಜಪೋಷಾಕು ಧಾರಣೆ ಇರುವುದಿಲ್ಲ. ಪ್ರತಿ ವರ್ಷದಂತೆ ಯಾವುದೇ ರೀತಿಯ ಪ್ರಶಸ್ತಿ, ಪದವಿ, ಗುರುರಕ್ಷೆಗಳು ಇರುವುದಿಲ್ಲ. 21ರಂದು ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯಿಂದ 2021ನೇ ವರ್ಷದ ದಿನದರ್ಶಿಕೆ- ಕ್ಯಾಲೆಂಡರ್ ಬಿಡುಗಡೆ ಹಾಗೂ 26ರಂದು ಹಿಂದಿನ 28 ದಸರಾ ಒಳಗೊಂಡ ‘ರಂಭಾಪುರಿ ಬೆಳಗು’ ಸಂಚಿಕೆ ಬಿಡುಗಡೆಯಾಗಲಿವೆ. 17ರಿಂದ 26ರ ವರೆಗೆ ಶರನ್ನವರಾತ್ರಿ ಅಂಗವಾಗಿ ವೀರಸೋಮೇಶ್ವರ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆ ನಡೆಸುವರು ಎಂದು ಪೀಠದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.