
ಕೊಪ್ಪ: ‘ಪರಿಶಿಷ್ಟ ಸಮುದಾಯದ ಜನರು ಹಕ್ಕುಪತ್ರ ಸಿಗದೇ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು ತಿಳಿಸಿದರು.
ತಾಲ್ಲೂಕಿನ ಕೆಸವೆಯ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ಕಾರ್ಯಕ್ರಮ ಮತ್ತು ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಪರಿಶಿಷ್ಟ ಜಾತಿ, ಪಂಗಡದ ಅನೇಕರಿಗೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ. ಶೃಂಗೇರಿ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ಸುಮಾರು ಮನೆಗಳು ಹಾನಿಯಾಗಿದ್ದು, ಅವರಿಗೆ ಹಕ್ಕುಪತ್ರ ಇಲ್ಲದೇ ಯಾವುದೇ ಮೂಲ ಸೌಕರ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಶಾಸಕರು ಈ ಬಗ್ಗೆ ಗಮನ ಹರಿಸಿ, ಆದ್ಯತೆ ಮೇಲೆ ಹಕ್ಕುಪತ್ರ ನೀಡಬೇಕು' ಎಂದು ಒತ್ತಾಯಿಸಿದರು.
ಡಿವೈಎಸ್ಪಿ ಬಾಲಾಜಿ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖಂಡ ಎಂ.ಶಿವಣ್ಣ ಉಪನ್ಯಾಸ ನೀಡಿದರು. ಡಿವೈಎಸ್ಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆಸವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಕೆರೆಯಲ್ಲಿ ದಲಿತ ಸಂಘರ್ಷ ಸಮಿತಿ ನೂತನ ಶಾಖೆ ಅಧ್ಯಕ್ಷರಾಗಿ ಕೆ.ಎಂ.ಗೋಪಾಲ, ಉಪಾಧ್ಯಕ್ಷರಾಗಿ ನಾಗೇಶ್ ಡಿ., ಕಾರ್ಯದರ್ಶಿಯಾಗಿ ರಾಮಯ್ಯ ಆಯ್ಕೆಯಾದರು. ಮಹಿಳಾ ಘಟಕದ ಅಧ್ಯಕ್ಷರಾಗಿ ಪವಿತ್ರ, ಉಪಾಧ್ಯಕ್ಷರಾಗಿ ನಿರ್ಮಲ, ಕಾರ್ಯದರ್ಶಿಯಾಗಿ ಸುನಿತಾ ಅವರನ್ನು ಆಯ್ಕೆ ಮಾಡಲಾಯಿತು.
ವಲಯ ಅರಣ್ಯಾಧಿಕಾರಿ ಜಿ.ಟಿ.ರಂಗನಾಥ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶ್ರೀಕಾಂತ್, ಮಹೇಂದ್ರ ಸ್ವಾಮಿ, ಶಿವನಿ ಅಜ್ಜಂಪುರ, ಪಿಎಸ್ಐ ಬಸವರಾಜ್ ಜಿ.ಕೆ., ಲಕ್ಷ್ಮಣ ಶಿವನಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಶೃಂಗೇರಿ ಕ್ಷೇತ್ರ ಮಹಿಳಾ ಘಟಕದ ಅಧ್ಯಕ್ಷ ವಿಮಲಾ, ನಗರ ಘಟಕ ಸಂಚಾಲಕ ಚಂದ್ರು, ನಗರ ಮಹಿಳಾ ಘಟಕ ಸಂಚಾಲಕಿ ಆಶಾ, ಮಹಿಳಾ ಘಟಕದ ಕಾರ್ಯದರ್ಶಿ ರಾಗಿಣಿ, ಲಾರೆನ್ಸ್, ಸುಧಾಕರ, ಶಿವು, ಕಲಾವತಿ, ಸಂಜೀವ, ಅರುಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.