ADVERTISEMENT

ಸಂಸದ ಸೂರ್ಯ ತೇಜಸ್ವಿ ವಿಮಾನದ ಬಾಗಿಲು ಎಳೆದಿಲ್ಲ, ಕೈ ತಾಗಿದೆ ಅಷ್ಟೇ: ಅಣ್ಣಾಮಲೈ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 11:38 IST
Last Updated 19 ಜನವರಿ 2023, 11:38 IST
   

ಚಿಕ್ಕಮಗಳೂರು: ‘ಸಂಸದ ಸೂರ್ಯ ತೇಜಸ್ವಿ ಅವರು ವಿಮಾನದ ತುರ್ತು ನಿರ್ಗಮನದ ದ್ವಾರ ತೆರೆದರು ಎಂಬುದರಲ್ಲಿ ಹುರುಳಿಲ್ಲ. ಕಾಂಗ್ರೆಸ್‌ನವರು ವೃಥಾ ಹುಯಿಲು ಹಬ್ಬಿಸುತ್ತಿದ್ದಾರೆ’ ಎಂದು ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ನವರಿಗೆ ಮಾತನಾಡಲು ವಿಷಯಗಳಿಲ್ಲ. ಹೀಗಾಗಿ, ಇಂಥ ವ್ಯರ್ಥ ವಿಷಯಗಳ ಚರ್ಚೆಯಲ್ಲಿ ತೊಡಗಿದ್ದಾರೆ.’ ಎಂದು ವ್ಯಂಗ್ಯವಾಡಿದರು.

‘ಎಟಿಆರ್‌–72 ಸಣ್ಣ ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರದ ಬದಿಯ ಸೀಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ಕುಳಿತಿದ್ದರು. ಅವರು ಮಾತನಾಡುವಾಗ ಕೈ ಬಾಗಿಲಿಗೆ ತಗುಲಿದೆ. ತಕ್ಷಣವೇ ಗಗನಸಖಿಗೆ ವಿಷಯ ತಿಳಿಸಲಾಯಿತು. ಪೈಲಟ್‌ ಬಂದು ಪರಿಶೀಲಿಸಿದರು. ತೇಜಸ್ವಿ ವಿಮಾನದಲ್ಲಿ ಬಾಗಿಲನ್ನು ಎಳೆದಿಲ್ಲ. ಅವರು ಇದೆಲ್ಲವನ್ನು ಇನ್ಸಿಡೆಂಟ್‌ ರಿಪೋರ್ಟ್‌ ಫಾರ್ಮ್‌ನಲ್ಲಿ (ಘಟನಾ ವಿವರ) ಉಲ್ಲೇಖಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಘಟನೆಯಲ್ಲಿ ತೇಜಸ್ವಿ ಅವರದೇನು ತಪ್ಪಿಲ್ಲ. ವಿಮಾನ ಒಂದು ಗಂಟೆ ತಡವಾಗಿದ್ದಕ್ಕೆ ಅವರು ಪ್ರಯಾಣಿಕರ ಕ್ಷಮೆಯಾಚಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.