ಶೆಟ್ಟಿಕೊಪ್ಪ(ಎನ್.ಆರ್.ಪುರ): ‘ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ದೇಶವನ್ನು ಕ್ಷಯ ಮುಕ್ತಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ’ ಎಂದು ಕ್ಷಯರೋಗ ಮುಕ್ತ ಸೈಟ್ ಕೊ–ಆರ್ಡಿನೇಟರ್ ಹೇಮಂತ್ ಕುಮಾರ್ ಹೇಳಿದರು.
ಕಡಹಿನಬೈಲು ಗ್ರಾಮ ಪಂಚಾಯಿತಿಯ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ವಾರದ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ 2015ರಿಂದ ಕ್ಷಯರೋಗ ಮುಕ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆದರೆ, ಇದುವರೆಗೆ ಶೇ 40ರಷ್ಟು ಮಾತ್ರ ಸಾಧನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಶೇ 100ರಷ್ಟು ಸಾಧನೆಗೆ ಮುಂದಾಗಿದ್ದು, ಅದರಂತೆ ರಾಜ್ಯದಲ್ಲಿ ಚಿಕ್ಕಮಗಳೂರು (ಅರಣ್ಯ ಪ್ರದೇಶ) ಹಾಗೂ ಚಿಕ್ಕಬಳ್ಳಾಪುರ (ಬಯಲು ಸೀಮೆ ಪ್ರದೇಶ) ಜಿಲ್ಲೆಗಳಲ್ಲಿ ಕ್ಷಯರೋಗದ ಬಗ್ಗೆ ತಪಾಸಣೆ ಕೈಗೊಳ್ಳಲಾಗಿದೆ ಎಂದರು.
ಶೃಂಗೇರಿಯ ಅಡ್ಡಗದ್ದೆ ಗ್ರಾ.ಪಂ., ನರಸಿಂಹರಾಜಪುರ ತಾಲ್ಲೂಕಿನ ಕಡಹಿನಬೈಲು ಗ್ರಾ.ಪಂ., ಮೂಡಿಗೆರೆಯ ನಿಡುವಾಳೆ ಗ್ರಾ.ಪಂ., ತರೀಕೆರೆಯ ಎಂ.ಸಿ.ಹಳ್ಳಿ ಗ್ರಾ.ಪಂ., ಕಡೂರಿನ ಜೋಡಿ ಲಿಂಗದಹಳ್ಳಿ ಗ್ರಾ.ಪಂ. ಹಾಗೂ ಚಿಕ್ಕಮಗಳೂರಿನ ನಗರಸಭೆ ವ್ಯಾಪ್ತಿಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಕ್ಷಯರೋಗ ತಪಾಸಣೆ ಹಾಗೂ ಗ್ರಾಮಸ್ಥರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕೆಮ್ಮು, ಕಫ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಎಂದರು.
ಕಡಹಿನಬೈಲು ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ, ಅಭಿವೃದ್ಧಿ ಅಧಿಕಾರಿ ವಿಂದ್ಯಾ, ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲಾ ಮಹೇಶ್, ರವೀಂದ್ರ, ಪೂರ್ಣಿಮಾ, ಗ್ಯಾರಂಟಿ ಯೋಜನೆಯ ಸದಸ್ಯ ಬೇಸಿಲ್, ಶಿಕ್ಷಕ ಅರುಣ್ ಕುಮಾರ್, ಆರೋಗ್ಯ ಶಿಬಿರಾಧಿಕಾರಿ ಜಮೀಲ್ ಅಹಮ್ಮದ್, ತಾಂತ್ರಿಕ ಅಧಿಕಾರಿ ಮಹೇಶ್, ನಿಹಾರಿಕ, ಯಾಕೋಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.