
ಚಿಕ್ಕಮಗಳೂರು: ‘ಗುರು ದತ್ತಾತ್ರೇಯ ಸ್ವಾಮಿ ಪೀಠದ ಗುಹೆಯಲ್ಲಿ ಹೊಸದಾಗಿ ‘ಕಲಮೆ ತಯ್ಯಬಾ’ ಆಚರಣೆ ನಡೆಸಲಾಗಿದೆ. ಇದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಅನುಮತಿ ನೀಡಿರುವುದು ಕಾನೂನುಬಾಹಿರ’ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಟಿ.ರಂಗನಾಥ್ ಆರೋಪಿಸಿದರು.
‘ದತ್ತಪೀಠದಲ್ಲಿ ಹಿಂದೆ ವ್ಯವಸ್ಥಾಪನಾ ಸಮಿತಿ ಇದ್ದಾಗ ಹೊಸ ಆಚರಣೆಗಳಿಗೆ ಅವಕಾಶ ನೀಡಿರಲಿಲ್ಲ. ಸಮಿತಿ ಅವಧಿ ಮುಗಿದ ಬಳಿಕ ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದು, ಜ. 23ರಂದು ಹೊಸದಾಗಿ ಈ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದತ್ತಗುಹೆ ಎದುರು ಹೋಮ ನಡೆಸಲು ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾಗ, ಪ್ರಕರಣ ಕೋರ್ಟ್ನಲ್ಲಿ ಇರುವ ಕಾರಣ ಅನುಮತಿ ನೀಡಲಾಗದು ಎಂದು ಉತ್ತರಿಸಿದ್ದರು. ಆದರೆ, ಈಗ ಹೊಸ ಆಚರಣೆಗೆ ಅವಕಾಶ ನೀಡಿರುವುದರಿಂದ ನಮಗೂ ಹೋಮಕ್ಕೆ ಅನುಮತಿ ನೀಡಬೇಕು. ಒಂದು ವೇಳೆ ಹೋಮ ಮಾಡಲು ಅವಕಾಶ ನೀಡದಿದ್ದಲ್ಲಿ, ಜಿಲ್ಲಾಧಿಕಾರಿ ವಿರುದ್ಧ ಅರ್ಜಿ ಸಲ್ಲಿಸಲಾಗುವುದು’ ಎಂದರು.
‘ವಿಚಾರಣೆ ವೇಳೆ ಆಗಿನ ಶಾಖಾದ್ರಿ ಸೈಯದ್ ಪೀರ್ ಮೊಹಮ್ಮದ್ ಶಾಖಾದ್ರಿ ಅವರು ದತ್ತಪೀಠದಲ್ಲಿ ಪೂಜೆ ಮಾಡುವವರ ಅರ್ಹತೆ ಕುರಿತು ಹೇಳಿಕೆ ನೀಡಿದ್ದರು. ಅದರಂತೆ ಮುಜಾವರ್ಗಳು ಅವಿವಾಹಿತರಾಗಿದ್ದು, ಅವರ ಸೇವಾವಧಿ 25 ವರ್ಷಗಳಿಗೆ ಸೀಮಿತ ಎಂದು ಉಲ್ಲೇಖಿಸಿದ್ದರು. ಆದರೆ, ಈಗಿರುವ ಮೂವರು ಮುಜಾವರ್ಗಳಿಗೆ ವಿವಾಹವಾಗಿದ್ದು, ಮಕ್ಕಳು, ಮೊಮ್ಮಕ್ಕಳಿದ್ದಾರೆ. 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹೇಳಿದರು.
‘ಹಿಂದೂ ಪದ್ಧತಿಯಲ್ಲಿ ಮದುವೆ ಆಗದಿರುವವರೇ (ಅವಿವಾಹಿತರು) ಪೂಜೆ ಮಾಡಬೇಕೆಂದು ನಿಯಮವಿಲ್ಲ. ಶಾಖಾದ್ರಿಯವರ ಹೇಳಿಕೆಯಂತೆ ನಿಯಮಗಳಿಗೆ ಅನುಸಾರವಾಗಿ ಕೂಡಲೇ ಮುಜಾವರ್ಗಳನ್ನು ಬದಲಾಯಿಸಬೇಕು. ಜಿಲ್ಲಾಡಳಿತವು ಒಂದು ವೇಳೆ ಈ ಮುಜಾವರ್ಗಳನ್ನು ಮುಂದುವರಿಸಿದರೆ, ಕೋರ್ಟ್ ಹಾಗೂ ಧರ್ಮದತ್ತಿ ಆಯುಕ್ತರ ಆದೇಶ ಉಲ್ಲಂಘನೆಯಾಗಲಿದೆ’ ಎಂದು ಟಿ. ರಂಗನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅಮಿತ್, ಸಹ ಸಂಯೋಜಕ ಸುನಿಲ್, ಶಾಮ್ ವಿ. ಗೌಡ, ಮಾತೃಶಕ್ತಿ ಪ್ರಮುಖ್ ಪುಷ್ಪಾಂಜಲಿ, ವಿನೂತ, ಮೇಘಾ ಪಾಲ್ಗೊಂಡಿದ್ದರು.