ADVERTISEMENT

ನರಸಿಂಹರಾಜಪುರ: ರಾತ್ರಿಯಿಡೀ ಮೋರಿಯಲ್ಲಿದ್ದರೂ ಬದುಕುಳಿದ ಮಹಿಳೆ

ನರಸಿಂಹರಾಜಪುರದ ಬಿ.ಎಚ್‌.ಕೈಮರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 15:50 IST
Last Updated 23 ಸೆಪ್ಟೆಂಬರ್ 2020, 15:50 IST
ನರಸಿಂಹರಾಜಪುರ ತಾಲ್ಲೂಕಿನ ಬಿ.ಎಚ್.ಕೈಮರದಲ್ಲಿ ಕುಡಿದ ಅಮಲಿನಲ್ಲಿ ಚರಂಡಿಯೊಳಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಲಾಯಿತು
ನರಸಿಂಹರಾಜಪುರ ತಾಲ್ಲೂಕಿನ ಬಿ.ಎಚ್.ಕೈಮರದಲ್ಲಿ ಕುಡಿದ ಅಮಲಿನಲ್ಲಿ ಚರಂಡಿಯೊಳಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಲಾಯಿತು   

ನರಸಿಂಹರಾಜಪುರ: ರಾತ್ರಿಯಿಂದ ಬೆಳಗ್ಗಿನವರೆಗೂ ಚಪ್ಪಡಿ ಮುಚ್ಚಿದ್ದ ಮೋರಿಯ ಅಡಿ ಬಿದ್ದಿದ್ದ ಮಹಿಳೆಯೊಬ್ಬರು ಪವಾಡ ಸದೃಶವಾಗಿ ಬದುಕುಳಿದ ಘಟನೆ ತಾಲ್ಲೂಕಿನ ಬಿ.ಎಚ್.ಕೈಮರದಲ್ಲಿ ನಡೆದಿದೆ.

ಬಿ.ಎಚ್.ಕೈಮರ ಸಮೀಪದ ಕುಂಬರಿಕಾಡು ರಾಮಕ್ಕ (53) ಬದುಕುಳಿದ ಮಹಿಳೆ. ಬಿ.ಎಚ್.ಕೈಮರದಿಂದ ಹಳ್ಳಿಬೈಲು, ನಾಗರಮಕ್ಕಿಗೆ ಹೋಗುವ ಬೈಪಾಸ್‍ ರಸ್ತೆಯ ಆರಂಭದಲ್ಲಿ ಸಾಲಾಗಿರುವ ಅಂಗಡಿಗಳ ಮುಂಭಾಗದಲ್ಲಿನ ದೊಡ್ಡ ಚರಂಡಿಯನ್ನು ಚಪ್ಪಡಿಯಿಂದ ಮುಚ್ಚಲಾಗಿದೆ. ಆದರೆ, ಚರಂಡಿಯ ಒಂದು ಬದಿ ತೆರೆದಿತ್ತು.

ಮಂಗಳವಾರ ರಾತ್ರಿ ಮಹಿಳೆಯು ಚರಂಡಿಯ ತೆರೆದ ಭಾಗದಲ್ಲಿ ಬಿದ್ದಿದ್ದು, ಮುಚ್ಚಿದ ಚರಂಡಿಯೊಳಗಿನ ಕತ್ತಲಲ್ಲೇ 30 ಅಡಿ ಮುಂದೆ ಹೋಗಿ ನಿತ್ರಾಣರಾಗಿದ್ದರು. ಚರಂಡಿಯ ತೆರೆದಿರುವ ಭಾಗದಲ್ಲಿ ಒಡೆದು ಹೋದ ಕುಡಿಯುವ ನೀರಿನ ಪೈಪ್‍ ದುರಸ್ತಿ ಮಾಡಲು ಸ್ಥಳೀಯ ಬಾಲಕನೊಬ್ಬ ಚರಂಡಿಗೆ ಇಳಿದಾಗ ಮಹಿಳೆ ಸಣ್ಣ ಸ್ವರದಲ್ಲಿ ನರಳುತ್ತಿರುವುದು ಕೇಳಿ ಬಂದಿದೆ.

ADVERTISEMENT

ತಕ್ಷಣವೇ ಸ್ಥಳೀಯ ಪೆಟ್ರೋಲ್ ಬಂಕ್ ಬಿನು, ಶಕೀಲ್, ಪ್ರಕಾಶ್, ಸಚಿನ್, ರಂಜಿತ್‍ ಎನ್ನುವವರು ಮಹಿಳೆಯ ಧ್ವನಿ ಕೇಳಿ ಬರುತ್ತಿರುವ ಜಾಗದಲ್ಲಿ ಚಪ್ಪಡಿ ತೆಗೆದಿದ್ದಾರೆ. ಆಗ, ತಲೆಗೆ ಗಾಯವಾಗಿ ಅರೆ ಪ್ರಜ್ಞಾವ್ಯವಸ್ಥೆಯಲ್ಲಿ ಮಹಿಳೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ನರಸಿಂಹರಾಜಪುರದ ಸಮಾಜ ಸೇವಕಿ ಜುಬೇದಾ ಅವರಿಗೆ ಮಾಹಿತಿ ನೀಡಿದ್ದಾರೆ. ಅಂಬುಲೆನ್ಸ್‌ ನೊಂದಿಗೆ ಬಂದ ಜುಬೇದಾ, ಆಮಹಿಳೆಯನ್ನು ಸ್ವಚ್ಛಗೊಳಿಸಿ, ಬೇರೆ ಬಟ್ಟೆ ತೊಡಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.