ADVERTISEMENT

‘ಸಂವಿಧಾನದಿಂದ ಅವಕಾಶ; ಬೇಕಿದೆ ಅವಲೋಕನ’

ಜಿಲ್ಲೆಯಾದ್ಯಂತ ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ; ವಿಚಾರ ಸಂಕಿರಣ, ಸಂವಾದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:33 IST
Last Updated 7 ಡಿಸೆಂಬರ್ 2025, 5:33 IST
ಅಂಬೇಡ್ಕರ್‌ ಪರಿನಿರ್ವಾಣ ದಿನದ ಅಂಗವಾಗಿ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ಆವರಣದಿಂದ ಆರಂಭಗೊಂಡ ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪ್ರಧಾನ ಮತ್ತು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ರೋಣ ವಾಸುದೇವ ಚಾಲನೆ ನೀಡಿದರು
ಅಂಬೇಡ್ಕರ್‌ ಪರಿನಿರ್ವಾಣ ದಿನದ ಅಂಗವಾಗಿ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ಆವರಣದಿಂದ ಆರಂಭಗೊಂಡ ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪ್ರಧಾನ ಮತ್ತು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ರೋಣ ವಾಸುದೇವ ಚಾಲನೆ ನೀಡಿದರು   

ಚಿತ್ರದುರ್ಗ: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ನಮ್ಮ ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಸಂವಿಧಾನ ನೀಡಿದ ಅವಕಾಶಗಳನ್ನು ನಾವು ಎಷ್ಟರಮಟ್ಟಿಗೆ ಸದುಪಯೋಗ ಮಾಡಿಕೊಂಡಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಚಿಂತಕ ವೇದಾಂತ್‌ ಏಳಂಗಿ ಹೇಳಿದರು.

ಅಂಬೇಡ್ಕರ್‌ ಪರಿನಿರ್ವಾಣ ದಿನದ ಅಂಗವಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ, ಸ್ಲಂ ಜನಾಂದೋಲನ ಸಂಘಟನೆ ವತಿಯಿಂದ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಸಂವಿಧಾನ ಅರಿತುಕೊಳ್ಳಲು ಬಹುದೊಡ್ಡ ಜ್ಞಾನಬೇಕೆಂಬ ಬೀಜವನ್ನು ಮನಸ್ಸಿನಲ್ಲಿ ಬಿತ್ತುವ ಕಾರ್ಯ ಆಗಿದೆ. ವಾಸ್ತವವಾಗಿ ಸಂವಿಧಾನ ಅತ್ಯಂತ ಸರಳವಾಗಿದೆ. ನಿತ್ಯ ಜೀವನ, ವ್ಯವಹರಿಸುವ ಚಟುವಟಿಕೆ, ಬದುಕು ಇವೆಲ್ಲವೂ ಸಂವಿಧಾನವೇ ಆಗಿದೆ’ ಎಂದರು.

ADVERTISEMENT

‘ಜಾತಿ, ಧರ್ಮ, ಪ್ರಾದೇಶಿಕತೆ ಹೆಸರಲ್ಲಿ ಜನರನ್ನು ಇಬ್ಭಾಗ ಮಾಡುವ ಕೆಲಸವನ್ನು ಅಂಬೇಡ್ಕರ್ ಮಾಡಲಿಲ್ಲ. ಬದಲಿಗೆ ಎಲ್ಲ ವರ್ಗದ ಜನರಿಗೆ ಹಕ್ಕುಗಳನ್ನು ಕೊಡಿಸಲು ಶ್ರಮಿಸಿದರು. ಜಾತ್ಯತೀತ ಮನೋಭಾವ, ಸಮ ಸಮಾಜದ ಕನಸುಗಳೊಂದಿಗೆ ಸಂವಿಧಾನ ರಚಿಸಿದರು. ನೋಟು ಮುದ್ರಣ ಸರ್ಕಾರದ ಕೈಯಲ್ಲಿರಬಾರದು. ಅದಕ್ಕಾಗಿ ಸ್ವತಂತ್ರ ಸಂಸ್ಥೆ ಇರಬೇಕು ಹಾಗೂ ನೋಟು ಮುದ್ರಣಕ್ಕೆ ಇಂತಿಷ್ಟು ಚಿನ್ನ ಆಧಾರವಿಡಬೇಕೆಂದು ಪ್ರಬಂಧ ಮಂಡಿಸಿದ ಫಲ ಆರ್‌ಬಿಐ ರೂಪಗೊಂಡಿತು’ ಎಂದು ತಿಳಿಸಿದರು. 

ದಸಂಸ ಮುಖಂಡ ಡಿ.ದುರುಗೇಶ್ ಮಾತನಾಡಿ ‘ಸಂವಿಧಾನದ ಅಂಶಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಆಡಳಿತ ಪಕ್ಷಗಳು ಪ್ರಯತ್ನಿಸಿಲ್ಲ. ಆದ್ದರಿಂದ ನಾವು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿರುವುದು ದುರದೃಷ್ಟಕರ’ ಎಂದರು.

ಸಾಮಾಜಿಕ ಸಂಘರ್ಷ ಸಮಿತಿ ಸಂಚಾಲಕ ಟಿ.ರಾಮಣ್ಣ ಮಾತನಾಡಿ ‘ಅಂಬೇಡ್ಕರ್ ನಿಧನದ ಬಳಿಕ 20 ವರ್ಷ ಅವರ ಕಾರ್ಯ ಸ್ಮರಿಸುವ ಕೆಲಸವೇ ಆಗಲಿಲ್ಲ. ದಸಂಸ ವತಿಯಿಂದ ನಾಡಿನಲ್ಲಿ ಜಾಗೃತಿ ಮೂಡಿತು. ಈಗ ಅಂಬೇಡ್ಕರ್ ಅವರನ್ನು ದೇವರ ರೀತಿ ಪೂಜೆ ಮಾಡಲಾಗುತ್ತಿರುವುದು ಅಪಾಯಕಾರಿ ನಡೆಯಾಗಿದೆ’ ಎಂದು ಅಭಿಪ್ರಾಯಪಟ್ಟರು. 

‘ಖಾಸಗೀಕರಣ ಮೀಸಲಾತಿಗೆ ಕಂಟಕವಾಗಿದ್ದು, ಸಂವಿಧಾನದ ಆಶಯಗಳನ್ನು ರಕ್ಷಿಸಬೇಕಿದೆ. ಮೀಸಲಾತಿಯಡಿ ಗೆದ್ದ ಚಿತ್ರದುರ್ಗದ ಸಂಸದರು ದಲಿತ ಸಮುದಾಯದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಾಗ, ಕೊಲೆಯಾದಾಗ ಬಾಯಿ ಬಿಡಲಿಲ್ಲ. ಇಂತಹವರಿಂದ ಸಂವಿಧಾನ ರಕ್ಷಣೆಗೆ ಹೇಗೆ ಸಾಧ್ಯವೇ’ ಎಂದು ಅಧ್ಯಕ್ಷತೆ ವಹಿಸಿದ್ದ ಹನುಮಂತಪ್ಪ ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎಂ.ಮಲ್ಲಣ್ಣ, ಕುರುಬ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಮಂಜಪ್ಪ ಹಿರಿಯ ಮುಖಂಡ ಬಿ.ರಾಜಪ್ಪ ಜೆಜೆ ಹಟ್ಟಿ, ರುದ್ರಮುನಿ ಮಾತನಾಡಿದರು. ನೀರಾವರಿ ಹೋರಾಟ ಸಮಿತಿ ಸಂಚಾಲಕ ಈ.ಮಹೇಶಬಾಬು, ಸ್ಲಂ ಜನ ಸಂಘಟನೆ ಸಂಚಾಲಕ ಟಿ.ಮಂಜುನಾಥ್, ಮುಖಂಡರಾದ ಭಾಗ್ಯಮ್ಮ, ಎಂ.ಮಹೇಶ್, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ ಇದ್ದರು.

ಬಿಜೆಪಿ ಕಚೇರಿಯಲ್ಲಿ ನಮನ

ನಗರದ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮ ನಡೆಯಿತು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಮೋಹನ್ ಕುಮಾರ್ ಮಾತನಾಡಿ ‘ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡುವ ಜೊತೆಗೆ ಶೋಷಣೆಗೊಳಗಾದ ಪ್ರತಿಯೊಬ್ಬರ ಮನದಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ್ದಾರೆ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ‘ಅಂಬೇಡ್ಕರ್ ಪಂಚ ತೀರ್ಥ’ ಪರಿಕಲ್ಪನೆ ಜಾರಿಯಾಗಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಎಸ್.ಸಿ.ಮೋರ್ಚಾದ ಅಧ್ಯಕ್ಷ ತರಿಕೇರೆ ತಿಪ್ಪೇಸ್ವಾಮಿ, ಸಂಪತ್ ಕುಮಾರ್, ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೆ ಇದ್ದರು.

ಕಾಂಗ್ರೆಸ್‌ ಕಚೇರಿಯಲ್ಲಿ ಸ್ಮರಣೆ

ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಪರಿನಿರ್ವಾಣ ದಿನ ನಡೆಯಿತು.

ಕಾಂಗ್ರೆಸ್‌ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಜಯಣ್ಣ ಮಾತನಾಡಿ ‘ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಸಂವಿಧಾನದ ಆಶಯದಲ್ಲಿ ಎಲ್ಲರೂ ನಡೆಯಬೇಕು’ ಎಂದರು.

ಮಹಿಳಾ ರಾಜ್ಯ ಘಟಕದ ಕಾರ್ಯದಶೀ ಮುನಿರಾ ಮುಕಂದರ, ಮುಖಂಡರಾದ ಮೈಲಾರಪ್ಪ, ತಾಜ್‌ ಪೀರ್‌, ಹಾಲಸ್ವಾಮಿ, ಸಂಪತ್ ಕುಮಾರ್ ಇದ್ದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಸ್ಲಂ ಜನಾಂದೋಲನ ಸಂಘಟನೆ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಚಿಂತಕ ವೇದಾಂತ್‌ ಏಳಂಗಿ ಮಾತನಾಡಿದರು

ಸಂವಿಧಾನದ ಅಡಿ ಬದುಕೋಣ...

ವಕೀಲರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಂಬೇಡ್ಕರ್‌ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ನಡೆಯಿತು. ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ರೋಣ ವಾಸುದೇವ್‌ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ‘ಸಂವಿಧಾನದ ಆಶಯಗಳ ಅಡಿ ನಾವು ಬದುಕು ನಡೆಸಬೇಕು. ಸಂವಿಧಾನಿಕ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಆ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಬೇಕು’ ಎಂದರು.  ಅಂಬೇಡ್ಕರ್‌ ವೃತ್ತದವರೆಗೂ ಮೆರವಣಿಗೆ ಸಾಗಿತು. ಅಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.