ADVERTISEMENT

ಜಾಗನೂರಹಟ್ಟಿ: ಕೂಪದಂತ ಕಟ್ಟಡಗಳಲ್ಲಿ ಕಲಿಯುವ ಕಂದಗಳು

ವಿ.ಧನಂಜಯ
Published 20 ಜುಲೈ 2025, 6:49 IST
Last Updated 20 ಜುಲೈ 2025, 6:49 IST
<div class="paragraphs"><p>ನಾಯಕನಹಟ್ಟಿ ಪಟ್ಟಣದ ಜಾಗನೂರಹಟ್ಟಿ ಗ್ರಾಮದಲ್ಲಿರುವ ಮೂಲ ಸೌಕರ್ಯ ವಂಚಿತ ಅಂಗನವಾಡಿ ಕಟ್ಟಡ&nbsp;</p></div>

ನಾಯಕನಹಟ್ಟಿ ಪಟ್ಟಣದ ಜಾಗನೂರಹಟ್ಟಿ ಗ್ರಾಮದಲ್ಲಿರುವ ಮೂಲ ಸೌಕರ್ಯ ವಂಚಿತ ಅಂಗನವಾಡಿ ಕಟ್ಟಡ 

   

ನಾಯಕನಹಟ್ಟಿ: ಕಿತ್ತುಹೋಗಿರುವ ಚಾವಣಿ, ಅಲ್ಲಲ್ಲಿ ತಗ್ಗುಬಿದ್ದಿರುವ ಸಿಮೆಂಟ್ ನೆಲ, ಬೆಳಕು ಗಾಳಿಯಾಡದೆ ಕಮಟು ವಾಸನೆ ಸೂಸುವ ಕೊಠಡಿಗಳಲ್ಲಿಯೇ ಪುಟ್ಟಕಂದಗಳ ಆಟ, ಪಾಠ, ಊಟ, ನಿದ್ದೆ. ಮೂಲ ಸೌಕರ್ಯ ಒದಗಿಸುವ ಹೊಣೆಗಾರಿಕೆಯಿಂದ ನುಣಿಚಿಕೊಂಡಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು...

ಇದು ನಾಯಕನಹಟ್ಟಿ ಬಳಿಯ ಜಾಗನೂರಹಟ್ಟಿ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳ ದುಃಸ್ಥಿತಿ.

ADVERTISEMENT

ನಾಯಕನಹಟ್ಟಿ ಪಟ್ಟಣಪಂಚಾಯಿತಿ ವ್ಯಾಪ್ತಿಯ ಈ ಗ್ರಾಮವು ಎರಡು ವಾರ್ಡ್‌ಗಳಿಂದ ಕೂಡಿದ್ದು, ಒಂದನೇ ವಾರ್ಡ್‌ನಲ್ಲಿ 1,300, ಎರಡನೇ ವಾರ್ಡ್‌ನಲ್ಲಿ 1,100 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎರಡು ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಅಂಗನವಾಡಿ ಕೇಂದ್ರ ‘ಎ’ನಲ್ಲಿ 24 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಇದರ ವ್ಯಾಪ್ತಿಯಲ್ಲಿ 10 ಜನ ಗರ್ಭಿಣಿಯರು, 8 ಜನ  ಬಾಣಂತಿಯರಿಗೆ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಅಂಗನವಾಡಿ ಕೇಂದ್ರ ‘ಬಿ’ನಲ್ಲಿ 14 ವಿದ್ಯಾರ್ಥಿಗಳಿದ್ದು, ನಾಲ್ವರು ಗರ್ಭಿಣಿಯರು, 5 ಜನ ಬಾಣಂತಿಯರ ಆರೈಕೆ ನಡೆಯುತ್ತಿದೆ.

ಮೂಲಸೌಕರ್ಯ ಮರೀಚಿಕೆ:

ಈ ಎರಡೂ ಅಂಗನವಾಡಿ ಕೇಂದ್ರಗಳ ಕಟ್ಟಡಗಳು  ಹಳೆಯವಾಗಿದ್ದು, ಒಂದು ಕೊಠಡಿ ಮಕ್ಕಳಿಗಿದೆ.

‘ಎ’ ಕೇಂದ್ರದಲ್ಲಿ 8 ಅಡಿಗಳ ಉದ್ದ 4 ಅಡಿಗಳಷ್ಟು ಅಗಲದ ಮತ್ತೊಂದು ದಾಸ್ತಾನು ಕೊಠಡಿ ಇದ್ದು, ಅದರಲ್ಲಿಯೇ ಆಹಾರ ಸಾಮಗ್ರಿಗಳು, ಅಡುಗೆ ತಯಾರಿ ನಡೆಯುತ್ತದೆ. ಕಟ್ಟಡದ ಚಾವಣಿಯಲ್ಲಿ ಸಿಮೆಂಟ್ ಉದುರುತ್ತಿದೆ. ಈ ಎರಡೂ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತವೆ. ಕೊಠಡಿಯೊಳಗಿನ ನೆಲಹಾಸು ಕಿತ್ತುಹೋಗಿದೆ.

ಕೊಠಡಿಗೆ ವಿದ್ಯುತ್ ಸಂಪರ್ಕ ಕಡಿತವಾಗಿರುವ ಕಾರಣ ಲೈಟ್‌, ಫ್ಯಾನ್‌ ಇಲ್ಲದೆ ಬೆಳಕು, ಗಾಳಿ ವ್ಯವಸ್ಥೆ ಇಲ್ಲ. ಇದರಿಂದ ಅಡುಗೆ ಮಾಡುವಾಗ ಬರುವ ವಾಸನೆ, ಕೊಠಡಿಗಳಲ್ಲಿ ತುಂಬಿರುವ ಆಹಾರ ಸಾಮಗ್ರಿಗಳ ದಾಸ್ತಾನುಗಳ ವಾಸನೆಯಿಂದ ಮಕ್ಕಳಿಗೆ ಸಮಸ್ಯೆಯಾಗುತ್ತದೆ.

ಕುಡಿಯುವ ನೀರಿಗೆ ಅಂಗನವಾಡಿಯಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಬದಲಾಗಿ ಅಂಗನವಾಡಿ ಪಕ್ಕದಲ್ಲಿರುವ ಸಾರ್ವಜನಿಕ ನಳದ ನೀರನ್ನೇ ಕುಡಿಯಲು, ಅಡುಗೆಗೆ ಬಳಸಲಾಗುತ್ತಿದೆ. ಸಾರ್ವಜನಿಕ ನಳವು ನೆಲಮಟ್ಟದಲ್ಲಿ ಇರುವುದರಿಂದ ನೀರು ತುಂಬುವಾಗ ಗಲೀಜು ನೀರು ಸಂಗ್ರಹವಾಗುವ ಸಂಭವ ಹೆಚ್ಚಿದೆ.

‘ಬಿ’ ಕೇಂದ್ರದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾಗಿರುವ ಯಾವುದೇ ಕಲಿಕಾ ಪೀಠೋಪರಣಗಳು ಇಲ್ಲ. ಅಡುಗೆ ತಯಾರಿಸಲು ಪಾತ್ರೆಗಳು, ಗ್ಯಾಸ್ ಒಲೆ, ಸಿಲಿಂಡರ್ ವ್ಯವಸ್ಥೆಯಿಲ್ಲ. ಶೌಚಾಲಯದ ವ್ಯವಸ್ಥೆಯಿಲ್ಲ.

ಇದರಿಂದ ಸಾಂತ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರಾದ ಮುತ್ತಯ್ಯ, ಪಾಲಯ್ಯ, ತಿಪ್ಪೇಸ್ವಾಮಿ ದೂರುತ್ತಾರೆ.

ಕೂಪದಂತಿರುವ ಅಂಗನವಾಡಿ ಕಟ್ಟಡಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ಶಿಥಿಲಾವಸ್ಥೆ ತಲುಪಿರುವ ಎರಡೂ ಕಟ್ಟಡಗಳನ್ನು ಪರಿಶೀಲಿಸಿ ಅವುಗಳನ್ನು ತೆರವುಗೊಳಿಸಲು ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಮೇಲಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ ಎಂ.ಸೌಮ್ಯ ಅಂಗನವಾಡಿ ಮೇಲ್ವಿಚಾರಕಿ ನಾಯಕನಹಟ್ಟಿ ವೃತ್ತ

ಗ್ರಾಮದ ಅಂಗನವಾಡಿಗಳ ಮೂಲಸೌಕರ್ಯ ಮತ್ತು ಸುಸಜ್ಜಿತ ವ್ಯವಸ್ಥೆಗಾಗಿ ಹಲವು ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. 
ಎಂ.ಟಿ.ಮಂಜುನಾಥ, ಪ.ಪಂ. ಸದಸ್ಯ
ಅಂಗನವಾಡಿ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟರೆ ಸ್ವಚ್ಛತೆ ಕುಡಿಯುವ ನೀರು ಶೌಚಾಲಯ ವ್ಯವಸ್ಥೆಯನ್ನು ಪಟ್ಟಣ ಪಂಚಾಯಿತಿಯಿಂದ ಕಲ್ಪಿಸಲಾಗುವುದು. 
ಕೆ.ಪಿ.ತಿಪ್ಪೇಸ್ವಾಮಿ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ 
ಶಿಥಿಲಾವಸ್ಥೆ ತಲುಪಿರುವ ಎರಡೂ ಕಟ್ಟಡಗಳನ್ನು ಪರಿಶೀಲಿಸಿ ಅವುಗಳನ್ನು ತೆರವುಗೊಳಿಸಲು ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಮೇಲಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ.
ಎಂ.ಸೌಮ್ಯ, ಅಂಗನವಾಡಿ ಮೇಲ್ವಿಚಾರಕಿ ನಾಯಕನಹಟ್ಟಿ ವೃತ್ತ
ನಾಯಕನಹಟ್ಟಿ ಪಟ್ಟಣದ ಜಾಗನೂರಹಟ್ಟಿ ಗ್ರಾಮದಲ್ಲಿರುವ ಮೂಲ ಸೌಕರ್ಯ ವಂಚಿತ ಅಂಗನವಾಡಿ ಕಟ್ಟಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.