ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ (ಚಿತ್ರದುರ್ಗ): ‘ಬಸವ ತತ್ವದಲ್ಲಿ ನಂಬಿಕೆ ಇರುವವರು ಸರ್ಕಾರ ನೀಡುವ ಮೀಸಲಾತಿ ಕೇಳಕೂಡದು. ಅದನ್ನು ಸಮಾಜದ ದುರ್ಬಲ ಸಮುದಾಯಗಳಿಗೆ ಹಂಚಬೇಕು’ ಎಂದು ತರಳಬಾಳು ಮಠದ ಪೀಠಾಧ್ಯಕ್ಷ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬುಧವಾರ ಸಲಹೆ ನೀಡಿದರು.
ಗ್ರಾಮದಲ್ಲಿ ನಡೆದ ಲಿಂ.ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೆಲವು ಮಠಾಧೀಶರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರದ ಮೀಸಲಾತಿ ಸೌಲಭ್ಯ ಇಲ್ಲದೇ ಇದ್ದಿದ್ದರೆ ಅವರ ನಿಲುವು ಏನಿರುತ್ತಿತ್ತು? ಧರ್ಮದ ಕಾಲಂನಲ್ಲಿ ಅವರು ಏನು ಬರೆಸುತ್ತಿದ್ದರು? ದುರ್ಬಲ ಜಾತಿಗಳಿಗೆ ಸೇರಿದವರನ್ನು ಮೇಲಕ್ಕೆ ತರಲು ಬಸವಣ್ಣ ಯತ್ನಿಸಿದರು. ಅವರಿಗೆ ಮತದ ಹಂಗಿರಲಿಲ್ಲ. ಬಸವಣ್ಣ ಮಾಡಿದ ಚಳವಳಿ ಈಗ ಜಾತಿ ಆಗಿ ಹೋಗಿದೆ’ ಎಂದು ವಿಷಾದಿಸಿದರು.
‘ಈಗ ನಡೆಯುತ್ತಿರುವ ಸಮೀಕ್ಷೆಯ ಗುರಿಯು ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿರದೇ ಜಾತಿ ಸಮೀಕ್ಷೆಯೇ ಆಗಿದೆ. ಜಾತಿ, ಉಪಜಾತಿ, ಅದರೊಳಗಿನ ಜಾತಿಗಳನ್ನು ಗುರುತಿಸಿ ಜನರ ಮಾನಸಿಕ ಆರೋಗ್ಯವನ್ನು ಕೆಡಿಸುವ ಕೆಲಸ ಆಗುತ್ತಿದೆ. ಸಮೀಕ್ಷೆಯನ್ನು ಎ.ಬಿ.ಸಿ.ಡಿ ಎಂದು ವರ್ಗೀಕರಿಸಿ ಅದರ ಆಧಾರದ ಮೇಲೆ ಮಾಡಿ ಮೀಸಲಾತಿ ನೀಡಿದರೆ ಅದು ಬಸವತತ್ವಗಳಿಗೆ ಹತ್ತಿರವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.