
ಚಿತ್ರದುರ್ಗ: ‘ಆಸ್ತಿ ದಾಖಲಾತಿಗಾಗಿ ರೈತರು ಇನ್ನು ಮುಂದೆ ತಾಲ್ಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಬೆರಳ ತುದಿಯಲ್ಲೇ ಎಲ್ಲಾ ದಾಖಲಾತಿಗಳು ದೊರೆಯಲಿವೆ. ಅದಕ್ಕಾಗಿ ಸರ್ಕಾರ ಭೂ ಸುರಕ್ಷಾ ಯೋಜನೆ ಜಾರಿಗೊಳಿಸುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
‘ರೈತರು ಆಸ್ತಿ ದಾಖಲಾತಿಗಳನ್ನು ಕಳೆದುಕೊಂಡು ಪರದಾಡುವ ಪರಿಸ್ಥಿತಿ ಇದೆ. ದಾಖಲಾತಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಅದನ್ನು ತಪ್ಪಿಸಲು ಆನ್ಲೈನ್ ಮೂಲಕ ದಾಖಲಾತಿ ಪಡೆಯುವಂತಹ ವ್ಯವಸ್ಥೆ ರೂಪಿಸಲಾಗುತ್ತಿದೆ. ಈಗಾಗಲೇ 100 ತಾಲ್ಲೂಕುಗಳ ₹ 63.50 ಕೋಟಿ ಆಸ್ತಿಗಳ ಸ್ಕ್ಯಾನಿಂಗ್ ಮಾಡಲಾಗಿದೆ. ಎಲ್ಲಾ ದಾಖಲಾತಿಗಳನ್ನು ರೈತರು ಕ್ಷಣಮಾತ್ರದಲ್ಲೇ ಪಡೆಯುವ ವ್ಯವಸ್ಥೆ ರೂಪಿಸಲಾಗುತ್ತಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಭೂ ಸುರಕ್ಷಾ ಯೋಜನೆಯಿಂದ ನಕಲಿ ದಾಖಲಾತಿ ಸೃಷ್ಟಿಸಿ ಆಸ್ತಿ ಲಪಟಾಯಿಸುವುದನ್ನು ತಪ್ಪಿಸಲು ಸಾಧ್ಯವಿದೆ. ಆಸ್ತಿಯ ಎಲ್ಲಾ ದಾಖಲಾತಿಗಳ ದೃಡೀಕೃತ ಪ್ರತಿಯನ್ನು ಬೆರಳ ತುದಿಯಲ್ಲೇ ಪಡೆಯಬಹುದಾಗಿದೆ. ರೈತರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಆಸ್ತಿಗಳ ಆರ್ಟಿಸಿಯಲ್ಲಿ ಮಾಲೀಕರ ಆಧಾರ್ ಜೋಡಣೆ ಮಾಡುವ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ’ ಎಂದರು.
‘ಅಧಿಕಾರಿಗಳು ರೈತರ ಮನೆಯ ಬಾಗಿಲಿಗೆ ತೆರಳಿ ಅಭಿಯಾನದ ರೀತಿಯಲ್ಲಿ ವಿವಿಧ ಸೇವೆ ನೀಡುತ್ತಿದ್ದಾರೆ. ಸಮರೋಪಾದಿಯಲ್ಲಿ ದರಕಾಸ್ತು, ಬಗರ್ ಹುಕುಂ ಮಂಜೂರಾತಿದಾರರಿಗೆ ಆಸ್ತಿ ಖಾತೆ ಮಾಡಿಕೊಡಲಾಗುತ್ತಿದೆ. ಜಮೀನು ದುರಸ್ತಿ, ಪೋಡಿಗಾಗಿ ರೈತರು ಹೈರಾಣಾಗಿದ್ದರು. ಹಣ ಉಳ್ಳವರು ಮಾತ್ರ ಪೋಡಿ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈಗ ಎಲ್ಲರಿಗೂ ಅವರ ಮನೆ ಬಾಗಿಲಿಗೆ ತೆರಳಿ ಪೋಡಿ ಮಾಡಿಕೊಡುವ ಕೆಲಸ ಆರಂಭಿಸಲಾಗಿದೆ’ ಎಂದರು.
‘2018–2023ರವರೆಗೂ ರಾಜ್ಯದಲ್ಲಿ 8,500 ಆಸ್ತಿಗಳ ಪೋಡಿ ಕಾರ್ಯ ಆಗಿತ್ತು. ಆದರೆ, ಕಳೆದೊಂದು ವರ್ಷದಿಂದ 1,79,499 ಆಸ್ತಿಗಳ ಪೋಡಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನೂ 1 ಲಕ್ಷ ಆಸ್ತಿಗಳ ಪೋಡಿ ಮಾಡಿಕೊಡುವ ಅವಕಾಶಗಳಿವೆ. ರಾಜ್ಯದಲ್ಲಿ ಇನ್ನೂ ಲಕ್ಷಾಂತರ ಆಸ್ತಿಗಳು ಮೃತಪಟ್ಟವರ ಹೆಸರಿನಲ್ಲೇ ಇವೆ. ಪೌತಿಖಾತೆಯನ್ನು ವಾರಸುದಾರರ ಹೆಸರಿಗೆ ಬದಲಾವಣೆ ಮಾಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ’ ಎಂದರು.
‘ಪೌತಿ ಖಾತೆ ಆಂದೋಲನದ ಮೂಲಕ 11 ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ವಾರಸುದಾರರ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಖಾತೆ ಬದಲಾವಣೆ ಮಾಡಿಕೊಡುವ ಅಧಿಕಾರಿಗಳಿಗೆ ಪ್ರೋತ್ಸಾಹ ಧನ ನೀಡಲು ₹ 5 ಕೋಟಿ ಹಣ ಮೀಸಲಿಡಲಾಗಿದೆ. ಒಳ್ಳೆಯ ಕೆಲಸ ಮಾಡಿದ ಆರ್ಐಗಳಿಗೆ ಲ್ಯಾಪ್ಟಾಪ್, ಗ್ರಾಮ ಲೆಕ್ಕಿಗ ಮತ್ತು ಗ್ರಾಮ ಸೇವಕರಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಗುವುದು’ ಎಂದರು.
‘2017ರಿಂದ 2020ರವರೆಗೂ ರಾಜ್ಯದಲ್ಲಿ 63 ಹೊಸ ತಾಲ್ಲೂಕುಗಳ ಘೋಷಣೆಯಾಗಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ತಾಲ್ಲೂಕುಗಳಿಗೆ ಯಾವುದೇ ಮೂಲ ಸೌಲಭ್ಯ ನೀಡಿಲ್ಲ. ಬಿಜೆಪಿ ಅವಧಿಯಲ್ಲಿ 14 ತಾಲ್ಲೂಕುಗಳಿಗೆ ಮಾತ್ರ ತಾಲ್ಲೂಕು ಆಡಳಿತ ಕಚೇರಿಗಳಿಗೆ ಮಂಜೂರಾತಿ ನೀಡಿದ್ದರು. ಆದರೆ, ನಾವು ಅಧಿಕಾರಕ್ಕೆ ಬಂದ ನಂತರ 49 ಹೊಸ ತಾಲ್ಲೂಕು ಕೇಂದ್ರಗಳಲ್ಲಿ ‘ಪ್ರಜಾ ಸೌಧ’ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ’ ಎಂದರು.
‘ರೈತರು ತಮ್ಮ ಜಮೀನುಗಳಿಗೆ ತೆರಳಲು ದಾರಿ ಸಿಗುತ್ತಿಲ್ಲ ಎಂಬ ಸಮಸ್ಯೆ ಮೊದಲಿನಿಂದಲೂ ಇದೆ. ಜಮೀನು ನಕಾಶೆಯಲ್ಲಿ ದಾರಿ ಗುರುತಿಸಿದ್ದರೆ ಅಲ್ಲಿ ದಾರಿ ಬಿಡಲೇ ಬೇಕು. ನಕಾಶೆ ಅನುಸಾರ ದಾರಿ ಬಿಡಿಸುವುದು ನಮ್ಮ ಜವಾಬ್ದಾರಿ. ಆದರೆ, ಖಾಸಗಿ ಜಮೀನುಗಳಲ್ಲಿರುವ ವಾಡಿಕೆ ದಾರಿಗಳ ಸಂಬಂಧ ಕಂದಾಯ ಇಲಾಖೆಗೆ ಅಧಿಕಾರವಿಲ್ಲ. ಅದನ್ನು ಕೋರ್ಟ್ನಲ್ಲಿ ಪ್ರಶ್ನಿಸಿ ದಾರಿ ಬಿಡಿಸಿಕೊಳ್ಳಲು ಅವಕಾಶವಿದೆ. ಆದರೂ ಬಿತ್ತನೆ ಬೀಜ, ಗೊಬ್ಬರ, ಕಟಾವು ಕಾಲದಲ್ಲಿ ಉತ್ಪನ್ನ ಸಾಗಣೆಗೆ ಯಾರೂ ಅಡ್ಡಿಪಡಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.
‘ಜಿಲ್ಲಾಡಳಿತ ಭವನ ನಿರ್ಮಾಣ ಸಂಬಂಧ ಸಾಕಷ್ಟು ಗೊಂದಲಗಳು ಉಳಿದಿವೆ. ನಗರದಿಂದ ಹೊರ ಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದು ನಮಗೂ ಒಪ್ಪಿಗೆ ಇಲ್ಲ. ಆದರೆ, ಬಿಜೆಪಿ ಅವಧಿಯಲ್ಲಿ ಈ ಕೆಲಸ ಆಗಿದೆ. ಆದರೂ ನಾವು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಅಲ್ಲಿಗೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾರಂತ ಮಾಡುವ ಅಥವಾ ವೈದ್ಯಕೀಯ ಕಾಲೇಜು ಸ್ಥಾಳಾಂತರ ಮಾಡುವ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳು ನಿರ್ಧಾರ ಕೈಗೊಳ್ಳಬೇಕು’ ಎಂದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಇದ್ದರು. ಇದಕ್ಕೂ ಮೊದಲು ಸಚಿವರು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಕರಣಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮೊದಲು ರಾಜ್ಯದಾದ್ಯಂತ ತಹಶೀಲ್ದಾರ್ ನ್ಯಾಯಾಲಯದಲ್ಲಿ 10774 ಅವಧಿ ಮೀರಿದ ಪ್ರಕರಣಗಳು ಬಾಕಿ ಉಳಿದಿದ್ದವು. ನಾವು ಅಧಿಕಾರಕ್ಕೆ ಬಂದ ನಂತರ ಅವುಗಳ ಸಂಖ್ಯೆ 488ಕ್ಕೆ ಇಳಿದಿದೆ. ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿದ್ದ 73624 ಪ್ರಕರಣಗಳ ಸಂಖ್ಯೆ 11800ಕ್ಕೆ ಇಳಿದಿದೆ’ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
‘ಪ್ರಕರಣಗಳ ಇತ್ಯರ್ಥಕ್ಕೆ 84 ದಿನದ ಸಮಯ ನಿಗದಿ ಮಾಡಲಾಗಿದೆ. ಆದರೆ ಅಧಿಕಾರಿಗಳನ್ನು ಅವುಗಳನ್ನು ವರ್ಷಗಳವರೆಗೆ ತಳ್ಳಿದ್ದರು. ಅದಕ್ಕೆ ಅಂತ್ಯ ಹಾಡಲಾಗಿದ್ದು ಇನ್ನು 2–3 ತಿಂಗಳಲ್ಲಿ ಅವಧಿ ಮೀರಿದ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.