ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ವಾಣಿವಿಲಾಸ ರಸ್ತೆಯ ಬಿರೇನಹಳ್ಳಿ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನ ಆರ್ಆರ್ ನಗರದ ನಿವಾಸಿಗಳಾದ ವಿಶಾಲಾಕ್ಷಿ (70), ರೇಣುಕಾದೇವಿ (39) ಮತ್ತು ಸುಧಿಕ್ಷಾ (17) ಮೃತಪಟ್ಟವರು. ಪ್ರತೀಕ್ಷಾ (13) ಗಂಭೀರವಾಗಿ ಗಾಯಗೊಂಡಿದ್ದು, ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರಾವತಿಯಲ್ಲಿ ಮದುವೆ ಮುಗಿಸಿಕೊಂಡು ಮಂಗಳವಾರ ನಸುಕಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ರೇಣುಕಾದೇವಿ ಕಾರು ಚಾಲನೆ ಮಾಡುತ್ತಿದ್ದರು. ಬಿರೇನಹಳ್ಳಿ ಸಮೀಪ ಚಾಲಕಿಯ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಅಪ್ಪಳಿಸಿದೆ. ವಿಶಾಲಾಕ್ಷಿ ಹಾಗೂ ಸುಧಿಕ್ಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೇಣುಕಾದೇವಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ-ಬೆಂಗಳೂರು ಸಂಪರ್ಕ ಕಲ್ಪಿಸುವ ಬಿಎಚ್ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಕಾರು ಚಾಲಕರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹಿರಿಯೂರು, ಹೊಸದುರ್ಗ ಮಾರ್ಗವಾಗಿ ಸಂಚರಿಸಿ ತರೀಕೆರೆ ಮೂಲಕ ಸಾಗುತ್ತಾರೆ. ಹಿರಿಯೂರು ಹಾಗೂ ತರೀಕೆರೆ ನಡುವಿನ ರಸ್ತೆ ಕಿರಿದಾಗಿದ್ದು ಹಲವು ತಿರುವುಗಳಿವೆ. ಹೊಸದುರ್ಗ ತಾಲ್ಲೂಕಿನ ಜೋಡಿ ಶ್ರೀರಂಗಾಪುರದ ಬಳಿ ಸೋಮವಾರ ನಸುಕಿನಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ಪ್ರಾಣ ಕಳೆದುಕೊಂಡಿದ್ದರು. ಇದೇ ಮಾರ್ಗದಲ್ಲಿ ಮರುದಿನ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.