ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆ ಸಂಭ್ರಮ
ಚಳ್ಳಕೆರೆ: ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ್ಲೆಹಳ್ಳಿ ಗ್ರಾಮದ ಬಳಿ ವಸತಿದಿಬ್ಬದಲ್ಲಿ ಸೋಮವಾರ ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಬರಿಗಾಲಲ್ಲಿ ಕಳ್ಳೆಮುಳ್ಳಿನ ಗುಡಿ ಹತ್ತಿ ದೇವರ ಒಕ್ಕಲಿನ ವೀರಗಾರರು ಕಳಸ ಕಿತ್ತು ವಿಜಯೋತ್ಸವ ಆಚರಿಸಿದರು.
ಹಲವು ಬಗೆಯ ಹೂವಿನಿಂದ ಅಲಂಕರಿಸಿದ ಕ್ಯಾತಗೊಂಡನಹಳ್ಳಿ ಕದರಿನರಸಿಂಹ, ಬಂಜಗೆರೆ ವೀರಣ್ಣ, ಬತವಿನ ದೇವರು, ನಿಂಗಣ್ಣ, ಕೋಟೆ ಚಿತ್ತಮ್ಮ, ಆಂಧ್ರಪ್ರದೇಶದ ಐಗಾರನಹಳ್ಳಿ ತಾಳಿ ದೇವರು, ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪ ಮುಂತಾದ ಆರಾಧ್ಯ ದೈವಗಳನ್ನು ಭಕ್ತರು ಹೊತ್ತು ಉರುಮೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.
ಕಳಸ ಕಿತ್ತ ವೀರರು: ಬರಿಗಾಲಲ್ಲಿ ಮುಳ್ಳಿನ ಗುಡಿ ಹತ್ತಿ ಕಂಚಿನ ಕಳಸ ಕಿತ್ತ ವೀರಗಾರ ಚೌಳೂರು ಗ್ರಾಮದ ರವಿ, ತಿಪ್ಪೇಸ್ವಾಮಿ, ಮನು, ರಾಘವೇಂದ್ರ ವಿಜಯೋತ್ಸವ ಮೆರವಣಿಗೆ ನಡೆಯಿತು.
ವಿವಾದ: ದೇವರ ಒಕ್ಕಲಿಗೆ ಸೇರಿದ ವೀರಗಾರರ ವಂಶಸ್ಥರು, ನಾ ಮುಂದು ತಾ ಮುಂದು ಎಂದು ಕಳ್ಳೆಮುಳ್ಳಿನ ಗುಡಿ ಹತ್ತಿ ಕಳಸ ಕೀಳುವಾಗ ಎರಡು ಗುಂಪಿನ ನಡುವೆ ವಿವಾದ ಉಂಟಾಯಿತು.
ಬಸವ ಯಾದವನಂದ ಸ್ವಾಮೀಜಿ, ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್, ಕಾಡುಗೊಲ್ಲರ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಶಶಿಧರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಗಾಯಕ ಮೋಹನ್ಕುಮಾರ್, ಗೊಲ್ಲ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕಸ್ತೂರಿ ತಿಮ್ಮನಹಳ್ಳಿ ಶ್ರೀಕಾಂತ್, ಕಾಡುಗೊಲ್ಲ ಮರವಾಯಿ ಬೆಡಗಿನ ಎಂ.ವೆಂಕಟೇಶ್, ಅಜ್ಜಪ್ಪ, ಮಹಾಲಿಂಗಪ್ಪ, ಶ್ರೀನಿವಾಸ್, ಹದಿಮೂರು ಗುಡಿಕಟ್ಟಿನ ಗೌಡರು ಮತ್ತು ಕೋಣನ– ಬೊಮ್ಮನಗೌಡ, ಪೂಜಾರಿ ಚಂದ್ರಣ್ಣ, ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.