
ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿ ಹಲವು ತಿಂಗಳುಗಳಿಂದ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳಿಲ್ಲದ ಕಾರಣ ಜಿಲ್ಲೆಯ ವಿವಿಧೆಡೆಯಿಂದ ಬರುವ ರೋಗಿಗಳು, ಅವರ ಸಂಬಂಧಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತುರ್ತು ಅಪಘಾತ ವಾರ್ಡ್ ಹಿಂಬದಿಯ ಹಳೆಯ ಮಕ್ಕಳ ಆಸ್ಪತ್ರೆ ಕಟ್ಟಡದಲ್ಲಿ ಡಯಾಲಿಸಿಸ್ ಕೇಂದ್ರ ನಡೆಯುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ 14 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಸೇವೆ ನೀಡಲಾಗುತ್ತಿದೆ. ‘ನೆಫ್ರೊ ಪ್ಲಸ್’ ಸಂಸ್ಥೆ ಯಂತ್ರ ಅಳವಡಿಸಿ ನಿರ್ವಹಣೆ ಮಾಡುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಇದ್ದರೂ ಜಿಲ್ಲಾ ಕೇಂದ್ರಕ್ಕೆ ಹೆಚ್ಚಿನ ರೋಗಿಗಳು ಬಂದು ಡಯಾಲಿಸಿಸ್ಗೆ ಒಳಗಾಗುತ್ತಾರೆ.
ಈ ಕೇಂದ್ರಕ್ಕೆ ಸರಿಯಾದ ಸೌಲಭ್ಯ ನೀಡದ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ವಾರ್ಡ್ನಲ್ಲೂ ಕನಿಷ್ಠ ಒಂದಾದರೂ ಶೌಚಾಲಯ ಇರಬೇಕು. ಆದರೆ, ಇಲ್ಲಿ ಒಂದೂ ಶೌಚಾಲಯವಿಲ್ಲ. ಕೇಂದ್ರದ ಎದುರು ಒಂದು ಶೌಚಾಲಯವಿದೆ. ಅಲ್ಲಿಗೆ ನೀರು ಸರಬರಾಜು ಸ್ಥಗಿತಗೊಂಡಿರುವ ಕಾರಣ ಬಾಗಿಲು ಮುಚ್ಚಿ ಹಲವು ತಿಂಗಳುಗಳೇ ಕಳೆದಿವೆ ಎಂದು ರೋಗಿಗಳು ಆರೋಪಿಸಿದ್ದಾರೆ.
ಮಂಗಳವಾರದಿಂದ ಗುರುವಾರದವೆರೆಗೆ 3 ಪಾಳಿಯಲ್ಲಿ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಸೋಮವಾರ ಮತ್ತು ಶನಿವಾರ 4 ಪಾಳಿ ಇರುತ್ತದೆ. ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೂ ರೋಗಿಗಳು ಬಂದು ಹೋಗುತ್ತಾರೆ. ಪ್ರತಿ ರೋಗಿ 4 ಗಂಟೆಗಳ ಕಾಲ ಪ್ರಕ್ರಿಯೆಗೆ ಒಳಗಾಗುತ್ತಾರೆ. ಮಧುಮೇಹ ಉಳ್ಳವರು ಆಗಾಗ ಶೌಚಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಶೌಚಾಲಯವೇ ಇಲ್ಲದ ಕಾರಣ ರೋಗಿಗಳು ಕೈಗೆ ಅಳವಡಿಸಿದ ಪೈಪ್ ಹಿಡಿದುಕೊಂಡು 500 ಮೀಟರ್ ದೂರದಲ್ಲಿರುವ ಶೌಚಾಲಯಕ್ಕೆ ತೆರಳುತ್ತಾರೆ.
‘ನಾನು ವಾರದಲ್ಲಿ 3 ದಿನ ಡಯಾಲಿಸಿಸ್ಗೆ ಒಳಗಾಗುತ್ತೇನೆ. ಪ್ರತಿ ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವಾಗಲೂ ಅದು ನಮಗೆ ಮರುಹುಟ್ಟು ಆಗಿರುತ್ತದೆ. ನಮಗೆ ಜಿಲ್ಲಾಸ್ಪತ್ರೆಯವರು ಕನಿಷ್ಠ ಒಂದು ಶೌಚಾಲಯ ಒದಗಿಸದೇ ಇರುವುದು ಅನ್ಯಾಯ. ಹಲವು ಬಾರಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ರೋಗಿಯೊಬ್ಬರು ಕಣ್ಣೀರಿಟ್ಟರು.
ರೋಗಿಗಳು ಮಾತ್ರವಲ್ಲದೇ ಅವರ ಜೊತೆ ಬರುವ ಸಂಬಂಧಿಕರು, ಮಕ್ಕಳು, ಮಹಿಳೆಯರೂ ಶೌಚ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಪ್ರತಿಯೊಬ್ಬರಿಗೂ ಶೌಚಕ್ಕೆ ₹ 10 ವಸೂಲಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಜಗಳಕ್ಕೆ ಬರುತ್ತಾರೆ ಎಂದು ರೋಗಿಗಳ ಸಂಬಂಧಿಕರು ಬೇಸರ ವ್ಯಕ್ತಪಡಿಸುತ್ತಾರೆ.
ನೀರಿನ ಸೌಲಭ್ಯವೂ ಇಲ್ಲ:
ಡಯಾಲಿಸಿಸ್ ಯಂತ್ರಗಳಿಗೆ ಶುದ್ಧ ನೀರು ಅತ್ಯವಶ್ಯಕ. ಆಗಾಗ ಯಂತ್ರಕ್ಕೂ ನೀರಿನ ವ್ಯತ್ಯಯ ಉಂಟಾಗುತ್ತಿದೆ. ರೋಗಿಗಳಿಗೆ, ಅವರ ಜೊತೆ ಬಂದವರಿಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಕೇಂದ್ರಕ್ಕೆ ಸೌಲಭ್ಯ ಒದಗಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
‘ಈ ಕೇಂದ್ರದ ನಿರ್ವಹಣೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅವರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಆಸ್ಪತ್ರೆಯವರು ಸೌಲಭ್ಯ ಕೊಟ್ಟಿಲ್ಲ. ರಕ್ತ ಚಲನೆಯಾಗುವಾಗ ಆರೋಗ್ಯ ಸಮಸ್ಯೆಯಾಗುವ ಅಪಾಯವಿರುತ್ತದೆ. ನಮಗೆ ನೆಬ್ಯುಲೈಸೇಷನ್ ಕಿಟ್ ನೀಡಬೇಕು. ವೈದ್ಯರನ್ನು ಕೇಳಿಕೊಂಡರೂ ಕೊಟ್ಟಿಲ್ಲ’ ಎಂದು ರೋಗಿಗಳು ದೂರಿದ್ದಾರೆ.
ಡಯಾಲಿಸಿಸ್ ಕೇಂದ್ರದಲ್ಲಿ ಶೌಚಾಲಯ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಶೀಘ್ರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.ಡಾ.ಎಸ್.ಪಿ.ರವೀಂದ್ರ ಜಿಲ್ಲಾ ಶಸ್ತ್ರಚಿಕಿತ್ಸಕ
ಕೆಟ್ಟ ವಾಸನೆಯಿಂದ ಕಂಗಾಲು.. ಡಯಾಲಿಸಿಸ್ನ ಕೂಗಳತೆ ದೂರದಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವ ಬಯೊ ಮೆಡಿಕಲ್ ಸಂಗ್ರಹ ಘಟಕವಿದೆ. ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸದ ಕಾರಣ 150 ಮೀಟರ್ ವ್ಯಾಪ್ತಿಯಲ್ಲಿ ಕೆಟ್ಟ ವಾಸನೆ ಬರುತ್ತಿದೆ. 10 ಮೀಟರ್ ಅಂತರದಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಹೆಚ್ಚು ದುರ್ವಾಸನೆ ಬರುತ್ತಿದೆ. ರೋಗಿಗಳು ಅವರ ಸಂಬಂಧಿಕರು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತಂದಿದ್ದಾರೆ. ಆದರೆ ಅವರು ಇತ್ತ ಗಮನಹರಿಸದ ಕಾರಣ ದುರ್ವಾಸನೆ ನಿಯಂತ್ರಣಕ್ಕೆ ಬಂದಿಲ್ಲ. ‘ನನ್ನ ಪತಿ ಡಯಾಲಿಸಿಸ್ಗೆ ಹೋದಾಗ ನಾನು ಹೊರಗೆ ಕೂರುತ್ತೇನೆ. ಕೆಟ್ಟ ವಾಸನೆಯಿಂದ ನಾನೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇನೆ’ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.