ADVERTISEMENT

ಚಿತ್ರದುರ್ಗ | ಹೈಟೆಕ್‌ ಬಸ್‌ ಸ್ಟ್ಯಾಂಡ್‌: ನಿಂತಿದೆ ನಿರ್ಮಾಣ ಕಾಮಗಾರಿ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:06 IST
Last Updated 6 ಜನವರಿ 2026, 7:06 IST
ಬಸ್‌ ನಿಲ್ದಾಣ ಕಾಮಗಾರಿಗಾಗಿ ತೋಡಿದ್ದ ಅಡಿಪಾಯ ಈಗ ಪಾಳುಬಿದ್ದ ಕೆರೆಯಂತಾಗಿರುವುದು
ಬಸ್‌ ನಿಲ್ದಾಣ ಕಾಮಗಾರಿಗಾಗಿ ತೋಡಿದ್ದ ಅಡಿಪಾಯ ಈಗ ಪಾಳುಬಿದ್ದ ಕೆರೆಯಂತಾಗಿರುವುದು   

ಚಿತ್ರದುರ್ಗ: ಉತ್ತರ ಹಾಗೂ ದಕ್ಷಿಣ ಕರ್ನಾಟಕದ ನಡುವೆ ಸಂಪರ್ಕ ಕೊಂಡಿಯಂತಿರುವ ಕೋಟೆನಗರಿಯಲ್ಲಿ ಆರಂಭವಾಗಿದ್ದ ‘ಬಹು ಉಪಯೋಗಿ ಹೈಟೆಕ್‌ ಬಸ್‌ ನಿಲ್ದಾಣ’ ನಿರ್ಮಾಣ ಕಾಮಗಾರಿ 3 ವರ್ಷಗಳಿಂದ ನಿಂತಲ್ಲೇ ನಿಂತಿದೆ. ಅನುದಾನದ ಕೊರತೆಯಿಂದಾಗಿ ಕೆಲಸ ನನೆಗುದಿಗೆ ಬಿದ್ದಿದ್ದು, ತಳಮಹಡಿಗಾಗಿ ತೋಡಿದ್ದ ಅಡಿಪಾಯ ಈಗ ಪಾಳುಬಿದ್ದ ಕೆರೆಯಂತಾಗಿದೆ.

ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೂರಾರು ಬಸ್‌ಗಳು ನಿತ್ಯ ನಗರದ ಬಸ್‌ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಜೊತೆಗೆ ತೆಲಂಗಾಣ, ಆಂಧ್ರಪ್ರದೇಶದ ಬಸ್‌ಗಳೂ ಇಲ್ಲಿಗೆ ಬರುತ್ತವೆ. ಸ್ಲೀಪರ್‌, ಏ.ಸಿ ಐರಾವತ, ಇ.ವಿ ಬಸ್‌ಗಳ ಸಂಚಾರವೂ ಇದೆ. ದಿನದ 24 ಗಂಟೆಯೂ ಬಸ್‌ ನಿಲ್ದಾಣ ಕಿಕ್ಕಿರಿದು ತುಂಬಿರುತ್ತದೆ. ರಾಜ್ಯದ ಬಹುತೇಕ ಎಲ್ಲ ಸ್ಥಳಗಳಿಗೂ ಇಲ್ಲಿಂದ ಬಸ್‌ ಸೇವೆ ಇದೆ. ಕಿಷ್ಕಿಂಧೆಯಂತಿರುವ ನಿಲ್ದಾಣದಲ್ಲಿ ಬಸ್‌ಗಳ ಓಡಾಟಕ್ಕೆ, ನಿಲುಗಡೆಗೆ ಜಾಗವೇ ಇಲ್ಲದಂತಾಗಿ ಸಿಬ್ಬಂದಿ ಪರದಾಡುತ್ತಾರೆ.

ಬಸ್‌ ನಿಲ್ದಾಣ ರಸ್ತೆ, ಬಿ.ಡಿ ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರಗೊಳ್ಳುತ್ತಿದ್ದು, ನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಾಮಾನ್ಯ ಎನಿಸಿವೆ. ಈಚೆಗೆ ಎರಡು ಬಸ್‌ಗಳ ನಡುವೆ ಸಿಲುಕಿ ಆಟೊವೊಂದು ಅಪ್ಪಚ್ಚಿಯಾಗಿತ್ತು. ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ನಗರಕ್ಕೊಂದು ಸುಸಜ್ಜಿತ ಬಸ್‌ ನಿಲ್ದಾಣ ಬೇಕು ಎಂಬ ಕೂಗು ಮೊದಲಿನಿಂದಲೂ ಇತ್ತು.

ADVERTISEMENT

ಬಿಜೆಪಿ ನೇತೃತ್ವದ ಆಡಳಿತದ ಅವಧಿಯಲ್ಲಿ ಬಿ.ಡಿ.ರಸ್ತೆ ಎಲ್‌ಐಸಿ ಕಚೇರಿ ಎದುರಿನ 6 ಎಕರೆ ವಿಶಾಲ ಪ್ರದೇಶದಲ್ಲಿ ‘ಬಹು ಉಪಯೋಗಿ ಹೈಟೆಕ್‌ ಬಸ್‌ ನಿಲ್ದಾಣ’ ನಿರ್ಮಿಸಲು ಯೋಜನೆಯೂ ಸಿದ್ಧಗೊಂಡಿತ್ತು. ₹ 47.5 ಕೋಟಿ ವೆಚ್ಚದ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿತ್ತು. 2023, ಮಾರ್ಚ್‌ 24ರಂದು ಕೆಎಸ್‌ಆರ್‌ಟಿಸಿ ನಿಗಮದ ಆಗಿನ ಅಧ್ಯಕ್ಷ ಎಂ.ಚಂದ್ರಪ್ಪ ಭೂಮಿಪೂಜೆಯನ್ನೂ ನೆರವೇರಿಸಿದ್ದರು. ಅಪೂರ್ವ ಕನ್‌ಸ್ಟ್ರಕ್ಷನ್‌ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

‘ಜಿ’+2 ಮಾದರಿಯಲ್ಲಿ ನಿಲ್ದಾಣ ನಿರ್ಮಿಸಿ ಹೈಟೆಕ್‌ ರೂಪ ನೀಡುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತಳ ಮಹಡಿಯಲ್ಲಿ ಇವಿ ಬಸ್‌ಬಸ್‌ಗಳಿಗೆ ಚಾರ್ಜಿಂಗ್‌ ಕೇಂದ್ರ, ಮೊದಲ ಮಹಡಿಯಲ್ಲಿ 50ಕ್ಕೂ ಹೆಚ್ಚು ಬಸ್‌ಗಳ ನಿಲುಗಡೆ ಸ್ಥಳ, ವಾಣಿಜ್ಯ ಮಳಿಗೆ, 2ನೇ ಮಹಡಿಯಲ್ಲಿ ಕಚೇರಿಗೆ ಮೀಸಲಿಡಲಾಗಿತ್ತು. ಪ್ರತಿ ಮಹಡಿಯಲ್ಲೂ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಿಸುವ ನೀಲನಕ್ಷೆ ಸಿದ್ಧಗೊಂಡಿತ್ತು.

ಗುತ್ತಿಗೆದಾರರು ಉತ್ಸಾಹದಿಂದಲೇ ಕಾಮಗಾರಿ ಆರಂಭಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಾಮಗಾರಿ ಆರಂಭವಾದ 19 ತಿಂಗಳ ಒಳಗಾಗಿ ನೂತನ ಬಸ್‌ ನಿಲ್ದಾಣ ಕಾರ್ಯಾರಂಭ ಮಾಡಬೇಕಾಗಿತ್ತು. ಆದರೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ ಹೊಸದಾಗಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಸ್‌ ನಿಲ್ದಾಣ ಕಾಮಗಾರಿಗೆ ಹಣವನ್ನೇ ಬಿಡುಗಡೆ ಮಾಡಲಿಲ್ಲ. ಕಾಮಗಾರಿಗೆ ಅನುಮೋದನೆ ಪಡೆಯದೇ ಅಧಿಕಾರಿಗಳು ಟೆಂಡರ್‌ ಕರೆದಿದ್ದೇ ಎಲ್ಲಾ ಗೊಂದಲಗಳಿಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಉದ್ದೇಶಿತ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಕೆಎಸ್‌ಆರ್‌ಟಿಸಿ ಕಾರ್ಯಾಗಾರವನ್ನು ಪಕ್ಕಕ್ಕೆ ಸ್ಥಳಾಂತರಿಸಿ ಆ ಜಾಗವನ್ನೂ ಬಳಸಿಕೊಳ್ಳುವ ಕಾಮಗಾರಿಯೂ ಯೋಜನೆಯಲ್ಲಿ ಸೇರಿತ್ತು. ಎರಡೂ ಕಾಮಗಾರಿಗಳು ಏಕಕಾಲದಲ್ಲಿ ಆರಂಭಗೊಂಡಿದ್ದವು. ತಳ ಮಹಡಿ ನಿರ್ಮಾಣಕ್ಕಾಗಿ  ಅಡಿಪಾಯ ಹಾಕಲಾಗಿತ್ತು. ಕಾಮಗಾರಿಗೆ ಬೇಕಿದ್ದ ಎಲ್ಲಾ ಯಂತ್ರೋಪಕರಣ, ಪರಿಕರಗಳನ್ನು ಸ್ಥಳಕ್ಕೆ ತರಲಾಗಿತ್ತು. ಇಲ್ಲಿಯವರೆಗೂ ₹ 5ಕೋಟಿಯಿಂದ ₹ 6 ಕೋಟಿ ಮೊತ್ತ ವ್ಯಯಿಸಲಾಗಿತ್ತು.

ಸರ್ಕಾರ ಬಿಡಿಗಾಸನ್ನೂ ಬಿಡುಗಡೆ ಮಾಡದ ಕಾರಣ ಕಾಮಗಾರಿ ಸ್ಥಗಿತಗೊಂಡಿದ್ದು, ಸ್ಥಳದಲ್ಲಿದ್ದ ಯಂತ್ರೋಪಕರಣ, ಪರಿಕರಗಳು ತುಕ್ಕು ಹಿಡಿಯುತ್ತಿವೆ. ಸ್ಥಳದ ಸುತ್ತಲೂ ಹಾಕಲಾಗಿದ್ದ ತಗಡಿನ ತಡೆಗೋಡೆ ಕುಸಿಯುತ್ತಿದೆ. ತಳಮಹಡಿಗಾಗಿ ತೋಡಿದ್ದ ಗುಂಡಿಯಲ್ಲಿ ಗಿಡ– ಗಂಟಿಗಳು ಬೆಳೆದಿವೆ.

‘ಬಿಜೆಪಿ ನೇತೃತ್ವದ ಆಡಳಿತದ ಅವಧಿಯಲ್ಲಿ ಭೂಮಿಪೂಜೆ ಆಗಿದ್ದರೂ ಕಾಮಗಾರಿ ಕೈಗೊಂಡ ಶ್ರೇಯವನ್ನು ಕಾಂಗ್ರೆಸ್‌ ಪಡೆಯಬಹುದಿತ್ತು. ಆದರೆ, ಗ್ಯಾರಂಟಿ ಯೋಜನೆಗಳ ನಡುವೆ ಮುಳುಗಿರುವ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿದೆ. ದಾವಣಗೆರೆ, ತುಮಕೂರು ನಗರಗಳಲ್ಲಿ ಹೈಟೆಕ್‌ ಬಸ್‌ನಿಲ್ದಾಣ ಆರಂಭವಾಗಿವೆ. ಆದರೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಸಮಾಜ ಸೇವಕ ಎಸ್‌.ರಘುನಾಥ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಗರ ಸಾರಿಗೆ ಭೂ ನಿರ್ದೇಶನಾಲಯದಿಂದ ₹ 10 ಕೋಟಿ ಅನುದಾನ ಬಂದಿದೆ ಎಂಬ ಮಾಹಿತಿ ಇದೆ. ಇದಕ್ಕೆ ಕ್ಯಾಬಿನೆಟ್‌ ಅನುಮೋದನೆ ಅವಶ್ಯಕತೆ ಇದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೆಲಸ ಆರಂಭವಾಗಲಿದೆ
ದಿವಾಕರ್‌ ಯರಗೊಪ್ಪ ಇಇ ಸಿ ವಿಭಾಗ ಕೆಎಸ್‌ಆರ್‌ಟಿಸಿ

ಯಂತ್ರೋಪಕರಣ ಪರಿಕರ ಕಳ್ಳತನ

ಬಸ್‌ ನಿಲ್ದಾಣ ಕಾಮಗಾರಿಗಾಗಿ ಸ್ಥಳಕ್ಕೆ ತರಲಾಗಿದ್ದ ಹಲವು ಯಂತ್ರೋಪಕರಣ ಕೆಲಸಕ್ಕೆ ಬೇಕಾದ ಪರಿಕರಗಳು ಈಗ ಕಳ್ಳರ ಪಾಲಾಗಿವೆ. ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಪಾಳು ಜಾಗವನ್ನು ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳ ತಾಣ ಮಾಡಿಕೊಂಡಿದ್ದಾರೆ. ‘ಕಂಟೇನರ್‌ನಲ್ಲಿ ತುಂಬಿಟ್ಟಿದ್ದ ಹಲವು ಪರಿಕರಗಳು ಕಳ್ಳತನವಾಗಿವೆ. ಪೈಪ್‌ ಸೆಂಟ್ರಿಂಗ್‌ ಸಾಮಾನುಗಳನ್ನು ಕದ್ದೊಯ್ಯಲಾಗಿದೆ. ಮತ್ತೆ ಕಾಮಗಾರಿ ಆರಂಭಗೊಂಡರೆ ಎಲ್ಲವನ್ನೂ ಖರೀದಿಸಿ ತರಬೇಕಾಗಿದೆ’ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.