ADVERTISEMENT

ಕೋವಿಡ್ ಸಂಕಷ್ಟ: ಕೃಷಿ ಮೊರೆಹೋದ ಸ್ವಾಮೀಜಿ- ಮಠದ ದಾಸೋಹಕ್ಕೆ ಅಕ್ಕಿ ಬಳಕೆ

ಭಕ್ತರ ಕೊರತೆಯಿಂದ ಹೆಚ್ಚಿದ ಸಮಸ್ಯೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 8 ಜೂನ್ 2021, 4:51 IST
Last Updated 8 ಜೂನ್ 2021, 4:51 IST
ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆ ಶಾಖಾಮಠದ ಬಸವಲಿಂಗ ಸ್ವಾಮೀಜಿ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು
ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆ ಶಾಖಾಮಠದ ಬಸವಲಿಂಗ ಸ್ವಾಮೀಜಿ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು   

ಮೊಳಕಾಲ್ಮುರು: ಕೋವಿಡ್ ಸಂಕಷ್ಟದ ಕಾರಣತಾಲ್ಲೂಕಿನ ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ ಕೃಷಿಯ ಮೊರೆಹೋಗಿ ಯಶಸ್ಸು ಗಳಿಸುವ ಮೂಲಕ ಮಾದರಿಯಾಗಿ‌ದ್ದಾರೆ.

ಕೋವಿಡ್‌ನಿಂದಾಗಿ ಮಠಕ್ಕೆಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ.ದಾಸೋಹ ಸಾಮಗ್ರಿಗಳೂ ಬರುತ್ತಿಲ್ಲ. ಮಠದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ಇದರ ನಿರ್ವಹಣೆಗೆ ನೀಡುತ್ತಿದ್ದ ಅನುದಾನ ಸ್ಥಗಿತ ಮಾಡಿದೆ. ಇದರಿಂದಮಠದ ದಾಸೋಹ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಕೃಷಿಗೆ ಕೈ ಹಾಕಿದ್ದಾರೆ ಸ್ವಾಮೀಜಿ.

ಚಿತ್ತರಗಿ ವಿಜಯ ಮಹಾಂತೇಶ ಮಠಕ್ಕೆ ಒಳಪಟ್ಟಿರುವ ಸಿದ್ದಯ್ಯನಕೋಟೆ ಶಾಖಾಮಠ ಸಾಮಾನ್ಯ ಪೀಠ. ದಲಿತ ಜನಾಂಗಕ್ಕೆ ಸೇರಿದಬಸವಲಿಂಗ ಸ್ವಾಮೀಜಿಯನ್ನು ಇದರ ಪೀಠಾಧಿಪತಿ ಮಾಡಿದ್ದರಿಂದ ಮಠ ದೇಶದ ಗಮನ ಸೆಳೆದಿತ್ತು. ಈ ವಿಷಯದಿಂದಾಗಿ ಮಠ ದೊಡ್ಡಮಟ್ಟದಲ್ಲಿ ವಿವಾದಕ್ಕೀಡಾಗಿತ್ತು. ಆದರೆ, ಸ್ವಾಮೀಜಿಯ ದುಶ್ಚಟ ಬಿಡಿಸುವ ಪಾದಯಾತ್ರೆ, ಶೈಕ್ಷಣಿಕ ಅಭಿವೃದ್ಧಿ, ಮೂಢನಂಬಿಕೆ ವಿರುದ್ಧದ ಹೋರಾಟ, ಸರಳತೆ ಜನರನ್ನು ಮಠದತ್ತ ಸೆಳೆಯುವಂತೆ
ಮಾಡಿದೆ.

ADVERTISEMENT

ಈಗ ಸ್ವಾಮೀಜಿ ಕೃಷಿ ಚಟುವಟಿಕೆಯತ್ತ ಚಿತ್ತ ಹರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

‘ನನಗೆ ಆರಂಭದಿಂದಲೂ ಕೃಷಿ ಬಗ್ಗೆ ಆಸಕ್ತಿಯಿದೆ. ಕೋವಿಡ್ ಸಂಕಷ್ಟದಲ್ಲಿ ಭಕ್ತರು ಮಠಕ್ಕೆ ಬರುವುದು ಕಡಿಮೆಯಾಯಿತು. ಜನರು ಸಹ ಕಷ್ಟದಲ್ಲಿದ್ದಾರೆ. ಇದರಿಂದ ಮಠಕ್ಕೆ ಬರುತ್ತಿದ್ದ ದಾಸೋಹ ಸಾಮಗ್ರಿಗಳ ಕೊರತೆ ಎದುರಾಯಿತು. ಮಠದಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಕೃಷಿಗೆ ಕೈ ಹಾಕಿದೆ’ ಎಂದುಬಸವಲಿಂಗ ಸ್ವಾಮೀಜಿ ಕೃಷಿ ಕಾಯಕ ಮಾಡುತ್ತಿರುವ ಬಗ್ಗೆ ವಿವರಿಸಿದರು.

‘ಮೂರು ಕೊಳವೆಬಾವಿ ನೀರು ಬಳಸಿಕೊಂಡು 4 ಎಕರೆಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಈಗ ಭತ್ತ ಕಟಾವು ಮಾಡಲಾಗುತ್ತಿದೆ. ಉತ್ತಮ ಫಸಲು ಬಂದಿದೆ. ಪಕ್ಕದಲ್ಲಿ 2.5 ಎಕರೆಯಲ್ಲಿ ರೇಷ್ಮೆ ಹಾಕಿದ್ದೇವೆ. ಇದಕ್ಕೂ ಮುನ್ನ ರಾಗಿ ಹಾಕಿದ್ದೆವು. ಬರುವ ಫಸಲನ್ನು ಮಠದ ದಾಸೋಹಕ್ಕೆ ಬಳಕೆ ಮಾಡಲಾಗುತ್ತಿದೆ. ಕೊರೊನಾಬಂದ ನಂತರ ಮಠವು ಆರ್ಥಿಕವಾಗಿ ತೊಂದರೆಗೆ ಸಿಲುಕಿದೆ. ಸ್ವಲ್ಪಮಟ್ಟಿಗೆ ಕೃಷಿ ಕೈ ಹಿಡಿದಿದೆ’ ಎಂದರು ಸ್ವಾಮೀಜಿ.

ಜಮೀನನ್ನು ಕೇಣಿಗೆ ಪಡೆದಿದ್ದು, ವಾರ್ಷಿಕ ಎರಡು ಬೆಳೆ ಸೇರಿ 300ಕ್ಕೂ ಹೆಚ್ಚು ಚೀಲ ಭತ್ತ ಬೆಳೆಯಲಾಗಿದೆ. ಕೃಷಿ ದೇಶದ ಉಸಿರಾಗಿದ್ದು, ರೈತರು ಯಾವುದಕ್ಕೂ ಎದೆಗುಂದದೇ ಕೃಷಿ ಮುಂದುವರಿಸಬೇಕು ಎಂದು ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.