ADVERTISEMENT

ಜಿ.ಆರ್‌.ಹಳ್ಳಿ: ಡೆಂಗಿಯಿಂದ ಬಾಲಕ ಸಾವು

ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು, ನೈರ್ಮಲ್ಯದ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:44 IST
Last Updated 12 ಜುಲೈ 2019, 19:44 IST
ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯಲ್ಲಿ ನೀರು ಪೂರೈಸುವ ತೊಟ್ಟಿಯ ಬಳಿ ಹರಿಯುವ ಕೊಳಚೆ ನೀರು
ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯಲ್ಲಿ ನೀರು ಪೂರೈಸುವ ತೊಟ್ಟಿಯ ಬಳಿ ಹರಿಯುವ ಕೊಳಚೆ ನೀರು   

ಚಿತ್ರದುರ್ಗ: ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯಲ್ಲಿ ಎರಡು ವಾರಗಳಿಂದ 16 ಜನ ಜ್ವರದಿಂದ ಬಳಲುತ್ತಿದ್ದು, ಬಾಲಕನೊಬ್ಬ ಮೃತಪಟ್ಟಿದ್ದಾನೆ. ನಾಲ್ವರಲ್ಲಿ ಶಂಕಿತ ಡೆಂಗಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಜ್ವರದಿಂದ ಬಳಲುತ್ತಿದ್ದ ಕುಶಾಲ್‌ (5) ಎಂಬ ಬಾಲಕ ಗುರುವಾರ ರಾತ್ರಿ ಮೃತಪಟ್ಟಿದ್ದಾನೆ. ಹತ್ತಕ್ಕೂ ಹೆಚ್ಚು ರೋಗಿಗಳು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಮ್ಮ ಎಂಬುವವರನ್ನು ಉಡುಪಿ ಜಿಲ್ಲೆಯ ಮಣಿಪಾಲ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಅವರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ. ಭೀತಿಗೆ ಒಳಗಾಗದೇ ಸೂಕ್ತ ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ADVERTISEMENT

ಅನೈರ್ಮಲ್ಯದ ತಾಣ: ಗ್ರಾಮ ಅನೈರ್ಮಲ್ಯದ ತಾಣವಾಗಿದೆ. ಚರಂಡಿಗಳಲ್ಲಿ ಕಸ, ಹೂಳು ತುಂಬಿಕೊಂಡಿದೆ. ಎ.ಕೆ.ಕಾಲೊನಿಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಸೊಳ್ಳೆಯ ಕಾಟ ವಿಪರೀತವಾಗಿದೆ ಎಂಬುದು ಗ್ರಾಮಸ್ಥರ ಆರೋಪ.

*
ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಮೃತಪಟ್ಟಿದ್ದಾನೆ. ಇದಕ್ಕೆ ಡೆಂಗಿ ಕಾರಣವೇ ಎಂಬುದು ದೃಢಪಟ್ಟಿಲ್ಲ. ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
–ಡಾ.ಮೇಘನಾ, ವೈದ್ಯೆ, ಪ್ರಾಥಮಿಕ ಆರೋಗ್ಯ ಕೇಂದ್ರ

*
ಎರಡು ವಾರಗಳಿಂದ 16 ಜನ ಜ್ವರದಿಂದ ಬಳಲುತ್ತಿದ್ದಾರೆ. ಏಳು ವರ್ಷದ ಒಳಗಿನ ಮಕ್ಕಳ ರಕ್ತ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ಚರಂಡಿ ಶುಚಿಗೊಳಿಸುವಂತೆ ಪಿಡಿಒಗೆ ಸೂಚಿಸಲಾಗಿದೆ.
–ಡಾ.ಪಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ

*
ಕುಡಿಯುವ ನೀರು ಪೂರೈಸುವ ಟ್ಯಾಂಕ್‌ಗಳು ಅನೈರ್ಮಲ್ಯದ ತಾಣಗಳಾಗಿವೆ. ಟ್ಯಾಂಕ್‌ಗಳನ್ನು ಶುಚಿಗೊಳಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದೇವೆ.
-ರುದ್ರೇಶ್‌, ಗ್ರಾಮದ ಯುವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.