ಚಿತ್ರದುರ್ಗ: ಇಲ್ಲಿನ ಜೈನಧಾಮದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸ್ಥಾಪಿಸಿದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಮಧ್ಯಾಹ್ನ ಆರಂಭವಾಯಿತು.
ಸೆ.10ರಂದು ಸ್ಥಾಪಿಸಿದ್ದ ಸುಮಾರು ಹತ್ತು ಅಡಿ ಎತ್ತರದ ಈ ಗಣಪತಿಯನ್ನು 21 ದಿನಗಳ ಬಳಿಕ ವಿಸರ್ಜನೆ ಮಾಡಲಾಗುತ್ತಿದೆ. ಮೆರವಣಿಗೆ ಅಂಗವಾಗಿ ಇಡೀ ನಗರ ಕೇಸರಿಮಯವಾಗಿದೆ. ಪ್ರಮುಖ ವೃತ್ತ ಹಾಗೂ ಮಾರ್ಗವನ್ನು ಕೇಸರಿ ಬಂಟಿಂಗ್ಸ್ ಗಳಿಂದ ಅಲಂಕರಿಸಲಾಗಿದೆ. ಜೈನಧಾಮದಿಂದ ಹೊರಟ ಮೆರವಣಿಗೆ ಬಿ.ಡಿ ರಸ್ತೆಯಲ್ಲಿ ಸಾಗಲಿದೆ. ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದ ಮೂಲಕ ಚಂದ್ರವಳ್ಳಿ ತಲುಪಲಿದೆ.
ಜಿಲ್ಲಾಡಳಿತ ವಿಧಿಸಿದ ಹಲವು ನಿರ್ಬಂಧದ ನಡುವೆಯೇ ಮೆರವಣಿಗೆ ಅದ್ದೂರಿಯಾಗಿ ಶುರುವಾಗಿದೆ. ಮೆರವಣಿಗೆಗೆ ನಿರೀಕ್ಷೆ ಮೀರಿ ಸಾವಿರಾರು ಜನರು ಸೇರಿದ್ದಾರೆ. ಗಣೇಶ ಮೂರ್ತಿಗೆ ಎಲ್ಲೆಡೆ ಜೈಕಾರಗಳು ಮೊಳಗುತ್ತಿವೆ. ಕಲಾತಂಡಗಳು ಮೆರವಣಿಗೆಯ ಅಂದವನ್ನು ಹೆಚ್ಚಿಸಿವೆ.
ಮೆರವಣಿಗೆಗೂ ಮುನ್ನ ಜೈನಧಾಮದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಸಮವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ತಮಿಳುನಾಡಿನ ಮಂಜುನಾಥ ಸ್ವಾಮೀಜಿ, ಬಸವಪ್ರಭು ಮಡಿವಾಳ ಮಾಚಿದೇವ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ, ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.