ADVERTISEMENT

ನಾಲ್ಕು ವರ್ಷದ ಬಳಿಕ ಕೋಡಿ ಬಿದ್ದ ಗಾಯತ್ರಿ ಜಲಾಶಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 5:50 IST
Last Updated 21 ನವೆಂಬರ್ 2021, 5:50 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಇರುವ ಗಾಯತ್ರಿ ಜಲಾಶಯ ಶುಕ್ರವಾರ ರಾತ್ರಿ ಭರ್ತಿಯಾಗಿದ್ದು, ಕೋಡಿ ಬಿದ್ದಿರುವುದು ಗಮನ ಸೆಳೆಯುತ್ತಿದೆ
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಇರುವ ಗಾಯತ್ರಿ ಜಲಾಶಯ ಶುಕ್ರವಾರ ರಾತ್ರಿ ಭರ್ತಿಯಾಗಿದ್ದು, ಕೋಡಿ ಬಿದ್ದಿರುವುದು ಗಮನ ಸೆಳೆಯುತ್ತಿದೆ   

ಹಿರಿಯೂರು:ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣಗೊಂಡಿರುವ ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ಗಾಯತ್ರಿ ಜಲಾಶಯ ಶುಕ್ರವಾರ ರಾತ್ರಿ ಸುರಿದ ಮಳೆಗೆ 27ನೇ ಬಾರಿ ಕೋಡಿ ಬೀಳುವ ಮೂಲಕ ಹೋಬಳಿಯ ರೈತರಲ್ಲಿ ಸಂತಸ ಮೂಡಿಸಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ, ಶಿರಾ ತಾಲ್ಲೂಕಿನ ಬೋರನಕಣಿವೆ, ಬುಕ್ಕಾಪಟ್ಟಣ, ಬೆಳ್ಳಾರ ಪ್ರದೇಶದ ಮೂಲಕ ಹರಿದು ಬರುವ ಸುವರ್ಣಮುಖಿ ನದಿಗೆ ಅಣೆಕಟ್ಟೆ ನಿರ್ಮಿಸಲಾಗಿದೆ. ಮೈಸೂರು ಒಡೆಯರ ಆಳ್ವಿಕೆ ಸಮಯದಲ್ಲಿ ಅಂದು ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ. ಕೆಂಚಪ್ಪನವರು ಜವನಗೊಂಡನಹಳ್ಳಿ ಕರಿಯಾಲ ಗ್ರಾಮದ ಸಮೀಪ ಜಲಾಶಯ ನಿರ್ಮಿಸಲು ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿ 1958ರಲ್ಲಿ ಅಡಿಗಲ್ಲು ಹಾಕಿಸಿದ್ದರು. ₹ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಐದೇ ವರ್ಷದಲ್ಲಿ 0.97 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯವನ್ನು ನಿರ್ಮಿಸಿ, ಅದಕ್ಕೆ ಮೈಸೂರು ಒಡೆಯರ್ ಕುಟುಂಬದ ಪುತ್ರಿ ‘ಗಾಯತ್ರಿದೇವಿ’ ಎಂಬ ಹೆಸರಿಡಲಾಗಿದೆ.

ಜಲಾಶಯದ ಪೂರ್ಣ ಮಟ್ಟ 145 ಅಡಿ ಇದ್ದು, 6000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಜವನಗೊಂಡನಹಳ್ಳಿ ಹೋಬಳಿಯ 39 ಹಳ್ಳಿಗಳಿಗೆ₹ 19.14 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಪ್ರಗತಿಯಲ್ಲಿದೆ. ಸಿರಾ ತಾಲ್ಲೂಕಿನ ಹುಣಿಸೇಹಳ್ಳಿ, ಉಜ್ಜನಕುಂಟೆ ಮೊದಲಾದ ಗ್ರಾಮಗಳಿಗೆ ಇದೇ ಜಲಾಶಯದಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ADVERTISEMENT

1970ರಿಂದ ಜಲಾಶಯ ಆಗಾಗ ಕೋಡಿ ಬೀಳುತ್ತಿದ್ದು, 27 ಬಾರಿ ಕೋಡಿ ಬಿದ್ದಿರುವುದು ರೈತರಲ್ಲಿಸಂತಸ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.