ADVERTISEMENT

ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಬಂದ್

ಸಾಂಪ್ರದಾಯಿಕ ಪೂಜೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:16 IST
Last Updated 23 ಏಪ್ರಿಲ್ 2021, 5:16 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠದ ಬಾಗಿಲು ಮುಚ್ಚಿರುವುದು
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠದ ಬಾಗಿಲು ಮುಚ್ಚಿರುವುದು   

ನಾಯಕನಹಟ್ಟಿ: ಕೊರೊನಾ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಆದೇಶದಂತೆ ಬುಧವಾರ ರಾತ್ರಿಯೇ ಮುಂದಿನ ಆದೇಶ ಬರುವವರೆಗೂ ಇತಿಹಾಸ ಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಬಾಗಿಲು ಬಂದ್
ಮಾಡಲಾಯಿತು.

ರಾಜ್ಯ ಮುಜರಾಯಿ ಇಲಾಖೆಗೆ ಒಳಪಟ್ಟ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯ, ಹೊರಮಠ, ತೇರುಬೀದಿಯ ಈಶ್ವರ ದೇವಾಲಯ, ಮನುಮೈನಹಟ್ಟಿ ಬಳಿಯ ಏಕಾಂತೇಶ್ವರ ದೇವಾಲಯಗಳ ಬಾಗಿಲು ಬಂದ್ ಮಾಡಲಾಯಿತು.

ದೇವಾಲಯದ ಆವರಣದಲ್ಲಿರುವ ಹಣ್ಣುಕಾಯಿ, ಪೂಜಾ ಸಾಮಗ್ರಿಗಳ ವ್ಯಾಪಾರಿಗಳು, ಅಂಗಡಿಗಳ ಬಾಗಿಲು ಮುಚ್ಚಲಾಗಿತ್ತು. ಯಾವಾಗಲೂ ಭಕ್ತರು, ಅಂಗಡಿಗಳು, ಪೂಜಾ ಕಾರ್ಯಗಳಿಂದ ಕಂಗೊಳಿಸುತ್ತಿದ್ದ ದೇವಾಲಯದಲ್ಲಿ ಗುರುವಾರ ಯಾವುದೇ ಕಾರ್ಯಕ್ರಮಗಳಿಲ್ಲದೆ ಆವರಣ ಬಿಕೋ ಎನ್ನುತ್ತಿತ್ತು.

ADVERTISEMENT

ಕಳೆದ ವರ್ಷವೂ ಲಾಕ್‌ಡೌನ್‌ನಿಂದಾಗಿ ದೇವಾಲಯ ಬಂದ್ ಮಾಡಿದ ಪರಿಣಾಮ ದೇವಾಲಯಕ್ಕೆ ವಾರ್ಷಿಕ ₹ 50 ಲಕ್ಷಕ್ಕೂ ಹೆಚ್ಚು ಆದಾಯ ಕುಸಿತವಾಗಿತ್ತು. ಮತ್ತೆ ದೇವಾಲಯಗಳ ಬಾಗಿಲು ಮುಚ್ಚಿದ ಪರಿಣಾಮ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳು ತಲೆದೋರಲಿವೆ.

ದೇವಾಲಯದಲ್ಲಿ ಭಕ್ತರು ಹೆಚ್ಚಾಗಿ ಸೇರುವ ಮತ್ತು ದರ್ಶನ, ತೀರ್ಥಪ್ರಸಾದ, ನಿತ್ಯ ದಾಸೋಹ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಭಕ್ತರು ಬಂದಾಗ ದೇಗುಲದ ಮುಖ್ಯದ್ವಾರವನ್ನು ಮುಚ್ಚಿದ್ದರಿಂದ ಭಕ್ತರು ಹೊರಗಿನಿಂದಲೇ ಕೈಮುಗಿದು ಹಿಂತಿರುಗುತ್ತಿದ್ದರು. ಸರ್ಕಾರದ ಆದೇಶದಂತೆ ದಿನದ ತ್ರಿಕಾಲ ಪೂಜೆಯನ್ನು ಅರ್ಚಕರು ನೆರವೇರಿಸಿದರು ಎಂದು ದೇವಾಲಯದ ಸಿಬ್ಬಂದಿ ಎಸ್. ಸತೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.