ADVERTISEMENT

ಹಿರಿಯೂರು | ನೀರಿನ ಶಾಶ್ವತ ಪರಿಹಾರಕ್ಕೆ ಐತಿಹಾಸಿಕ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:28 IST
Last Updated 5 ಫೆಬ್ರುವರಿ 2026, 5:28 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 17 ಕೆರೆಗಳಿಗೆ ನೀರಿನ ಲಭ್ಯತೆ ದೊರಕಿಸಿ ಕೊಟ್ಟಿರುವ ಆದೇಶ ಪತ್ರವನ್ನು ಬುಧವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಸಚಿವ ಡಿ. ಸುಧಾಕರ್ ಅವರಿಗೆ ಹಸ್ತಾಂತರಿಸಿದರು
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 17 ಕೆರೆಗಳಿಗೆ ನೀರಿನ ಲಭ್ಯತೆ ದೊರಕಿಸಿ ಕೊಟ್ಟಿರುವ ಆದೇಶ ಪತ್ರವನ್ನು ಬುಧವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಸಚಿವ ಡಿ. ಸುಧಾಕರ್ ಅವರಿಗೆ ಹಸ್ತಾಂತರಿಸಿದರು   

ಹಿರಿಯೂರು: ತಾಲ್ಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಕುಖ್ಯಾತಿಗೆ ಒಳಗಾಗಿರುವ ಜವನಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯ 17 ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ನೀರಿನ ಲಭ್ಯತೆಯ ಆದೇಶ ಪತ್ರವನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರಿಗೆ ಹಸ್ತಾಂತರಿಸಿದರು.

ಹಲವು ವರ್ಷಗಳಿಂದ ಮಳೆಯ ಅಭಾವ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಕುಸಿತದಿಂದ ಈ ಭಾಗದ ಜನ ಸಂಕಷ್ಟ ಅನುಭವಿಸುತ್ತಿದ್ದರು. 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸುಮಾರು 100 ಜನವಸತಿ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ, ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ಕುಡಿಯುವ ನೀರು ತುಂಬಿಸುವ ಯೋಜನೆಗೆ ಅಗತ್ಯವಾದ 0.307 ಟಿಎಂಸಿ ನೀರಿನ ಹಂಚಿಕೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ಸಚಿವ ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.

ಯೋಜನೆಯ ಅನುಷ್ಠಾನದಿಂದ ಜವನಗೊಂಡನಹಳ್ಳಿ ಹೋಬಳಿಯ ಉಡುವಳ್ಳಿ, ಗೌಡನಹಳ್ಳಿ, ಗಾಂಧಿನಗರ ಚಿಕ್ಕಕೆರೆ, ಗಾಂಧಿನಗರ, ಬಗ್ಗನಡು, ವಡ್ಡನಹಳ್ಳಿ, ಮಾವಿನಮಡು, ದಿಂಡಾವರ, ಮಾಳಗೊಂಡನಹಳ್ಳಿ, ವೀರವ್ವನಾಗತೀಹಳ್ಳಿ, ಪಿಲಾಲಿ, ಜವನಗೊಂಡನಹಳ್ಳಿ, ಕಾಟನಾಯಕನಹಳ್ಳಿ, ಅರಿಶಿಣಗುಂಡಿ, ಉಳಿವಿನಹಾಳ್ ಹಾಗೂ ಯಲ್ಲದಕೆರೆ ಕೆರೆಗಳು ಹಾಗೂ ಗಾಯತ್ರಿ ಜಲಾಶಯಗಳು ಭರ್ತಿಯಾಗಲಿವೆ ಎಂದು ಹೇಳಿದರು.

ADVERTISEMENT

ಜವನಗೊಂಡನಹಳ್ಳಿ ಭಾಗದಲ್ಲಿ ಒಂದು ಸಾವಿರ ಅಡಿಯವರೆಗೆ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿರಲಿಲ್ಲ. ಕೆರೆಗಳಿಗೆ ನೀರು ತುಂಬಿದರೆ ಕುಡಿಯುವ ನೀರಿಗೆ ಶಾಶ್ವತ ಭದ್ರತೆ ದೊರೆಯಲಿದೆ. ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಹೋಬಳಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಗರಿಗೆದರಲಿದೆ ಎಂದರು.

ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಗರೀಬ್ ಆಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.