ADVERTISEMENT

ಹಿರಿಯೂರ | ಮಹಿಳಾ ವಾರ್ಡನ್‌ ಅಮಾನತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:17 IST
Last Updated 18 ಜನವರಿ 2026, 6:17 IST
ಹಿರಿಯೂರಿನ ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಿಂದ ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರಿಯೂರಿನ ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಿಂದ ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಹಿರಿಯೂರು: ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದರಿಂದ, ತಕ್ಷಣ ಅವರು ಹಾಸ್ಟೆಲ್‌ಗೆ ತೆರಳಿ ಪರಿಶೀಲಿಸಿದರು.

ವಿದ್ಯಾರ್ಥಿನಿಯ ಕರೆ ಬಂದ ಕೂಡಲೇ ಸಚಿವರು ಶನಿವಾರ ಸಂಜೆ ನಗರದ ಹರಿಶ್ಚಂದ್ರ ಘಾಟ್ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಡಿ ನೀಡಿದರು.

‘ಹಾಸ್ಟೆಲ್‌ನಲ್ಲಿ ಊಟ–ತಿಂಡಿ ಸರಿ ಇರುವುದಿಲ್ಲ. ಸಕಾಲಕ್ಕೆ ಊಟ–ತಿಂಡಿ ಕೊಡುವುದಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಗೋಗರೆದರೂ ವೈದ್ಯರಿಗೆ ತೋರಿಸುವುದಾಗಲೀ, ಕನಿಷ್ಠ ಸಂತೈಸುವ ಮಾತುಗಳನ್ನಾಗಲೀ ಆಡದೆ ಒರಟಾಗಿ ವರ್ತಿಸುತ್ತಾರೆ. ಗುಲಾಮಗಿರಿ ಮನಸ್ಥಿತಿ ನಮ್ಮದಾಗಿದೆ’ ಎಂದು ವಿದ್ಯಾರ್ಥಿನಿಯರು ವಾರ್ಡನ್ ಶ್ವೇತಾ ಅವರ ಬಗ್ಗೆ ಸಚಿವರಿಗೆ ದೂರಿದರು.

ADVERTISEMENT

‘ಇಲ್ಲಿನ ವಾತಾವರಣ ಓದಿಗೆ ಪೂರಕವಾಗಿಲ್ಲ. ವಾರ್ಡನ್ ಮಾಡಿದ್ದೆಲ್ಲವನ್ನೂ ಸಹಿಸಿಕೊಂಡಿರಬೇಕು. ಪ್ರಶ್ನಿಸಿದರೆ ಗರಂ ಆಗುತ್ತಾರೆ. ನಮಗೆ ಹಾಸ್ಟೆಲ್ ಸಹವಾಸವೇ ಬೇಡ ಎನಿಸಿದೆ’ ಎಂದು ವಿದ್ಯಾರ್ಥಿನಿಯರು ಅಲವತ್ತುಕೊಂಡರು.

ಹಾಸ್ಟೆಲ್‌ ಸ್ಥಿತಿ ಪರಿಶೀಲಿಸಿದ ಸಚಿವರು, ಮಹಿಳಾ ವಾರ್ಡನ್‌ನನ್ನು ಅಮಾನತು ಮಾಡುವಂತೆ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೇಖಾ ಅವರಿಗೆ ಸೂಚಿಸಿದರು.

‘ರಾತ್ರಿ ಊಟಕ್ಕೆ ಸಿದ್ಧಪಡಿಸಿದ್ದ ಆಹಾರವನ್ನು ತಟ್ಟೆಗೆ ಹಾಕಿಸಿಕೊಂಡು ಸಚಿವ ಸುಧಾಕರ್ ಊಟ ಮಾಡಿದರು. ನೋಟಿಸ್ ಬೋರ್ಡ್‌ನಲ್ಲಿ ಯಾವ್ಯಾವ ದಿನ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಯಾವ ಆಹಾರ ಕೊಡಲಾಗುತ್ತದೆ ಎಂಬ ಪಟ್ಟಿಯನ್ನು ಪ್ರಕಟಿಸಬೇಕು’ ಎಂದು ಸೂಚಿಸಿದರು.

‘ಹೆಣ್ಣುಮಕ್ಕಳ ಹಾಸ್ಟೆಲ್ ಆಗಿರುವ ಕಾರಣಕ್ಕೆ ಕನಿಷ್ಠ 15 ದಿನಗಳಿಗೆ ಒಮ್ಮೆಯಾದರೂ ಮಹಿಳಾ ವೈದ್ಯರೊಬ್ಬರನ್ನು ಕರೆಯಿಸಿ ಆರೋಗ್ಯ ತಪಾಸಣೆ ಮಾಡಿಸಬೇಕು. ಮಧ್ಯದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಅದೇ ವೈದ್ಯರಲ್ಲಿಗೆ ಕರೆದೊಯ್ಯಬೇಕು. ಅನುದಾನ ಇಲ್ಲವೆಂಬ ನೆಪ ಹೇಳುವುದು ಬೇಡ. ಅದಕ್ಕೆ ಬೇಕಿರುವ ಖರ್ಚನ್ನು ನಾನೇ ಕೊಡುತ್ತೇನೆ’ ಎಂದು ತಾಕೀತು ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಚಿಗಳಿಕಟ್ಟೆ ಕಾಂತರಾಜ್, ಕೆಡಿಪಿ ಸದಸ್ಯ ಗುರುಪ್ರಸಾದ್, ನಗರಸಭೆ ಮಾಜಿ ಸದಸ್ಯ ಈ. ಶಿವಣ್ಣ, ಶಿವಕುಮಾರ್, ಜ್ಞಾನೇಶ್, ರಾಮಚಂದ್ರಪ್ಪ, ರಘು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.