ಹಿರಿಯೂರು:ಕೊರೊನಾ ಬಗ್ಗೆ ಭಯ ಬೇಡ. ಆದರೆ ನಿರ್ಲಕ್ಷ್ಯ ತೋರದೆ ಎಚ್ಚರದಿಂದಿರಬೇಕು. ವಾಣಿವಿಲಾಸ ಜಲಾಶಯ ವೀಕ್ಷಣೆಗೆ ಬರುವ ವಿದೇಶಿ ಪ್ರವಾಸಿಗರ ಮೇಲೆ ನಿಗಾ ಇಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಾಕೀತು ಮಾಡಿದರು.
ತಾಲ್ಲೂಕಿನ ವಾಣಿವಿಲಾಸಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ಗ್ರಾಮದ ಪರಿಸರದಲ್ಲಿನ ಪರಿಸ್ಥಿತಿ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಹಲವು ವರ್ಷಗಳ ನಂತರ ಜಲಾಶಯಕ್ಕೆ 103 ಅಡಿ ನೀರು ಬಂದಿದೆ. ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಗಳ ಮೂಲಕ ನೀರು ಹರಿಸುತ್ತಿರುವ ಕಾರಣ ಸಹಜವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಹಂಪಿ–ಹೊಸಪೇಟೆ ನೋಡಲು ಬರುವ ವಿದೇಶಿ ಪ್ರವಾಸಿಗರು ಕೆಲವೊಮ್ಮೆ ಇಲ್ಲಿಗೂ ಬರುವುದುಂಟು. ಅವರಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡು ಬಂದಲ್ಲಿ ಉಷ್ಣತಾ ಮಾಪಕ ಬಳಸಿ ತಪಾಸಣೆ ಮಾಡಬೇಕು. ಅವರ ಗಂಟಲು ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಅಂತಹವರ ದೂರವಾಣಿ ಸಂಖ್ಯೆಯನ್ನು ತಪ್ಪದೆ ಪಡೆಯಬೇಕು. ಪ್ರವಾಸಿಗರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಕೊರೊನಾ ಕುರಿತ ಜಾಗೃತಿ ಫಲಕ ಹಾಕಬೇಕು. ನೂರಕ್ಕೂ ಹೆಚ್ಚು ಜನ ಒಂದೆಡೆ ಸೇರದಂತೆ ಸೂಚಿಸಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸುನೀತಾ, ನಟರಾಜ್, ಅಬ್ದುಲ್ ಖುದ್ದೂಸ್, ವೀಣಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.