ADVERTISEMENT

ಹಿರಿಯೂರು | ವಿಶಿಷ್ಟ ಸಂಪ್ರದಾಯದ ಕಾಳುಹಬ್ಬ ಇಂದಿನಿಂದ

ಯರಬಳ್ಳಿ ದೊಡ್ಡಹಟ್ಟಿಯ ಬುಡಕಟ್ಟು ಜನಾಂಗಕ್ಕೆ ಸೇರಿರುವ ಹಬ್ಬ

ಸುವರ್ಣಾ ಬಸವರಾಜ್
Published 8 ಫೆಬ್ರುವರಿ 2026, 7:12 IST
Last Updated 8 ಫೆಬ್ರುವರಿ 2026, 7:12 IST
ಹಿರಿಯೂರು ತಾಲ್ಲೂಕಿನ ತಾಳವಟ್ಟಿಕಟ್ಟೆಯಲ್ಲಿ ‘ಕಾಳುಹಬ್ಬ’ದ ಪ್ರಯುಕ್ತ ದೇವರನ್ನು ಭಕ್ತರು ಗಂಗಾಪೂಜೆಗೆ ಕೊಂಡೊಯ್ಯುತ್ತಿರುವುದು (ಸಂಗ್ರಹ ಚಿತ್ರ)
ಹಿರಿಯೂರು ತಾಲ್ಲೂಕಿನ ತಾಳವಟ್ಟಿಕಟ್ಟೆಯಲ್ಲಿ ‘ಕಾಳುಹಬ್ಬ’ದ ಪ್ರಯುಕ್ತ ದೇವರನ್ನು ಭಕ್ತರು ಗಂಗಾಪೂಜೆಗೆ ಕೊಂಡೊಯ್ಯುತ್ತಿರುವುದು (ಸಂಗ್ರಹ ಚಿತ್ರ)   

ಹಿರಿಯೂರು: ಬುಡಕಟ್ಟು ಜನಾಂಗಕ್ಕೆ ಸೇರಿರುವ ಗೊಲ್ಲ ಜನಾಂಗದವರು ಆಚರಿಸುವ ವಿಶಿಷ್ಟ ‘ಕಾಳುಹಬ್ಬ’ವು ತಾಲ್ಲೂಕಿನ ತಾಳವಟ್ಟಿಕಟ್ಟೆ (ಯರಬಳ್ಳಿ ದೊಡ್ಡಹಟ್ಟಿ)ಯಲ್ಲಿ ಫೆ. 8 ರಿಂದ ಆರಂಭವಾಗಲಿದೆ.

ಫೆ. 8ರಂದು ಝಂಡೆ ಮರ ಎತ್ತುವುದು, 9ರಂದು ಗಂಗಾಪೂಜೆ, 10ರಂದು ಕಾಳಿನ ಪೂಜೆ, ಅಕ್ಕಿ ಅಳೆಯುವುದು, ಜಾಡಿ ಹಾಸುವುದು, ಹೆಜ್ಜೆ ನಡೆಯುವುದು. 11ರಂದು ಬೆಳಿಗ್ಗೆ 10ರಿಂದ 12ರವರೆಗೆ ಉಂಡೆಮಂಡೆ, ಮಧ್ಯಾಹ್ನ 12.10ರಿಂದ ತುಲಾಭಾರ, ಸ್ವಾಮಿಯ ಮೈಮೇಲಿನ ಹೂವಿನ ಹಾರ ಹರಾಜು, ಮಧ್ಯಾಹ್ನ 2ರಿಂದ ಅನ್ನ ಸಂತರ್ಪಣೆ. ಫೆ. 12ರಂದು ಜಂಗ್ಲಿಗೌಡರ ಹರಿಸೇವೆ, 13ರಂದು ಕೊಂಡಕ್ಕೆ ಹೋಗುವುದು, ಫೆ.16ರಂದು ಮರುದೀಪ ಪೂಜೆಯೊಂದಿಗೆ ಹಬ್ಬ ಸಂಪನ್ನಗೊಳ್ಳುತ್ತದೆ.

ಮುತ್ತುಗದ ಎಲೆಗಳ ದೇಗುಲ:

ADVERTISEMENT

ಯರಬಳ್ಳಿ ದೊಡ್ಡಹಟ್ಟಿಯಲ್ಲಿ ಯಾದವ ಮತಕ್ಕೆ ಸೇರಿದ ಹಾಲು ಕುಡಿದ ಸ್ವಾಮಿ, ಕಾಟಮಲಿಂಗೇಶ್ವರ ಸ್ವಾಮಿ, ಸಿಂಪಣ್ಣ ದೇವರು ಹಾಗೂ ಗಾದ್ರಿ ದೇವರುಗಳ ವಿಶಿಷ್ಟ ಆಕೃತಿಯ ದೇಗುಲಗಳಿವೆ. ಇವುಗಳಲ್ಲಿ ಹಾಲು ಕುಡಿದ ಸ್ವಾಮಿ ದೇವರ ಗುಡಿಸಲು ಮುತ್ತುಗದ ಎಲೆಗಳ ಹೊದಿಕೆಯಿಂದ ನಿರ್ಮಿತವಾಗಿದ್ದರೆ, ಉಳಿದವು ಹುಲ್ಲಿನ ಹೊದಿಕೆಯಿಂದ ಕೂಡಿವೆ.

ದೇಗುಲಗಳ ಒಳಗೆ ಅರ್ಚಕ ಒಳಗೊಂಡಂತೆ ಯಾರಿಗೂ ಪ್ರವೇಶ ಇರುವುದಿಲ್ಲ. ಗುಡಿಯಲ್ಲಿ ಯಾವ ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಮಾಹಿತಿ ಯಾರಿಗೂ ಇರುವುದಿಲ್ಲ. ಕಾಳು ಹಬ್ಬದ ಸಮಯದಲ್ಲಿ ಗಂಗಾ ಪೂಜೆಗೆ (ಫೆ.9) ಹೋಗುವಾಗ ಕಣ್ಣು ಕಟ್ಟಿ, ಸುತ್ತಲೂ ಭಕ್ತರು ಕಂಬಳಿಗಳನ್ನು ಮರೆ ಮಾಡಿ, ದೇವರಿಗೆ ಸ್ನಾನ ಮಾಡಿಸಿ ಮರಳಿ ಒಯ್ದು ಗುಡಿಯಲ್ಲಿ ಇಡಲಾಗುತ್ತದೆ. ದೇಗುಲದ ಒಳಗೆ ‘ಕಂಬಳಿ ಸುತ್ತಿರುವ ಕಂಬಿ’ ಇದೆ ಎಂದು ಕೆಲವರ ನಂಬಿಕೆ.

ಪ್ರಸ್ತುತ ಪೂಜಾರಿಯಾಗಿರುವ ನಿಂಗಣ್ಣ 24 ವರ್ಷದಿಂದ ದೇವರ ಸೇವೆಯಲ್ಲಿದ್ದಾರೆ. ಜಟಾಧಾರಿ, ಲಿಂಗಧಾರಿಯಾಗಿರುವ ಅವರು ಯಾರನ್ನೂ ಮುಟ್ಟಿಸಿಕೊಳ್ಳುವುದಿಲ್ಲ. ಹಿಂದೆಲ್ಲ ಪೂಜಾರಿ ನಿರ್ವಾಣ ಸ್ಥಿತಿಯಲ್ಲಿ ಇರಬೇಕಿತ್ತು. ಆದರೆ ಈಚೆಗೆ ಲಂಗೋಟಿಯನ್ನು ಧರಿಸುತ್ತಿದ್ದು, ಹಬ್ಬಗಳಲ್ಲಿ ಮಾತ್ರ ಕಾವಿ ವಸ್ತ್ರ ಧರಿಸುತ್ತಾರೆ. ಅವರಿಗೆಂದು ನಿರ್ಮಿಸಿರುವ ಕುಟೀರದಲ್ಲಿಯೇ ವಾಸಿಸುತ್ತಾರೆ’ ಎಂದು ಹಟ್ಟಿಯ ಹಿರಿಯ ವೀರಯ್ಯ ಹೇಳುತ್ತಾರೆ.

ಗಂಗಾಪೂಜೆಗೆ ಹೋಗುವಾಗ ಭಕ್ತರು, ‘ಕಲ್ಲತ್ತಗಿರಿ ಕೈಲಾಸಗಿರಿ ಉಘೇ ಉಘೇ’ ಎಂದು ಆಕಾಶ ಮುಟ್ಟುವ ರೀತಿ ಜಯಘೋಷ ಮೊಳಗಿಸುತ್ತಾರೆ. ಗೌಡನಕಟ್ಟೆ ಹತ್ತಿರ ಪೂಜಾರಪ್ಪನ ಆಣತಿಯಂತೆ ಹಾಲು ಕುಡಿದ ಸ್ವಾಮಿ, ಕಾಟಮಲಿಂಗೇಶ್ವರ ಸ್ವಾಮಿ, ಸಿಂಪಣ್ಣ ದೇವರ ಹೆಸರಿನಲ್ಲಿ ಮೂರು ಚಿಲುಮೆ ತೆಗೆಯುತ್ತಾರೆ. ಇವನ್ನು ಯಾರೂ ನೋಡದಂತೆ ಕಂಬಳಿಗಳ ತೆರೆ ಕಟ್ಟುತ್ತಾರೆ. ಕೇವಲ ನಾಲ್ಕೈದು ಅಡಿ ಆಳದ ಚಿಲುಮೆಯಲ್ಲಿ ಎಂದಿಗೂ ನೀರು ಬತ್ತುವುದಿಲ್ಲ. ಚಿಲುಮೆಯ ನೀರಿನಲ್ಲಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುತ್ತುಗದ ಎಲೆಗಳ ಹೊದಿಕೆಯಿಂದ ನಿರ್ಮಿತವಾಗಿರುವ ಹಾಲುಕುಡಿದಸ್ವಾಮಿ ದೇವರ ಗುಡಿಸಲು (ಸಂಗ್ರಹ ಚಿತ್ರ)

ದೇವರು ಹೋದ ಕಡೆ ಮಳೆ

‘ಕಂಬಳಿ ಹೊದಿಕೆಯ ದೇವರಿಗೆ ವರ್ಷಕ್ಕೊಮ್ಮೆ ಕಾಳುಹಬ್ಬ ಮಾಡಲಾಗುತ್ತದೆ. ಪೂಜೆ ಮುಗಿದ ಮೇಲೆ ಪೂಜಾರಿ ಕಂಬಿಯನ್ನು ಹೆಗಲ ಮೇಲೆ ಇಟ್ಟು ನಡೆಯುವುದು ವಾಡಿಕೆ. ಪೂಜೆಯೆಲ್ಲ ಮುಗಿದ ಮೇಲೆ ದೇವರು ಯಾವ ದಿಕ್ಕಿನ ಕಡೆ ಮುಖ ಮಾಡಿ ಹೋಗುತ್ತದೋ ಅತ್ತಕಡೆ ಉತ್ತಮ ಮಳೆ–ಬೆಳೆ ಆಗುತ್ತದೆ’ ಎಂಬ ನಂಬಿಕೆ ಇದೆ ಎಂದು ವೀರಯ್ಯ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.