ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯ ಕಲುಷಿತ ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿಲ್ಲ ಎಂಬುದನ್ನು ಬೆಂಗಳೂರಿನ ಐಎಫ್ಎಡಿಎಫ್ಎಸಿ ಪ್ರಯೋಗಾಲಯ ಖಚಿತಪಡಿಸಿದೆ. ಪ್ರಯೋಗಾಲಯಕ್ಕೆ ರವಾನೆಯಾಗಿದ್ದ ನೀರಿನ ಮೂರು ಮಾದರಿಯ ವರದಿ ಬುಧವಾರ ಲಭ್ಯವಾಗಿದೆ.
‘ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನೀರಿನಲ್ಲಿ ಕಾಲರಾ ಹರಡಬಹುದಾದ ಸೂಕ್ಷ್ಮಾಣುಗಳು ಪತ್ತೆಯಾಗಿವೆ. ಮೃತ ಮಹಿಳೆ ಮಂಜುಳಾ ಮನೆಯಲ್ಲಿ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ವಿಬ್ರಿಯೊ ಕಾಲರಾ, ವಿಬ್ರಿಯೊ ಪ್ಯಾರಾಹೀಮೊಲೈಟಿಕಸ್ ಸೇರಿ ಇತರ ರೋಗಾಣುಗಳು ಕಂಡುಬಂದಿವೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಜಿಲ್ಲಾ ಅಂಕಿತ ಅಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ತಿಳಿಸಿದ್ದಾರೆ.
ಪ್ರಯೋಗಾಲಯದ ವರದಿಯು ಜನರ ಅನೈರ್ಮಲ್ಯ ಅಭ್ಯಾಸಗಳನ್ನು ಸೂಚಿಸುತ್ತದೆ. ಮಲದ ಸೋಂಕು ನೀರಿನಲ್ಲಿ ಕಂಡುಬಂದಿದೆ.ಡಾ.ಸಿ.ಎಲ್. ಪಾಲಾಕ್ಷ, ಜಿಲ್ಲಾ ಅಂಕಿತ ಅಧಿಕಾರಿ
‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರ ಸೂಚನೆಯ ಮೇರೆಗೆ ಕವಾಡಿಗರಹಟ್ಟಿಯ ಕಲುಷಿತ ನೀರಿನ ಮಾದರಿಗಳನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಅನಾಲಿಸಿಸ್ ಆಫ್ ಡೈರಿ, ಫುಡ್ ಅಂಡ್ ಕಲ್ಚರ್ಸ್, ಲ್ಯಾಬೊರೇಟರೀಸ್, ಪ್ರೈವೇಟ್ ಲಿಮಿಟೆಡ್ಗೆ (ಐಎಫ್ಎಡಿಎಫ್ಎಸಿ) ಕಳುಹಿಸಿಕೊಡಲಾಗಿತ್ತು. ಮೃತ ಮಹಿಳೆಯ ಮನೆ, ಕವಾಡಿಗರಹಟ್ಟಿಯ ಓವರ್ ಹೆಡ್ ಟ್ಯಾಂಕ್ ಹಾಗೂ ಬೀದಿಯ ನಲ್ಲಿಯೊಂದರಲ್ಲಿ ಸಂಗ್ರಹಿಸಿದ ನೀರಿನ ಮಾದರಿ ರವಾನಿಸಲಾಗಿತ್ತು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಟ್ಯಾಂಕ್ ನೀರಿನಲ್ಲೇ ಕಾಲರಾ ಬ್ಯಾಕ್ಟೀರಿಯಾ!
ಕವಾಡಿಗರಹಟ್ಟಿ ಓವರ್ ಹೆಡ್ ಟ್ಯಾಂಕ್ ಮೂಲಕವೇ ಕಾಲರಾ ವಿಬ್ರಿಯೊ ಬ್ಯಾಕ್ಟೀರಿಯಾ ಹರಡಿರುವ ಸಾಧ್ಯತೆ ಇದೆ ಎಂಬುದನ್ನು ಪ್ರಯೋಗಾಲಯದ ವರದಿಯಿಂದ ಅನುಮಾನ ಮೂಡಿದೆ.
ಮೃತ ಮಹಿಳೆಯ ಮನೆ, ನಲ್ಲಿ ಹಾಗೂ ಓವರ್ ಹೆಡ್ ಟ್ಯಾಂಕ್ನ ನೀರಿನ ವರದಿ ಒಂದೇ ರೀತಿ ಇದೆ. ಓವರ್ ಹೆಡ್ ಟ್ಯಾಂಕ್ ನೀರಿನ ಮಾದರಿಯಲ್ಲಿ ವಿಬ್ರಿಯೊ ಕಾಲರಾ, ವಿಬ್ರಿಯೊ ಪ್ಯಾರಾಹೀಮೊಲೈಟಿಕಸ್, ಸಲ್ಫೈಟ್ ಕಡಿಮೆಗೊಳಿಸುವ ಅನೇರೋಬ್ಸ್ ಸೇರಿ ಇತರ ರೋಗಾಣುಗಳು ಕಂಡುಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.