ADVERTISEMENT

ಚಳ್ಳಕೆರೆ: ಕ್ಯಾತಪ್ಪನ ಆರಾಧನೆ; ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ

ಕಾಡುಗೊಲ್ಲರ ವಿವಿಧ ಹಟ್ಟಿಗಳಲ್ಲಿ ಇಂದಿನಿಂದ ಸಂಭ್ರಮ

ಶಿವಗಂಗಾ ಚಿತ್ತಯ್ಯ
Published 25 ಡಿಸೆಂಬರ್ 2025, 7:46 IST
Last Updated 25 ಡಿಸೆಂಬರ್ 2025, 7:46 IST
ಚಳ್ಳಕೆರೆಯ ಪಾವಗಡ ರಸ್ತೆ ಬಳಿ ಇರುವ ದೇವರ ಪೂಜೆ ಮರ
ಚಳ್ಳಕೆರೆಯ ಪಾವಗಡ ರಸ್ತೆ ಬಳಿ ಇರುವ ದೇವರ ಪೂಜೆ ಮರ   
15 ದಿನ ನಡೆಯಲಿರುವ ಜಾತ್ರೆ ಸಂಭ್ರಮ | ಬರಿಗಾಲಲ್ಲಿ ಕಳ್ಳೆಮುಳ್ಳಿನ ಗುಡಿ ಹತ್ತುವ ವೀರಗಾರರ ತಂಡ | ಚನ್ನಮ್ಮನಾಗತಿಹಳ್ಳಿಯಲ್ಲಿ ದೇವರುಗಳ ಮೆರವಣಿಗೆ

ಚಳ್ಳಕೆರೆ: ಕಾರ್ತಿಕ- ಮಾರ್ಘಶಿರ ಮಾಸದ ಬಹುಳ ಅಮಾವಾಸ್ಯೆ ನಂತರ ಡಿ. 25ರಿಂದ ಜ. 9ರವರೆಗೆ ತಾಲ್ಲೂಕಿನ ಕಾಡುಗೊಲ್ಲ ಸಮುದಾಯದ ವಿವಿಧ ಹಟ್ಟಿಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಕಳ್ಳೆಮುಳ್ಳಿನ ಜಾತ್ರೆಯ ವಿಶಿಷ್ಟ ಆಚರಣೆಗಳು ಆರಂಭವಾಗಲಿವೆ.

ಇದನ್ನು ಗುರುವಾರ ಆರಂಭಿಸಿ ಸಂಜೆಯೇ ಅಂತ್ಯಗೊಳಿಸಬೇಕು ಎಂಬ ನಿಯಮವಿದೆ. ಹೀಗಾಗಿ ಚಳ್ಳಕೆರೆಯ ಕಾಟಪ್ಪನಹಟ್ಟಿಯ ಮರವಾಯಿ ಬೆಡಗಿನ ಕಾಡುಗೊಲ್ಲರು ಪಾವಗಡ ರಸ್ತೆಯ ರೈಲ್ವೆ ಗೇಟ್ ಬಳಿ ಡಿ. 25ರಂದು ಮಧ್ಯಾಹ್ನ 1.30ಕ್ಕೆ ದೇವರ ಪೂಜೆ  ಮರಕ್ಕೆ (ಹತ್ತಿ) ವಿಶಿಷ್ಟ ಪೂಜೆ ಸಲ್ಲಿಸಿ ಮರ ಕಡಿಯುತ್ತಾರೆ. ಅದರೊಂದಿಗೆ ಜಾತ್ರೆಯ ಮೊದಲ ಆಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ.

ಕಟ್ಟೆಮನೆ ಚನ್ನಮ್ಮನಾಗತಿಹಳ್ಳಿಯಲ್ಲಿ ಹುರುಳಿ ಕಾಯಿ ತೊಳೆಯುವ ಆಚರಣೆ, ಮನೆಶುದ್ಧಿ ಕಾರ್ಯ, ದೇವರಿಗೆ ಕಂಕಣ ಕಟ್ಟುವುದು ಮತ್ತು ಗುಡಿಕಟ್ಟಿನ ವ್ಯಾಪ್ತಿಯ ಕಾಡುಗೊಲ್ಲ ಭಕ್ತರಿಗೆ ಮಾಹಿತಿ ನೀಡಲಾಗುತ್ತದೆ. ಕಡಿದ ದೇವರ (ಪೂಜೆ) ಮರವನ್ನು ಪುರ್ಲೆಹಳ್ಳಿ ಗ್ರಾಮದ ಜಾತ್ರಾ ಸ್ಥಳಕ್ಕೆ ಹೊತ್ತು ಮೆರವಣಿಗೆ ಮೂಲಕ ಸಾಗಿಸಲಾಗುತ್ತದೆ. ಚನ್ನಮ್ಮನಾಗತಿಹಳ್ಳಿಯ ಕ್ಯಾತಪ್ಪನ ದೇವಸ್ಥಾನದ  ಸುತ್ತಲೂ ಕಳ್ಳೆಬೇಲಿ (ಪಾರಿಬೇಲಿ) ಕಟ್ಟಲಾಗುತ್ತದೆ. ನಂತರ ಜೂಜಿನ ಕಳ್ಳೆ ಹಾಕಲಾಗುತ್ತದೆ. 

ADVERTISEMENT

ಡಿ. 31ರಂದು ಬೆಳಿಗ್ಗೆ 6 ಗಂಟೆಗೆ ಚುಮು ಚುಮು ಚಳಿಯಲ್ಲಿ ಜಾತ್ರಾ ಸ್ಥಳದಲ್ಲಿ ಎರೆದ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ, ಜಾಲಿಕಳ್ಳೆ, ಬಾರೆಕಳ್ಳೆ, ಬಂದ್ರೆಸೊಪ್ಪು ಮತ್ತು ಗಳಗಳಿಂದ 20 ಅಡಿ ಎತ್ತರದ ಕಳ್ಳೆ ಗುಡಿ ನಿರ್ಮಿಸಲಾಗುತ್ತದೆ.

ನಂತರ ಆರಾಧ್ಯ ದೈವ ಬಂಜಗೆರೆ ವೀರಣ್ಣ, ಬತವಿನ ದೇವರು, ಈರಬಡಕ್ಕ, ಕ್ಯಾತಗೊಂಡನಹಳ್ಳಿ ಕದರಿ ನರಸಿಂಹ, ಟಿ.ಎನ್.ಕೋಟೆ ಕೊಂಡದ ಚಿತ್ತಮ್ಮ, ಕೋಣದ ದೇವರು ಮತ್ತು ಆಂಧ್ರಪ್ರದೇಶದ ಅಯ್ಯಗಾರ್ಲಹಳ್ಳಿಯ ತಾಳಿದೇವರು, ಚನ್ನಮ್ಮನಾಗತಿಹಳ್ಳಿಗೆ ಬಂದು ಸೇರುತ್ತವೆ.

ಪುರ್ಲೆಹಳ್ಳಿ ವಸತಿ ದಿಬ್ಬದ ಬಳಿ ಅಕ್ಕಮ್ಮನ ಪೂಜೆ, ಗಂಗಾಪೂಜೆ ನಂತರ ದೇವರನ್ನು ಕಳ್ಳೆಮುಳ್ಳಿನ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಹುತ್ತದ ಪೂಜೆ, ಕೊಣದ ಪೂಜೆ, ಆವಿನ ಗೂಡು ಮತ್ತು ಕರವಿನಗೂಡಿನ ಪೂಜೆ, ಮಣ್ಣಿನಲ್ಲಿ ನವಣೆ ಕುಟ್ಟುವ ಆಚರಣೆ ಜರುಗಲಿದೆ.

ಅನ್ನದ ನೈವೇದ್ಯ, ನವಣೆ ವ್ರತ ವಿಸರ್ಜನೆ ಮತ್ತು ಜಾತ್ರೆಗೆ ಸೇರುವ ಕ್ಯಾತಪ್ಪನ ಒಕ್ಕಲಿನ ಭಕ್ತರಿಂದ ಪೂಜಾ ಖರ್ಚು-ವೆಚ್ಚ ಸ್ವೀಕರಣೆ ನಡೆಯಲಿದೆ.

ಜ. 5ರ ಸೋಮವಾರ ಸಂಜೆ 4 ಗಂಟೆಗೆ ವೀರಗಾರರ ಗುಂಪಿನವರು ಬರಿಗಾಲಲ್ಲಿ ಕಳ್ಳೆಮುಳ್ಳಿನ ಗುಡಿ ಹತ್ತಿ ಕೆಲವೇ ಕ್ಷಣದಲ್ಲಿ ಕಳಸ ಕೀಳುವ ರೋಚಕ ಆಚರಣೆ ಜರುಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದಲೂ 25 ಸಾವಿರಕ್ಕೂ ಹೆಚ್ಚು ಜನರು ಸೇರಿರುತ್ತಾರೆ.

ಜಾತ್ರೆಗೆ ಸೇರಿದ ಪರಿವಾರದ ದೇವರುಗಳನ್ನು ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ರಾತ್ರಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ದೇವರುಗಳು ಆಯಾ ಸ್ಥಳಗಳಿಗೆ ಹಿಂದಿರುಗುತ್ತವೆ. ಜ. 8ರ ಗುರುವಾರ ಚನ್ನಮ್ಮನಾಗತಿಹಳ್ಳಿ ಗ್ರಾಮದ ಕ್ಯಾತಪ್ಪ ದೇವರ ಗುಡಿಯಲ್ಲಿ ಹುರುಳಿಧಾನ್ಯ ನೈವೇದ್ಯ ಅರ್ಪಣೆ ಮತ್ತು ಮಹಾ ಮಂಗಳಾರತಿ ನಡೆಸುವ ಮೂಲಕ ಜಾತ್ರಾ ಆಚರಣೆಗೆ ತೆರೆ ಎಳೆಯಲಾಗುತ್ತದೆ.

ಪುರ್ಲೆಹಳ್ಳಿಯಲ್ಲಿ ನಡೆಯಲಿರುವ ಕ್ಯಾತಪ್ಪನ ಜಾತ್ರೆಗೆ ಹೊರಡುವ ಪರಿವಾರದ ದೇವರುಗಳು
ಪುರ್ಲೆಹಳ್ಳಿ ಗ್ರಾಮದಲ್ಲಿ ನಡೆದ ಕಾಡುಗೊಲ್ಲರ ಕ್ಯಾತಪ್ಪನ ಪರಿವಾರದ ದೇವರುಗಳ ಮೆರವಣಿಗೆ (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.