ಚಿತ್ರದುರ್ಗ: ‘ಹಸಿವು ಮುಕ್ತ ಕರ್ನಾಟಕ’ ಘೋಷವಾಕ್ಯದಡಿ 2018ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭವಾದ ‘ಇಂದಿರಾ ಕ್ಯಾಂಟೀನ್’ಗಳು ಅಧೋಗತಿಗೆ ತಲುಪಿವೆ. ಈ ಕ್ಯಾಂಟೀನ್ಗಳಲ್ಲಿ ಸ್ವಚ್ಛತೆ, ರುಚಿ ಹಾಗೂ ನಿರ್ವಹಣೆ ಮರೆಯಾಗಿವೆ.
ಚಿತ್ರದುರ್ಗದ ಪ್ರವಾಸಿ ಮಂದಿರ ಹಾಗೂ ಯೂನಿಯನ್ ಉದ್ಯಾನದಲ್ಲಿ ಕ್ಯಾಂಟೀನ್ಗಳಿವೆ. 2018ರ ಮಾರ್ಚ್ 8ರ ವಿಶ್ವ ಮಹಿಳಾ ದಿನಾಚರಣೆಯಂದು ಪ್ರವಾಸಿ ಮಂದಿರ, ಮಾರ್ಚ್ 24ರಂದು ತೀವ್ರ ಗೊಂದಲ, ವಾಗ್ವಾದದ ನಡುವೆಯೇ ಯೂನಿಯನ್ ಉದ್ಯಾನದ ಕ್ಯಾಂಟೀನ್ಗಳು ಉದ್ಘಾಟನೆಗೊಂಡಿದ್ದವು.
ಅಡುಗೆ ತಯಾರಿಕೆಗೆ ಬಳಸಬೇಕಿದ್ದ ಆತ್ಯಾಧುನಿಕ ಪರಿಕರಗಳು ಈಗ ಮೂಲೆ ಸೇರಿವೆ. ಕ್ಯಾಂಟೀನ್ನ ಸಿಬ್ಬಂದಿ ಗ್ಲೌಸ್, ಮಾಸ್ಕ್, ಸಮವಸ್ತ್ರ ಮರೆತಿದ್ದಾರೆ. ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಇಲ್ಲವಾಗಿದೆ. ಇಡೀ ಆವರಣ ಕಸದ ತೊಟ್ಟಿಯಾಗಿ ಬದಲಾಗಿದೆ.
ಯೂನಿಯನ್ ಉದ್ಯಾನದ ಕ್ಯಾಂಟೀನ್ನಲ್ಲಿ ಅಡುಗೆ ತಯಾರಿ ಸ್ಥಗಿತಗೊಳಿಸಿ ವರ್ಷಗಳೇ ಕಳೆದಿವೆ. ಅಡುಗೆ ಮನೆಯು ಇಲಿ, ಹೆಗ್ಗಣಗಳ ತಾಣವಾಗಿದೆ. ನೀರೆತ್ತುವ ಮೋಟಾರ್ ಪಂಪ್ ಹಾಳಾಗಿದೆ. ಇಡೀ ವಾತಾವರಣದಲ್ಲಿ ಶುಚಿತ್ವ ಮಾಯವಾಗಿದ್ದು, ಮೆಲ್ನೋಟಕ್ಕೆ ಕ್ಯಾಂಟೀನ್ ಮುಚ್ಚಿ ಹೋಗಿರುವಂತೆ ಭಾಸವಾಗುತ್ತಿದೆ.
‘ಅತ್ಯಾಧುನಿಕ ಅಡುಗೆ ಪರಿಕರಗಳಿಗೆ ಈವರೆಗೂ ಪೈಪ್ಡ್ ಗ್ಯಾಸ್ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಅವು ಇದ್ದೂ ಇಲ್ಲದಂತಾಗಿವೆ. ಅವುಗಳ ಬದಲಿಗೆ, 20 ಕೆ.ಜಿ. ಅನ್ನ ಸಿದ್ಧಗೊಳಿಸುವಷ್ಟು ಸಾಮರ್ಥ್ಯದ ಎರಡು ಪಾತ್ರೆ, ಚಿಕ್ಕದೊಂದು ಇಡ್ಲಿ ಪಾತ್ರೆ, ಎರಡು ಗ್ಯಾಸ್ ಒಲೆ, ಒಂದು ಸಿಲಿಂಡರ್ ಇಟ್ಟುಕೊಂಡು ಅಡುಗೆ ಸಿದ್ಧಗೊಳಿಸಲಾಗುತ್ತಿದೆ’ ಎನ್ನುತ್ತಾರೆ ಪ್ರವಾಸಿ ಮಂದಿರ ಆವರಣದ ಕ್ಯಾಂಟೀನ್ ಸಿಬ್ಬಂದಿ.
‘ಪ್ರತಿ ಕ್ಯಾಂಟೀನ್ನಲ್ಲಿ ನಿತ್ಯ 400 ರಿಂದ 500 ಜನ ತಿಂಡಿ, ಊಟ ಮಾಡುತ್ತಿದ್ದಾರೆ. ಗುತ್ತಿಗೆ ತೆಗೆದುಕೊಂಡಿರುವ ಸಂಸ್ಥೆಯು ಪ್ರವಾಸಿ ಮಂದಿರದ ಕ್ಯಾಂಟೀನ್ನಲ್ಲಿ ಅಡುಗೆ ಸಿದ್ಧಗೊಳಿಸಿ ಯೂನಿಯನ್ ಉದ್ಯಾನದ ಕ್ಯಾಂಟೀನ್ಗೂ ಪೂರೈಸುತ್ತಿದೆ’ ಎನ್ನುತ್ತಾರೆ ಸಿಬ್ಬಂದಿ.
ಸರ್ಕಾರವು ಗ್ರಾಹಕರಿಗೆ ತಿಂಡಿಗೆ ₹5 (ಬೆಳಿಗ್ಗೆ), ಊಟಕ್ಕೆ (ಮಧ್ಯಾಹ್ನ ಹಾಗೂ ರಾತ್ರಿ) ₹ 10 ದರ ನಿಗದಿಪಡಿಸಿದೆ. ಏಜೆನ್ಸಿಯವರು ಗುತ್ತಿಗೆ ಪಡೆದು ಆಹಾರ ಪೂರೈಸುತ್ತಾರೆ. ಆಟೊದವರು, ವ್ಯಾಪಾರಿಗಳು, ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ಪೌರಕಾರ್ಮಿಕರು, ಇಂದಿರಾ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
‘ನಿತ್ಯ ಬೆಳಿಗ್ಗೆ 7.30ರಿಂದ ಉಪಾಹಾರ, ಮಧ್ಯಾಹ್ನ 12ಕ್ಕೆ ಊಟ ಹಾಗೂ ರಾತ್ರಿ 7ರಿಂದ ಊಟ ನೀಡಲಾಗುತ್ತದೆ. ಉಪಾಹಾರಕ್ಕೆ ಇಡ್ಲಿ, ಚಟ್ನಿ, ಪುಳಿಯೊಗರೆ, ಪೊಂಗಲ್, ತರಕಾರಿ ಪಲಾವ್, ಖಾರಾ ಬಾತ್, ಚಿತ್ರಾನ್ನ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ, ಸಾಂಬಾರ್, ಮುದ್ದೆ, ಮೊಸರನ್ನ ಒಳಗೊಂಡ ‘ಮೆನು’ವನ್ನು ಕ್ಯಾಂಟೀನ್ನಲ್ಲಿ ಹಾಕಲಾಗಿದೆ. ಆದರೆ ದಿನವೂ ಚಿತ್ರಾನ್ನ, ಚಟ್ನಿ, ಅನ್ನ ಸಾಂಬಾರ್ ಮಾಮೂಲಿಯಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.
ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟಕ್ಕೆ ಮಾತ್ರ ಹೆಚ್ಚು ಬೇಡಿಕೆ ಇದೆ. ರಾತ್ರಿ ನಿಗದಿಗಿಂತ ಕಡಿಮೆ ಗ್ರಾಹಕರು ಊಟ ಮಾಡುತ್ತಾರೆ. ಸ್ವಚ್ಛತೆಯಿಲ್ಲದ ಕಾರಣ ಕ್ಯಾಂಟೀನ್ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ.
ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚನೆ ನೀಡುವುದು ಸಾಮಾನ್ಯವಾಗಿದೆ. ಆದರೆ ಬದಲಾವಣೆ ಮಾತ್ರ ಕಾಣುತ್ತಿಲ್ಲ.
ಚಿತ್ರಚದುರ್ಗ ನಗರದ ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರದ ಗುಣಮಟ್ಟ ಸ್ವಚ್ಛತೆ ಮೂಲಸೌಲಭ್ಯದ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಲಾಗುತ್ತದೆಬಿ.ಎನ್.ಸುಮಿತಾ ಅಧ್ಯಕ್ಷೆ ನಗರಸಭೆ
ಕ್ಯಾಂಟೀನ್ನಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಇತ್ತೀಚಿಗೆ ಉಪಾಹಾರ ಊಟ ಬೇಗ ಖಾಲಿಯಾಗುತ್ತಿದೆ. ಕಡಿಮೆ ದರಕ್ಕೆ ನೀಡುತ್ತಾರೆ ಎಂದು ನಾವು ಯಾವುದನ್ನೂ ಪ್ರಶ್ನಿಸುವುದಿಲ್ಲಲೋಕೇಶ್ ಗ್ರಾಹಕ ಚಿತ್ರದುರ್ಗ
6 ತಿಂಗಳಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದ್ದು ಕಡಿಮೆ ಹಣದಲ್ಲಿ ಹಸಿವು ನೀಗಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಸಾವಿರಾರು ಬಡವರು ಕೂಲಿಕಾರ್ಮಿಕರ ಆಸೆಗೆ ತಣ್ಣೀರು ಎರಚಿದಂತಾಗಿದೆಎನ್.ಸಿ.ತಿಪ್ಪೇಸ್ವಾಮಿ ಉಪಾಧ್ಯಕ್ಷ ಕಟ್ಟಡ ಕಾರ್ಮಿಕರ ಸಂಘ ನಾಯಕನಹಟ್ಟಿ
ಸ್ಥಳಿಯ ಪ್ರಭಾವಿ ವ್ಯಕ್ತಿಗಳು ಇಂದಿರಾ ಕ್ಯಾಂಟೀನ್ ಮುಂದೆ ಗೂಡಂಗಂಡಿಗಳನ್ನು ತೆರೆದಿದ್ದಾರೆ. ಅಕ್ರಮವಾಗಿ ತಲೆ ಎತ್ತಿರುವ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆಬಿ.ಟಿ.ಪ್ರಕಾಶ್ ಅಧ್ಯಕ್ಷರು ರಾಷ್ಟ್ರೀಯ ಕಿಸಾನ್ ಸಂಘ ನಾಯಕನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.