
ನಾಯಕನಹಟ್ಟಿ: ಬುಡಕಟ್ಟು ವಾದ್ಯಗಳ ನಿನಾದ ಒಂದೆಡೆಯಾದರೆ, ನೂರಾರು ಮಹಿಳೆಯರ ಜನಪದ ಗೀತೆಗಳ ಜೋಗುಳದಲ್ಲಿ ಪಟ್ಟದ ಪೂಜಾರಿಯು ಬೋಸೆರಂಗಸ್ವಾಮಿಯ ಪೆಟ್ಟಿಗೆಯನ್ನು ಹೊತ್ತು ಬರುತ್ತಿದ್ದಂತೆ ಭಕ್ತರು ಭಾವಪರವಶರಾಗಿ ನಮಿಸುತ್ತಿದ್ದ ದೃಶ್ಯ ಬೋಸೆದೇವರಹಟ್ಟಿಯಲ್ಲಿ ಭಾನುವಾರ ಕಂಡುಬಂತು.
ಗ್ರಾಮದ ಬುಡಕಟ್ಟು ದೈವ ಬೋಸೆರಂಗಸ್ವಾಮಿಯನ್ನು ಭಾನುವಾರ ಸಂಜೆ ಭವ್ಯ ಮೆರವಣಿಗೆಯೊಂದಿಗೆ ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು.
ಬುಧವಾರ ಆರಂಭವಾಗಿದ್ದ ಜಾತ್ರೆಯ ಅಂಗವಾಗಿ ಸಮೀಪದ ಹಿರೇಕೆರೆಯಲ್ಲಿ ಹುಲ್ಲಿನ ಪೌಳಿ ಮಂಟಪ ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ನಿತ್ಯವೂ ವಿವಿಧ ಬುಡಕಟ್ಟು ಸಂಸ್ಕೃತಿಯ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಅಲ್ಲಿ ದೇವರೆತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪಂಜಿನ ಸೇವೆ, ಸಜ್ಜೆ, ಗೋಧಿ, ಅಕ್ಕಿಯ ಅರಿ ಸೇವೆ ಸೇರಿದಂತೆ ಹಲವು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕಿಲಾರಿಗಳಿಗೆ ಉಡುಗೊರೆಗಳನ್ನು ನೀಡಲಾಯಿತು.
ಭಾನುವಾರ ಬೆಳಗಿನಿಂದಲೇ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಉತ್ಸಾಹದಿಂದ ಹಿರೆಕೆರೆಗೆ ತಂಡೋಪತಂಡವಾಗಿ ತೆರಳಿ ಹಾಡು ನೃತ್ಯಗಳೊಂದಿಗೆ ಪುಳಕಿತರಾದರು. ಉರುಮೆ ತಪ್ಪಡಿ, ಶಂಖ ಜಾಗಟೆ, ಧಗಮು, ಕರಿಕಂಬಳಿ ಹೊದ್ದ ಕಿಲಾರಿಗಳ ನೃತ್ಯದಿಂದ ಶಾಸ್ತ್ರೋಕ್ತವಾಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ದೇವರನ್ನು ಹೊತ್ತ ಪಟ್ಟದ ಪೂಜಾರಿಯ ಕಾಲನ್ನು ಮಹಿಳೆಯರು ತೊಳೆದು ಪೂಜೆ ಸಲ್ಲಿಸುತ್ತಿದ್ದರು. ಮೆರವಣಿಗೆಯು 4 ಕಿ.ಮೀ.ಸಾಗಿ ಗ್ರಾಮವನ್ನು ಪ್ರವೇಶಿಸಿದಾಗ ಭಕ್ತರು ದೇವರಿಗೆ ಬಾಳೆಹಣ್ಣು, ತೆಂಗಿನಕಾಯಿ, ಚೂರುಬೆಲ್ಲ, ಮೆಣಸು ಎರಚಿದರು. ಬೆಲ್ಲ, ಸಕ್ಕರೆಯನ್ನು ನೈವೇದ್ಯ ನೀಡಲಾಯಿತು. ದೇವರೆತ್ತುಗಳಿಗೆ ಬೆಲ್ಲವನ್ನು ಅರ್ಪಿಸಿ ಸಂಜೆ ದೇವರನ್ನು ಗುಡಿದುಂಬಿಸಲಾಯಿತು.
ಬೋಸೆದೇವರಹಟ್ಟಿ, ಹಾಯ್ಕಲ್, ಬೆಳಗಟ್ಟ, ಕಡಬನಕಟ್ಟೆ, ಹೊಸಪೇಟೆ, ಕಮಲಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದರು.
ಪ.ಪಂ. ಸದಸ್ಯರಾದ ಪಿ.ಓಬಯ್ಯ, ಪಿ.ಬೋಸಮ್ಮ, ಗ್ರಾಮದ ಮುಖಂಡರಾದ ಪೂಜಾರಿ ಮಲ್ಲಿಕಾರ್ಜುನ, ಕುರಿಕಿಲಾರಿ ಬೋರಯ್ಯ, ಎತ್ತಿನ ಬೋಸಯ್ಯ, ಯಜಮಾನ್ ಡಿ.ಬಿ.ಬೋರಯ್ಯ, ಪಿ.ಬಿ.ತಿಪ್ಪೇಸ್ವಾಮಿ, ಜಿ.ಬಿ.ಮುದಿಯಪ್ಪ, ಬಿ.ಎಂ.ಪ್ರಕಾಶ್, ಬಿ.ಡಿ.ಧನಂಜಯ, ಮುದಿಯಪ್ಪ, ಬಿ.ಎಲ್.ಬೋಸಯ್ಯ, ಪಿ.ಬಿ.ನಾರಾಯಣಸ್ವಾಮಿ, ಬಿ.ಬೋಸೆರಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.