ADVERTISEMENT

ಕಾಂಗ್ರೆಸ್‌ ಬಲವರ್ಧನೆಗೆ ಶ್ರಮಿಸಿದ ಆಸ್ಕರ್‌: ಮಾಜಿ ಸಚಿವ ಎಚ್.ಆಂಜನೇಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 15:30 IST
Last Updated 13 ಸೆಪ್ಟೆಂಬರ್ 2021, 15:30 IST
ಆಸ್ಕರ್‌ ಫರ್ನಾಂಡಿಸ್‌
ಆಸ್ಕರ್‌ ಫರ್ನಾಂಡಿಸ್‌   

ಚಿತ್ರದುರ್ಗ: ಕೊನೆಯ ಸಾಲಿನಲ್ಲಿ ಕುಳಿತ ಪಕ್ಷದ ನಿಷ್ಠಾವಂತರನ್ನು ಗುರುತಿಸಿ ಮೊದಲ ಸಾಲಿನ ನಾಯಕರನ್ನಾಗಿ ಬೆಳೆಸಿದ ಆಸ್ಕರ್‌ ಫರ್ನಾಂಡಿಸ್‌ ಅವರು ಕಾಂಗ್ರೆಸ್‌ ಬಲವರ್ಧನೆಗೆ ಅಪಾರವಾಗಿ ಶ್ರಮಿಸಿದ್ದರು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಸ್ಮರಿಸಿದ್ದಾರೆ.

‘ಪಕ್ಷ ಸಂಘಟನೆಯಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡ ಕಾರ್ಯಕರ್ತರನ್ನು ಗುರುತಿಸುವ ಗರುಡ ದೃಷ್ಟಿ ಅವರಿಗಿತ್ತು. ದೇಶದ ಮೂಲೆ–ಮೂಲೆಯಲ್ಲಿರುವ ಕಾರ್ಯಕರ್ತರನ್ನು ಗುರುತಿಸಿ ಅರ್ಹ ಸ್ಥಾನ ಕಲ್ಪಿಸುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಿದರು. ನನ್ನ ರಾಜಕೀಯ ಶ್ರೇಯೋಭಿವೃದ್ಧಿಯಲ್ಲಿ ಆಸ್ಕರ್‌ ಅವರ ಕೊಡುಗೆ ಅಪಾರವಾಗಿದೆ. ನನ್ನಂತಹ ನೂರಾರು ಜನರಿಗೆ ರಾಜಕೀಯ ಭವಿಷ್ಯ ಕಲ್ಪಿಸಿದರು. ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

ADVERTISEMENT

‘ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಲೋಕಸಭೆ, ವಿಧಾನಸಭೆ ಟಿಕೆಟ್ ಕೊಡಿಸಿ ಹುಬ್ಬೇರಿಸುವಂತೆ ಮಾಡಿದ್ದು ಮಾದರಿ ಕಾರ್ಯವಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಮುಖ ಹುದ್ದೆಗಳು ಸಾಮಾನ್ಯ ಕಾರ್ಯಕರ್ತರಿಗೆ ಲಭಿಸುವಂತೆ ಬಹಳಷ್ಟು ಶ್ರಮಿಸುತ್ತಿದ್ದರು. ಎಷ್ಟೇ ಉನ್ನತ ಸ್ಥಾನಕ್ಕೆ ಹೋಗಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರನ್ನು ಕಳೆದುಕೊಂಡ ಪಕ್ಷ ಹಾಗೂ ನನ್ನಂತ ಕಾರ್ಯಕರ್ತರಿಗೆ ಅಪಾರ ನೋವಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.