
ಮೊಳಕಾಲ್ಮುರು: ಜಿಲ್ಲೆಯ ಮುಖ್ಯ ಜಾತ್ರೆಗಳಲ್ಲಿ ಒಂದಾದ ತಾಲ್ಲೂಕಿನ ರಾಯಾಪುರದ ಕೋಟೆಗುಡ್ಡ ಮಾರಮ್ಮದೇವಿ ಜಾತ್ರೆಗೆ ಜ.6 ರಂದು ಚಾಲನೆ ಸಿಗಲಿದೆ.
ಪ್ರತಿವರ್ಷ ಶೂನ್ಯಮಾಸದಲ್ಲಿ ಈ ಜಾತ್ರೆ ನಡೆಯುವುದು ವಾಡಿಕೆ. ಪ್ರಯುಕ್ತ 6ರಂದು ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗಂಗಾಪೂಜೆಗೆ ತೆಗೆದು ಹೋಗಲಾಗುವುದು. ಸಂಜೆ ಅಗ್ನಿಕುಂಡ, ಕಾಸುಮೀಸಲು ಅರ್ಪಣೆ ಕಾರ್ಯ ನಡೆಯಲಿವೆ.
7ರಂದು ದೇವಿಗೆ ವಿಶೇಷ ಪೂಜೆ, ಸಂಜೆ ವೀರಪೋತರಾಜುಲು ಅವರಿಂದ ಪೂಜೆ ಸಲ್ಲಿಕೆ, ಸಂಜೆ 4.30ಕ್ಕೆ ದೇವಸ್ಥಾನ ಮುಂಭಾಗದಲ್ಲಿ ಪ್ರಸಿದ್ಧ ಸಿಡಿ ಉತ್ಸವ ಜರುಗಲಿದೆ. ಶುಕ್ರವಾರ ಬೆಳಿಗ್ಗೆ ದೇವಿಯನ್ನು ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ದೇವಿ ಹಿನ್ನೆಲೆ: ದೇವಿಯ ಮೂಲ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಪೈತೋಟವಾಗಿದ್ದು, ಅಲ್ಲಿಂದ ಇಲ್ಲಿಗೆ ತಂದು ಗುಡಿಸಲಿನಲ್ಲಿ ಮೊದಲು ಪ್ರತಿಷ್ಠಾಪನೆ ಮಾಡಲಾಯಿತು. 1979ರಲ್ಲಿ ದೇವಿ ಅಪ್ಪಣೆಯಂತೆ ನೀರು ಉಪಯೋಗ ಮಾಡದೇ ಹಾಲು, ತುಪ್ಪ, ಮೊಸರು ಬಳಸಿ 7 ದಿನದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ರೋಗ ನಿವಾರಕಿ, ಹರಕೆ ತೀರಿಸುವ ದೇವಿ ಎಂದು ಪ್ರಸಿದ್ಧಿ ಪಡೆದಿದ್ದು, ಹಸಿರುಬಳೆ, ಹಸಿರುಸೀರೆ ಅರ್ಪಿಸಲಾಗುತ್ತದೆ ಎಂದು ಹಿರಿಯರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.