
ಹಿರಿಯೂರು: ತಮ್ಮ ಸಂಶೋಧನಾ ಕೃತಿಗಳು ಎಷ್ಟೇ ಮೌಲ್ಯಯುತವಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಲೇಖಕರು ಪ್ರಕಟಣೆಗೆ ಹಿಂಜರಿಯುತ್ತಾರೆ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎ. ರಘುರಾಮ್ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಆರ್. ಮಹೇಶ್ ರಚಿಸಿರುವ ‘ತರಾಸು ಕಾದಂಬರಿ ಲೋಕ–ಸ್ತ್ರೀ ಸಂವೇದನೆ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮಹೇಶ್ ಅವರ ಪ್ರಗತಿಶೀಲ ಸಾಹಿತ್ಯದ ಪರಿಚಯ ಮಾಡಿಸುವ ಮೂಲಕ ತರಾಸು ಅವರ ಕಾದಂಬರಿಗಳನ್ನು ಸೂಕ್ಷ್ಮ ವಿಮರ್ಶೆಗೆ ಒಳಪಡಿಸಿದೆ. ಕಾದಂಬರಿಗಳಲ್ಲಿ ಕಂಡುಬರುವ ಸ್ತ್ರೀ ಸಂವೇದನೆಯನ್ನು ವಿಸ್ತೃತವಾಗಿ ಹೇಳಲಾಗಿದೆ. ಇಂತಹ ಸಂಶೋಧನಾತ್ಮಕ ಕೃತಿಗಳು ಹೆಚ್ಚೆಚ್ಚು ಪ್ರಕಟವಾಗಬೇಕು. ಸಂಶೋಧನಾ ಬರಹಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.
ಲೇಖಕರು ಹಲವು ಬಾರಿ ಕೃತಿಗಳನ್ನು ನಿರ್ಮಿಸಿದರೆ, ಕೆಲವೊಮ್ಮೆ ಕೆಲವು ಕೃತಿಗಳೇ ಲೇಖಕರನ್ನು ನಿರ್ಮಿಸುತ್ತವೆ. ಅಂತಹ ಸಂಶೋಧನಾ ಬರಹಗಳು ಈ ಕೃತಿಯಲ್ಲಿದೆ ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಆರ್. ವಲಿ ಅಭಿಪ್ರಾಯಪಟ್ಟರು.
ಲೇಖಕ ಆರ್ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಮಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ. ಧರಣೇಂದ್ರಯ್ಯ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಬಿ.ಆರ್. ಹೇಮಲತಾ, ಕಚೇರಿ ಅಧೀಕ್ಷಕ ಪಿ.ಎನ್. ನರಸಿಂಹಮೂರ್ತಿ ಮಾತನಾಡಿದರು.
ಉಪನ್ಯಾಸಕರಾದ ರೇಖಾ ಕಾರ್ಯಕ್ರಮ ನಿರೂಪಿಸಿ, ದಯಾನಂದ ಸ್ವಾಗತಿಸಿ, ಸಿ.ಆರ್. ತಿಪ್ಪೇಸ್ವಾಮಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.