
ಹಿರಿಯೂರು: ಐದಾರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹೊಲದಲ್ಲಿ ಕೊಯ್ಲು ಮಾಡಿದ್ದ ಈರುಳ್ಳಿ ಕೊಳೆಯತೊಡಗಿದೆ. ಇದರಿಂದ ಬೇಸತ್ತ ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿಯ ರೈತರೊಬ್ಬರು ಈರುಳ್ಳಿ ರಾಶಿಗೆ ಕುರಿಗಳನ್ನು ಬಿಟ್ಟು ಮೇಯಿಸಿದ್ದಾರೆ.
ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಈರುಳ್ಳಿಯ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಈರುಳ್ಳಿ ಕತ್ತರಿಸುವಾಗ ಬರಬೇಕಿದ್ದ ಕಣ್ಣೀರು ಮಾರುಕಟ್ಟೆಗೆ ಒಯ್ಯುವ ಮೊದಲೇ ಸುರಿಯುತ್ತಿದೆ.
‘ಮೂರು ಎಕರೆಯಲ್ಲಿ ಪ್ರತಿ ಎಕರೆಗೆ ₹ 50,000ರಿಂದ ₹ 60,000 ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇನೆ. ಈ ಬಾರಿ ಎಕರೆಗೆ 115ರಿಂದ 120 ಚೀಲ ಇಳುವರಿ ಬಂದಿದೆ. ಆದರೆ, ಮಳೆಗೆ ತೊಯ್ದಿರುವ ಈರುಳ್ಳಿಯನ್ನು ಕೆ.ಜಿ.ಗೆ ₹ 3ರಿಂದ ₹10 ರೂಪಾಯಿಗೆ ಕೇಳುತ್ತಿರುವುದು ನಷ್ಟಕ್ಕೆ ದಾರಿ ಮಾಡಿದೆ’ ಎಂದು ರೈತ ಎಸ್.ಆರ್. ಕೃಷ್ಣಪ್ಪ ತಿಳಿಸಿದರು.
‘ದಸರಾ– ದೀಪಾವಳಿ ಹಬ್ಬದ ಸಮಯಕ್ಕೆ ಈರುಳ್ಳಿ ಕೊಯ್ಲಿಗೆ ಬರುತ್ತದೆ. ಉತ್ತಮ ದರ ಸಿಗುತ್ತದೆ ಎಂಬ ಕನಸಿತ್ತು. ಐದಾರು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಬದುಕು ಮೂರಾಬಟ್ಟೆಯಾಗಿದೆ. 3 ಎಕರೆಗೆ 350 ಚೀಲ ಈರುಳ್ಳಿ (60–65 ಕೆ.ಜಿ ತೂಕದ) ಬಂದಿದೆ. ಹಿರಿಯೂರಿಗೆ ಒಯ್ದರೆ ಚೀಲವೊಂದಕ್ಕೆ ₹ 150ರಿಂದ ₹ 400ಕ್ಕೆ ಕೇಳುತ್ತಿದ್ದಾರೆ. ಇಷ್ಟು ಕಡಿಮೆ ದರಕ್ಕೆ ಕೊಟ್ಟರೆ ಬಾಡಿಗೆ ಹಣವೂ ಕೈಗೆ ಬರುವುದಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.
ಈರುಳ್ಳಿಯಂತೂ ರೈತರ ಪಾಲಿಗೆ ಜೂಜು ಇದ್ದಂತೆ. ಬೆಳೆ ಚೆನ್ನಾಗಿ ಬಂದು ದರ ಸಿಕ್ಕರೆ ಲಾಭ. ಇಲ್ಲವಾದರೆ ಬದುಕು ಬೀದಿಗೆ ಬಿದ್ದಂತೆ. ಮಳೆಯ ಅಭಾವ, ಕೊಳವೆ ಬಾವಿಗಳಲ್ಲಿ ಅಲ್ಪಸ್ವಲ್ಪ ಜಿನುಗುವ ನೀರು, ದುಬಾರಿ ಬೀಜ, ಗೊಬ್ಬರ, ಕೂಲಿ, ಇದು ಸಾಲದು ಎಂಬಂತೆ ಬೆಳೆಗೆ ಬೀಳುವ ರೋಗ, ಇಂತಹ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆ ತೆಗೆದರೆ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕೆ.ಜಿ ಈರುಳ್ಳಿಗೆ ಕನಿಷ್ಠ ₹ 15 ಬೆಲೆ ಸಿಕ್ಕರೂ ಹಾಕಿದ ಬಂಡವಾಳ ಮರಳಿ ಬರುತ್ತದೆ. ಆದರೆ, ಒಂದೂವರೆ, ಎರಡು ರೂಪಾಯಿಗೆ ಕೇಳಿದರೆ ನಮ್ಮ ಪರಿಸ್ಥಿತಿ ಹೇಗಿರುತ್ತದೆ’ ಎಂದು ಅವರು ನೋವು ಹೇಳಿಕೊಂಡರು.
ಈರುಳ್ಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ನಿರಂತರ ಮಳೆ; ರಾಗಿ ಈರುಳ್ಳಿ ಬೆಳೆ ಹಾನಿ
ಹೊಸದುರ್ಗ: ತಾಲ್ಲೂಕಿನಾದ್ಯಂತ 10 ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಕಮರುತ್ತಿವೆ. ರಾಗಿ ಮತ್ತು ಈರುಳ್ಳಿ ನೆಲಕ್ಕುರುಳಿದೆ. ಜಮೀನುಗಳಲ್ಲಿ ನೀರು ನಿಂತು ತೇವಾಂಶ ಅಧಿಕವಾಗಿದೆ. ಅತಿ ಹೆಚ್ಚು ರಾಗಿ ಬೆಳೆಯುವ ತಾಲ್ಲೂಕು ಹೊಸದುರ್ಗ. ಈ ಬಾರಿ ಸಮಯಕ್ಕೆ ಸರಿಯಾಗಿ ಸುರಿದ ಮಳೆಯಿಂದಾಗಿ ರಾಗಿ ಉತ್ಕೃಷ್ಟವಾಗಿ ಬೆಳೆದಿತ್ತು. ಇನ್ನೇನು ಕಟಾವು ಮಾಡಿ ಖರೀದಿ ಕೇಂದ್ರಕ್ಕೆ ರಾಗಿ ಸಾಗಿಸಬೇಕು ಎನ್ನುವಷ್ಟರಲ್ಲಿ ಬೆಳೆ ಕೈಗೆ ಸಿಗದಾಗಿದೆ. ಜೂನ್ ತಿಂಗಳ ಮೊದಲ ವಾರ ಬಿತ್ತನೆಯಾಗಿದ್ದ ರಾಗಿ ಬೆಳೆ ಕಟಾವಾಗಿ ಬಂದಿತ್ತು. ರೈತರು ದೀಪಾವಳಿ ನಂತರ ಕೊಯ್ಲಿಗೆ ಸಿದ್ಧತೆ ಮಾಡಿಕೊಂಡಿದ್ದರು. ಸತತ ಮಳೆಯಿಂದಾಗಿ ರಾಗಿ ನೆಲಕಚ್ಚಿದೆ.
‘₹ 30000ದಿಂದ ₹ 40000 ವ್ಯಯಿಸಿ 2 ಎಕರೆ ಭೂಮಿಯಲ್ಲಿ ರಾಗಿ ಬೆಳೆದಿದ್ದೆ ಈ ಬಾರಿ ಉತ್ತಮ ಇಳುವರಿ ಬರುವ ನಿರೀಕ್ಷೆಯಿತ್ತು. ಸದ್ಯ ಸುರಿದ ನಿರಂತರ ಮಳೆಯಿಂದಾಗಿ ರಾಗಿ ನೆಲಕಚ್ಚಿದೆ. ಏನು ಮಾಡಬೇಕೆಂದು ತೋಚದಂತಾಗಿದೆ. ಈ ಹಿಂದೆ ಮಳೆ ಹೋಗಿ ಬೆಳೆ ನಷ್ಟ ಆಯಿತು. ಈಗ ಅಧಿಕ ಮಳೆಯಾಗಿ ಬೆಳೆ ನಷ್ಟ ಆಗುತ್ತಿದೆ. ರೈತರ ಸಂಕಷ್ಟ ಎಂದಿಗೂ ತಪ್ಪಲ್ಲ’ ಎಂದು ಕುಂದೂರು ಗೊಲ್ಲರಹಟ್ಟಿ ಗ್ರಾಮದ ರೈತ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.