ಚಿತ್ರದುರ್ಗ: ನಾಯಕನಹಟ್ಟಿ ಕ್ಷೇತ್ರದಲ್ಲಿ ಜ. 21, 22ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಲಾಂಛನ ಅನಾವರಣಗೊಳಿಸಿ ಮಾತನಾಡಿದರು.
‘ನಾಡು, ನುಡಿಗಾಗಿ ಸಮಯವನ್ನು ಮೀಸಲಿರಿಸುವುದು ಅಗತ್ಯವಾಗಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳ ನಾಯಕನಹಟ್ಟಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಕನ್ನಡ ಭಾಷೆಗೆ ತನ್ನದೇ ಆದ ಅಸ್ತಿತ್ವವಿದೆ.
ಸಮ್ಮೇಳನಗಳಿಂದ ಜನರು ಜಾಗೃತಗೊಳ್ಳುತ್ತಾರೆ’ ಎಂದು ತಿಳಿಸಿದರು.
‘ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಾವೇರಿ ಸಮ್ಮೇಳನ ಮಾದರಿಯಲ್ಲಿ ಲಾಂಛನ ಮೂಡಿ ಬಂದಿದೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ರಥ, ಹಟ್ಟಿಮಲ್ಲಪ್ಪನಾಯಕರ ಭಾವಚಿತ್ರವಿದೆ. ಜತೆಗೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ತಿಪ್ಪೇರುದ್ರಸ್ವಾಮಿಯವರ ನುಡಿಯನ್ನು ಉಲ್ಲೇಖಿಸಲಾಗಿದೆ. ಹೊಸ ಗುಡ್ಡದ ರಾಮಲಿಂಗೇಶ್ವರ ದೇವಾಲಯವನ್ನು ವಿಶೇಷವಾಗಿ ಬಳಸಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ಡಯಟ್ ಉಪನ್ಯಾಸಕ ಆರ್.ನಾಗರಾಜ್, ಪರಿಷತ್ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಸಿ.ಲೋಕೇಶ್, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಮಳಲಿ, ವಿ.ಧನಂಜಯ್, ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಗೌಡಗೆರೆ, ಪತ್ರಕರ್ತರಾದ ಲಕ್ಷ್ಮಣ್, ನರೇನಹಳ್ಳಿ ಅರುಣ್ ಕುಮಾರ್, ಟಿ.ಕೆ.ಬಸವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.