
ನಾಯಕನಹಟ್ಟಿ: 19ನೇ ಶತಮಾನದಲ್ಲಿ ಬಹಿಷ್ಕೃತ ಮತ್ತು ಸಂಪ್ರದಾಯಸ್ಥ ಸಮಾಜದ ಎದರು ಮಹಿಳೆಯರಿಗೆ ಶಿಕ್ಷಣ ನೀಡಿದ್ದು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಾಯಕನಹಟ್ಟಿ ಹೋಬಳಿ ಶಿಕ್ಷಕರ ಬಳಗದಿಂದ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಕು ಎಂದು ತನ್ನ ಜೀವನವನ್ನೂ ಲೆಕ್ಕಿಸಿದೇ ಹಗಲಿರುಳು ಶ್ರಮಿಸಿದ ಧೀಮಂತೆ ಸಾವಿತ್ರಿಬಾಯಿ ಫುಲೆ. ಇಂದು ಅವರ ಜೀವನ ಯಶೋಗಾಥೆಯನ್ನು ಮೆಲುಕು ಹಾಕಬೇಕಾಗಿದೆ ಎಂದರು.
ಇಂದು ಮಹಿಳಾ ಶಿಕ್ಷಣ ಉತ್ತುಂಗದಲ್ಲಿದೆಯೆಂದರೆ ಅದರ ಮೂಲ ಬೇರು ಸಾವಿತ್ರಿಬಾಯಿ ಫುಲೆ. ಅವರ ಶ್ರಮದಿಂದ ಇಂದು ಎಲ್ಲಾ ರಂಗದಲ್ಲಿಯೂ ಪುರಷರಿಗೆ ಸರಿ ಸಮಾನವಾಗಿ ಮಹಿಳೆಯರು ನಿಂತಿದ್ದಾರೆ. ಒಂದು ಸಮಾಜ ನಾಗರಿಕತೆಯತ್ತ ಸಾಗಿದೆಯೆಂದರೆ ಅಲ್ಲಿ ಶಿಕ್ಷಣ ಉತ್ತಮವಾಗಿದೆ ಎಂದರ್ಥ. ಹಾಗಾಗಿ ಫುಲೆ ದಂಪತಿಗಳ ಸ್ಮರಣೆ ಮಾಡುವುದು ಶಿಕ್ಷಕರಾದ ನಮ್ಮ ಆದ್ಯ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ತಿಳಿಸಿದರು.
ಚಿತ್ರದುರ್ಗ ಕಲಾ ಕಾಲೇಜಿನ ಪ್ರಾಧ್ಯಾಪಕಿ ಲೀಲಾವತಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುಬಾಬು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಟಿ. ವೀರೇಶ್ ಮಾತನಾಡಿದರು.
ನಾಯಕನಹಟ್ಟಿ ಪ.ಪಂ. ಅಧ್ಯಕ್ಷೆ ಟಿ. ಮಂಜುಳಾ, ಶಿಕ್ಷಕರ ಬಳಗದ ಅಧ್ಯಕ್ಷ ಬಿ.ಎಚ್. ತಿಪ್ಪೇರುದ್ರಪ್ಪ, ಪದಾಧಿಕಾರಿಗಳಾದ ಪಿ.ಎಂ. ವಿಶ್ವನಾಥ್, ಹನುಮಂತಪ್ಪ, ಅಶೋಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಜಯಮ್ಮ, ಸದಾಶಿವಯ್ಯ, ಶಾಂತಕುಮಾರಿ, ಹನುಮಂತಪ್ಪ, ಅಕ್ಷರ ದಾಸೋಹದ ನಿರ್ದೇಶಕರಾದ ಮಂಜುನಾಥಸ್ವಾಮಿ, ಶಿಕ್ಷಣ ಸಂಯೋಜಕರಾದ ತಿಪ್ಪೇಸ್ವಾಮಿ, ಶಿವಪ್ಪ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.