ADVERTISEMENT

ಚಿತ್ರದುರ್ಗ: ಉತ್ಸಾಹದಿಂದ ತರಗತಿ ಪ್ರವೇಶಿಸಿದ ಮಕ್ಕಳು

ಎರಡು ಡೋಸ್‌ ಲಸಿಕೆ ಪಡೆದ 3,500 ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 2:49 IST
Last Updated 7 ಸೆಪ್ಟೆಂಬರ್ 2021, 2:49 IST
ಸೋಮವಾರ ಶಾಲೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆಯ ಶಿಕ್ಷಕಿಯರು ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದರು.
ಸೋಮವಾರ ಶಾಲೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆಯ ಶಿಕ್ಷಕಿಯರು ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದರು.   

ಚಿತ್ರದುರ್ಗ: ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಹಲವು ತಿಂಗಳಿಂದ ಮನೆಯಿಂದಲೇ ಶಿಕ್ಷಣ ಪಡೆಯುತ್ತಿದ್ದ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಭೌತಿಕ ತರಗತಿಗಳು ಆರಂಭವಾದವು.

ಮಕ್ಕಳು ಉತ್ಸಾಹದಿಂದಲೇ ತರಗತಿಗೆ ಹಾಜರಾದರು. ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಗುಲಾಬಿ ಹೂ ನೀಡಿ ಶಾಲೆಗೆ ಬರಮಾಡಿಕೊಂಡರು. ಶಾಲೆಗೆ ಮಕ್ಕಳು ಬಂದಿದ್ದರಿಂದ ಶಿಕ್ಷಕರು ಮಂದಹಾಸ ಬೀರಿದರು. ಸರ್ಕಾರದ ನಿರ್ದೇಶನದಲ್ಲಿ ಎರಡು ದಿನ ಮೊದಲೇ ಶಾಲೆಗಳನ್ನು ಸ್ಯಾನಿಟೈಸ್‌ ಮಾಡಲಾಗಿತ್ತು.

ಕೋವಿಡ್‌ ನಿಯಮದ ಅನುಸಾರವಾಗಿ ಮಕ್ಕಳಿಗೆ ಪ್ರವೇಶಾವಕಾಶ ನೀಡಲಾಯಿತು. ಅಂತರ ಕಾಯ್ದುಕೊಳ್ಳಲು ಅಂಗಳದಲ್ಲಿ ಹಾಕಿದ್ದ ವೃತ್ತಾಕಾರದ ಗೆರೆಯಲ್ಲಿ ಮಕ್ಕಳು ಕಾಯುತ್ತಿದ್ದರು. ಸರಿಯಾಗಿ ಮಾಸ್ಕ್‌ ಧರಿಸುವಂತೆ ಸೂಚಿಸಿದ ಶಿಕ್ಷಕರು ಕೈಗಳಿಗೆ ಸ್ಯಾನಿಟೈಸರ್‌ ಹಾಕಿ ಶುಚಿಗೊಳಿಸಿಕೊಳ್ಳಲು ಹೇಳಿದರು. ಥರ್ಮಲ್‌ ಸ್ಕ್ಯಾನರ್‌ ಮೂಲಕ ಪ್ರತಿಯೊಬ್ಬರ ದೇಹದ ಉಷ್ಣಾಂಶವನ್ನು ಪರೀಕ್ಷಿಸಿದರು.

ADVERTISEMENT

6ರಿಂದ 8ನೇ ತರಗತಿಗೆ ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದಾರೆ. ಪ್ರತಿ ಡೆಸ್ಕ್‌ನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಎರಡು ಡೋಸ್‌ ಲಸಿಕೆ ಪಡೆದ 3,500 ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿತ್ತು.

‘ಸರ್ಕಾರದ ಸೂಚನೆಯ ಪ್ರಕಾರ ಶಾಲೆಗಳನ್ನು ಶುಚಿಗೊಳಿಸಲಾಗಿದೆ. ಆರು ತಾಲ್ಲೂಕಿನ ಬಿಇಒ ಶಾಲೆಗಳ ಮೇಲೆ ನಿಗಾ ಇಟ್ಟಿದ್ದಾರೆ. ಬಿಸಿಯೂಟ ತಯಾರಿಸುವ ಸಿಬ್ಬಂದಿಯಿಂದ ಮಕ್ಕಳಿಗೆ ಬಿಸಿನೀರು ಪೂರೈಕೆ ಮಾಡಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದು ಡಿಡಿಪಿಐ ಕೆ.ರವಿಶಂಕರರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.