ADVERTISEMENT

ಚಿತ್ರದುರ್ಗ | ಸಹವಾಸ ದೋಷ; ಹಾಳಾಗುತ್ತಿರುವ ವಿದ್ಯಾರ್ಥಿಗಳು: ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 7:06 IST
Last Updated 8 ಫೆಬ್ರುವರಿ 2026, 7:06 IST
ಗಾರೆಹಟ್ಟಿಯ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೂಡುಗೆ ಸಮಾರಂಭವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು
ಗಾರೆಹಟ್ಟಿಯ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೂಡುಗೆ ಸಮಾರಂಭವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು   

ಚಿತ್ರದುರ್ಗ: ‘ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ, ಸಹವಾಸ ದೋಷದಿಂದ ಹಾಳಾಗುತ್ತಿದ್ದಾರೆ. ಆ ಮೂಲಕ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

ಚಿತ್ರದುರ್ಗ ನಗರದ ಗಾರೆಹಟ್ಟಿಯ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಜಾಲತಾಣಗಳ ಯುಗದಲ್ಲಿ ಯುವಜನ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಾರ್‌ನಲ್ಲಿ ಕುಡಿದರೆ ಬೇರೆಯವರಿಗೆ ಗೊತ್ತಾಗುತ್ತದೆ ಎಂದು ಪಾರ್ಸೆಲ್‌ ತರಿಸಿಕೊಂಡು ಹೊಲಗಳಲ್ಲಿ ಕುಡಿಯುತ್ತಿದ್ದಾರೆ. ವಿದ್ಯಾರ್ಥಿಗಳು 25 ವರ್ಷ ಕಷ್ಟಪಟ್ಟರೆ ಮುಂದಿನ 75 ವರ್ಷ ಉತ್ತಮವಾದ ಬದುಕನ್ನು ನಡೆಸಬಹುದು. ಆದರೆ ಈಗ ವಿದ್ಯಾರ್ಥಿ ಜೀವನವನ್ನು ಜಾಲಿಯಾಗಿ ಕಳೆದರೆ ಮುಂದಿನ ಜೀವನ ಕಷ್ಟಕರವಾಗಿರುತ್ತದೆ’ ಎಂದು ತಿಳಿಸಿದರು.

ADVERTISEMENT

‘ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಬದುಕಿನ ಗುರಿಯನ್ನು ನಿರ್ಧಾರ ಮಾಡಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಮೋಜು, ಮಸ್ತಿ, ಆಟ, ವಿಲಾಸಿ ಜೀವನದಲ್ಲಿ ಕಳೆದರೆ ಮುಂದಿನ ದಿನ ಬಹಳ ಕಷ್ಟವಾಗುತ್ತದೆ. ತಂದೆ–ತಾಯಿಗಳಿಂದ ಪಡೆದ ಹಣವನ್ನು ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ತ್ಯಜಿಸಿ ಪುಸ್ತಕ ಹಿಡಿಯುವಂತಾಗಬೇಕು’ ಎಂದರು.

‘ಅಕ್ಷರ ಕಲಿತರೆ ಅದು ಸಮಾಜದಲ್ಲಿ ಗೌರವದಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಕ್ಷರ ಜ್ಞಾನ ಶಾಶ್ವತವಾದುದು. ಉತ್ತಮ ಕಾರ್ಯಕ್ರಮದಲ್ಲಿ ಭಾಷಣ ಕೇಳುವುದರಿಂದ 10 ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಮುಂದೆ ಉನ್ನತವಾದ ಸ್ಥಾನದಲ್ಲಿದ್ದಾಗ ತಂದೆ–ತಾಯಂದಿರಿಗೆ, ಕಲಿಸಿದ ಗುರುಗಳಿಗೆ ಕೀರ್ತಿ ತಂದಂತಾಗುತ್ತದೆ’ ಎಂದು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ. ರಾಜೇಶ್ ತಿಳಿಸಿದರು.

‘ವಿದ್ಯಾರ್ಥಿಗಳು ಸೋಮಾರಿಗಳಾಗಬಾರದು. ಸದಾ ಚಟುವಟಿಕೆಯಿಂದ ಇರಬೇಕು. ಸೋಮಾರಿತನ ಮಾನವನ ಶತ್ರು. ಕಠಿಣವಾದ ಪರಿಶ್ರಮದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯವಿದೆ’ ಎಂದು ಎಸ್‌ಜೆಎಂ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಿಪ್ಪೇಸ್ವಾಮಿ ಎನ್.ಬಿ. ಹೇಳಿದರು.

ಕಾರ್ಯಕ್ರಮದಲ್ಲಿ ಸೇಂಟ್ ಮೇರಿಸ್ ಬಿ.ಇಡ್. ಕಾಲೇಜು ಪ್ರಾಂಶುಪಾಲ ಸಂದೀಪ್, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪುಷ್ಪವಲ್ಲಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭೈರೇಶ ಪ್ರೀತಿ, ಸಹ ಕಾರ್ಯದರ್ಶಿ ಅರ್ಚನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.